ಹುಬ್ಬಳ್ಳಿ: ಓದುವ ಪರಂಪರೆ ಕಡಿಮೆಯಾಗುತ್ತಿರುವ ಇತ್ತೀಚಿನ ದಿನಮಾನಗಳಲ್ಲಿ ತಮ್ಮ ಕವಿತೆಗಳ ಮೂಲಕ ಓದುಗರನ್ನು ಸೃಷ್ಟಿಸುವ ಹೊಸ ಜವಾಬ್ದಾರಿಯೂ ಇಂದಿನ ಕವಿಗಳ ಮೇಲಿದೆ ಎಂದು ಹಿರಿಯ ಸಾಹಿತಿ ಜೋಗಿ ಅಭಿಪ್ರಾಯಪಟ್ಟರು.
ನಗರದ ಡಾ. ಡಿ.ಎಸ್. ರ್ಕ ಸಾಹಿತ್ಯ ವೇದಿಕೆ ಟ್ರಸ್ಟ್, ಜಗದೀಶ ಶೆಟ್ಟರ್ ದತ್ತಿ ಆಶ್ರಯದಲ್ಲಿ ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ. ಡಿ.ಎಸ್. ರ್ಕ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಒಳ್ಳೆಯ ಓದುಗರು ಇದ್ದಾಗ ಕವಿ ಕೂಡ ಅಲ್ಲಿ ಹುಟ್ಟಿಕೊಳ್ಳುತ್ತಾನೆ. ಕಾವ್ಯ ಜೀವನಕ್ಕೆ ನಿಷ್ಠರಾಗುವ ಮೂಲಕ ಕವಿಗಳಾದವರು ನಿರಂತರ ಕಾವ್ಯದ ಹುಡುಕಾಟದಲ್ಲಿ ತೊಡಗಿರಬೇಕು. ಸಹ ಕವಿಗಳ ಕವಿತೆಗಳನ್ನು ಓದಬೇಕು ಎಂದು ಸಲಹೆ ನೀಡಿದರು.
ತೀರ್ಪಗಾರರ ಪರವಾಗಿ ಮಾತನಾಡಿದ ಶಾಮಸುಂದರ ಬಿದರಕುಂದಿ, ಪ್ರಶಸ್ತಿಗಾಗಿ ಬಂದಿದ್ದ ಕವನ ಸಂಕಲಗಳ ಪೈಕಿ ಹಲವರು ವಿಷಯ ವಸ್ತುವನ್ನು ತಮಗೆ ಹೊಳೆದದ್ದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಗಟ್ಟಿತನ ಇರಲಿಲ್ಲ. ಇದರಿಂದ ಇಂದಿನ ಕವಿಗಳು ಮಂಕಾಗಿದ್ದಾರೆ ಎಂದನಿಸಿತು. ಅನೇಕರಲ್ಲಿ ಕಾವ್ಯದ ಅಭ್ಯಾಸ ಕಂಡು ಬರಲಿಲ್ಲ ಎಂದರು.
ಮತ್ತೊಬ್ಬ ತೀರ್ಪಗಾರರಾದ ಚಂದ್ರಶೇಖರ ವಸ್ತ್ರದ ಮಾತನಾಡಿ, ಕವಿಗಳು ಜೀವಂತ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಜೀವ ತುಂಬಿದಾಗ ಕವಿತೆಗೆ ಇಂದಿನ ಕೃತಕ ಬುದ್ಧಿಮತ್ತೆಯ ಕಾಲದಲ್ಲೂ ಶಕ್ತಿ ಬರುತ್ತದೆ ಎಂದು ಹೇಳಿದರು.
ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಶಸ್ತಿ ಪ್ರದಾನ: ಹುಬ್ಬಳ್ಳಿಯ ಹೆಬಸೂರ ರಮಜಾನ್, ನಿರ್ಮಲಾ ಶೆಟ್ಟರ್, ಬೆಳಗಾವಿಯ ಶ್ವೇತಾ ನರಗುಂದ ಹಾಗೂ ಮುಧೋಳದ ಡಾ. ಶಿವಾನಂದ ಕುಬಸದ ಅವರಿಗೆ ಡಾ. ಡಿ.ಎಸ್. ರ್ಕ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕವಿಗಳು ಒಂದೊಂದು ಪದ್ಯ ವಾಚನ ಮಾಡಿದರು.
ಟ್ರಸ್ಟ್ ಉಪಾಧ್ಯಕ್ಷ ಡಾ. ಬಿ.ಎಸ್. ಮಾಳವಾಡ, ಕಾರ್ಯದರ್ಶಿ ಡಾ. ರಾಮು ಮೂಲಗಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಇತರರು ಇದ್ದರು.
ಟ್ರಸ್ಟ್ ಅಧ್ಯಕ್ಷ ಎಂ.ಎ. ಸುಬ್ರಹ್ಮಣ್ಯ ಪ್ರಾಸ್ತಾವಿಕ ಮಾತನಾಡಿದರು. ಕೋಮಲ ನಾಡಿಗೇರ ಹಾಗೂ ತಂಡದವರು ಭಾವಗೀತೆ ಪ್ರಸ್ತುತ ಪಡಿಸಿದರು. ಶಶಿ ಸಾಲಿ ಕಾರ್ಯಕ್ರಮ ನಿರೂಪಿಸಿದರು. ನಂದಾ ಕುಲಕರ್ಣಿ ವಂದಿಸಿದರು.