ಎಚ್.ಡಿ.ಕೋಟೆ: ರಾಜಕೀಯ ಎಂಬುದು ಬಹಳ ದೊಡ್ಡಶಕ್ತಿ. ಸಂವಿಧಾನದ ಮೂಲಕ ನಾಯಕರನ್ನು ಆಯ್ಕೆ ಮಾಡುವ ಹಕ್ಕನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ್ದಾರೆ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಎಚ್.ಡಿ.ಕೋಟೆ, ಸರಗೂರು ತಾಲೂಕು ಆಡಳಿತ ಹಾಗೂ ಎಚ್.ಡಿ.ಕೋಟೆ, ಸರಗೂರು ತಾಲೂಕು ಕುಳುವ ಮಹಾ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶರಣ ಶ್ರೀ ನುಲಿಯ ಚಂದಯ್ಯ ಅವರ 917ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಣ ನುಲಿಯ ಚಂದಯ್ಯ ಅವರ ಆಶೀರ್ವಾದದಿಂದ ನಾವೆಲ್ಲರೂ ಇಂದು ಒಂದಾಗಿ ಸೇರಿ ಈ ವೇದಿಕೆಯನ್ನು ಸದ್ಬಳಕೆ ಮಾಡಿಕೊಂಡು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಬೇಕು ಎಂದು ಕರೆ ನೀಡಿದರು.
ಅಲೆಮಾರಿ ಸಮುದಾಯಗಳಿಗೆ ಇಲ್ಲಿಯವರೆಗೆ ಬೆರಳಣಿಕೆಯಷ್ಟು ಮಾತ್ರ ರಾಜಕೀಯ ಪ್ರಾತಿನಿಧ್ಯ ನೀಡಲಾಗಿದೆ. ಡಿ.ದೇವರಾಜ ಅರಸು ಅವರ ನಂತರ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತಿರುವವರು ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಶ್ಲಾಘಿಸಿದರು.
ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಆದರೆ ಮುಖ್ಯವಾಹಿನಿಗೆ ಬರಲು ನಾವೆಲ್ಲರೂ ಒಟ್ಟಾಗಬೇಕು. ಸರ್ಕಾರಿ ಸಾಲ-ಸೌಲಭ್ಯದ ಮಾಹಿತಿ ಪಡೆದು ಸ್ವಾವಲಂಬನೆ ಸಾಧಿಸುವಷ್ಟು ಶಿಕ್ಷಣ ಜ್ಞಾನ ಪಡೆದುಕೊಳ್ಳಬೇಕು. ಹಾಗೆಯೇ ಅಲೆಮಾರಿ ಸಮುದಾಯಗಳ ಪರವಾಗಿ ಪ್ರಾಮಾಣಿಕ ಸೇವೆ ಮಾಡುವ ಮೂಲಕ ಶ್ರಮಿಸುವುದಾಗಿ ಭರವಸೆ ನೀಡಿದರು.
ಜಿಲ್ಲೆಯಲ್ಲಿ ಅಲೆಮಾರಿ ಸಮುದಾಯಗಳಿಗೆ ನೆಲೆ ಇಲ್ಲ. ನೆಲೆ ಇಲ್ಲದ ಅಲೆಮಾರಿ ಸಮುದಾಯಗಳಿಗೆ ನಿವೇಶನ ಕೊಡುವ ನಿಟ್ಟಿನಲ್ಲಿ ಆಡಳಿತ ಸಿಬ್ಬಂದಿ ಕೆಲಸ ಮಾಡಬೇಕು.
ಸರ್ಕಾರಿ ಜಾಗ ಇಲ್ಲದಿದ್ದರೂ ಖಾಸಗಿ ಜಾಗ ಖರೀದಿಸಿ ಕೊಡಲು ಅವಕಾಶ ಇದೆ. ನಿಗಮದಿಂದ ಮನೆಕಟ್ಟಲು 2 ಲಕ್ಷ ರೂ.ಅನುದಾನ ನೀಡಲಾಗುವುದು. ಹತ್ತಾರು ಸಾಲ-ಸೌಲಭ್ಯಗಳಿವೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಶರಣ ಶ್ರೀ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಶಾಸಕ ಅನಿಲ್ ಕುಮಾರ್, ಒಗ್ಗೂಡಿದರೆ ಮಾತ್ರ ಸಮುದಾಯಕ್ಕೆ ಶಕ್ತಿ ಬರಲು ಸಾಧ್ಯ. ಮುಂದಿನ ದಿನಗಳಲ್ಲಿ ಅಲೆಮಾರಿ ಕೊರಮ ಸಮುದಾಯದವರಿಗೆ ಎಲ್ಲ ಕ್ಷೇತ್ರದಲ್ಲೂ ಅದರಲ್ಲೂ ರಾಜಕೀಯ ಸ್ಥಾನಮಾನ ದೊರೆಯಲಿ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಬೇರೆ ಯಾವ ಮುಖ್ಯಮಂತ್ರಿ ಕೂಡ ಹಾಡಿಗಳಿಗೆ ಹೊಗಿಲ್ಲ. ಸಣ್ಣ ಸಮುದಾಯಗಳನ್ನು ಮೇಲೆತ್ತುವ ನಿಟ್ಟಿನಲ್ಲಿ ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪಿಸುವ ಮುಲಕ ಆರ್ಥಿಕ ಸ್ವಾವಲಂಬನೆಗೆ ಬುನಾದಿ ಹಾಕಿಕೊಟ್ಟಿದ್ದಾರೆ ಎಂದರು.
ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆ ವಿಚಾರದಲ್ಲಿದ್ದ ಅಡೆ-ತಡೆ ನುಲಿಯ ಚಂದಯ್ಯರ ಜಯಂತಿಯಿಂದಾಗಿ ನಿವಾರಣೆಯಾಗಿದೆ. ಭಗವಾನ್ ಬುದ್ಧ ಬಿಟ್ಟರೆ ಶರಣರು ಮಾತ್ರ ನುಡಿದಂತೆ ನಡೆದವರು. ವಚನಗಳ ಸಾಹಿತ್ಯ ಚಳವಳಿ ಕಾಯಕವನ್ನು ಮಾಡಿ ಜೀವನ ನಡೆಸುವವರ ಚಳವಳಿಯಾಗಿದೆ. ಮೈಸೂರು ಜಿಲ್ಲೆ ಮೊದಲ ಬಾರಿ ಮೀಸಲಾತಿ ಪಡೆದ ಜಿಲ್ಲೆ ಎಂದರು.
ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಹಾಗೂ ಮೈಸೂರು ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಕೊರಮ, ಕೊರಚ ಸಮುದಾಯದವರಿದ್ದೇವೆ. ಇಷ್ಟು ಸಂಖ್ಯೆಯಲ್ಲಿರುವ ಸಮುದಾಯದ ಸ್ವಾವಲಂಬನೆಗಾಗಿ ಮಾಜಿ ಶಾಸಕರಾದ ದಿವಂಗತ ಸುಶೀಲಮ್ಮ ಚೆಲುವರಾಜ್ ಅವರ ಸ್ಮರಣಾರ್ಥ ಸಮುದಾಯ ಭವನದ ಅಗತ್ಯವಿದ್ದು, ತಿಂಗಳೊಳಗೆ ಕನಿಷ್ಠ 2 ಎಕರೆ ಜಾಗ ಗುರ್ತಿಸಿ ನೀಡಬೇಕು ಎಂದು ಮನವಿ ಮಾಡಿದರು.
ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಸಂಘದ ಅಧ್ಯಕ್ಷ ಟಿ.ಪುರುಷೋತ್ತಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಚ್.ಡಿ.ಕೋಟೆ ತಹಸೀಲ್ದಾರ್ ಶ್ರೀನಿವಾಸ್, ಆರಕ್ಷಕ ನಿರೀಕ್ಷಕ ಬಿ.ಜಿ.ಕುಮಾರ್, ಪುರಸಭೆ ಆಡಳಿತಾಧಿಕಾರಿ ಮುತ್ತುರಾಜ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಆನಂದ್ ಕುಮಾರ್ ಏಕಲವ್ಯ, ಮೈಸೂರು ಜಿಲ್ಲಾ ಕುಳುವ ಮಹಾಸಂಘದ ಅಧ್ಯಕ್ಷ ಡಿ.ಎನ್.ಮುತ್ತುರಾಜ್, ಉಪಾಧ್ಯಕ್ಷರಾದ ಪುಟ್ಟಸ್ವಾಮಿ, ಶಿವರಾಜು, ಮಹೇಂದ್ರ, ಸಿ.ರಾಜು, ಪ್ರಧಾನ ಕಾರ್ಯದರ್ಶಿ ಮೋಹನ್ ಕಾಯಕ, ಜಂಟಿ ಕಾರ್ಯದರ್ಶಿ ಮೋಹನ್ ಕಾಯಕ, ಸಂಘಟನಾ ಕಾರ್ಯದರ್ಶಿಗಳಾದ ಕೃಷ್ಣಪ್ಪ, ರಂಗಸಮುದ್ರ ಸೋಮಣ್ಣ, ಹಾರೊಹಳ್ಳಿ ರಾಮಕೃಷ್ಞ, ತಾಲೂಕು ಕುಳುವ ಮಹಾಸಂಘದ ಪದಾಧಿಕಾರಿಗಳು ಇದ್ದರು.