More

    ಯೋಜನೆ ಅನುಷ್ಠಾನಕ್ಕೆ ಆದ್ಯತೆ

    ಹುಕ್ಕೇರಿ: ತಂದೆ ದಿ.ಉಮೇಶ ಕತ್ತಿ ಅವರು ಹುಕ್ಕೇರಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕೆಲ ಯೋಜನೆಗಳನ್ನು ಮಂಜೂರಾತಿಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರು. ಅವುಗಳನ್ನು ಸಾಕಾರಗೊಳಿಸುವುದೆ ನನ್ನ ಮೊದಲ ಆದ್ಯತೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

    ಪಟ್ಟಣದಲ್ಲಿ ಸೋಮವಾರ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಪಟ್ಟಣದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅಡವಿಸಿದ್ಧೇಶ್ವರ ಮತ್ತು ಶಂಕರಲಿಂಗ ಏತ ನೀರಾವರಿ ಯೋಜನೆಗೆ ಮಂಜೂರಾತಿ ಪಡೆದು ಭೂಮಿಪೂಜೆ ನೇರವೇರಿಸಲಾಗಿದೆ. ಆದಷ್ಟು ಬೇಗ ಅದನ್ನು ಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

    ಹಿಡಕಲ್ ಜಲಾಶಯದ ಬಳಿ ಪ್ರಾರಂಭಿಸಲಾದ ಮೈಸೂರು ಬೃಂದಾವನ ಮಾದರಿಯ ಉದ್ಯಾನ ಕಾಶಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಅದಕ್ಕೆ ಬೇಕಾದ ಮತ್ತಷ್ಟು ಅನುದಾನವನ್ನು ತರಲು ಪ್ರಯತ್ನಿಸುವೆ. ಚಿಕ್ಕಪ್ಪ ರಮೇಶ ಕತ್ತಿ ಸಂಸದರಾಗಿದ್ದಾಗ ಹುಕ್ಕೇರಿ ಹಾಗೂ ಸಂಕೇಶ್ವರ ಪಟ್ಟಣದಲ್ಲಿ ಯುಜಿಡಿ ನಿರ್ಮಿಸಲು ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದಿದ್ದರು. ಯೋಜನೆಗೆ ಬೇಕಾದ ಸ್ಥಳಾವಕಾಶ ಹಾಗೂ ಸೂಕ್ತ ಭೂಮಿ ಹಸ್ತಾಂತರದಿಂದ ಯೋಜನೆ ಅನುಷ್ಠಾನ ವಿಳಂಬವಾಗಿತ್ತು. ಇದೀಗ ಅದನ್ನು ಕಾರ್ಯಗತಗೊಳಿಸಲು ಚಿಕ್ಕಪ್ಪನ ಮಾರ್ಗದರ್ಶನದಂತೆ ಸ್ಥಳೀಯ ಮುಖಂಡರು, ಪುರಸಭೆ ಸದಸ್ಯರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

    ನಂತರ ಅಡವಿಸಿದ್ಧೇಶ್ವರ ಹಾಗೂ ಗುರುಶಾಂತೇಶ್ವರ ಹಿರೇಮಠ, ವಿರಕ್ತಮಠ ಮತ್ತು ಮಾಸಾಪ್ತಿ ದರ್ಗಾ ಸೇರಿ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಇದಕ್ಕೂ ಮೊದಲು ಅಭಿಮಾನಿಗಳು ಸೇಬಿನ ಹಾರ ಹಾಕಿ ಸತ್ಕರಿಸಿದರು. ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ನೂತನ ಶಾಸಕರನ್ನು ಸತ್ಕರಿಸಿ ಮಾತನಾಡಿದರು.

    ಹುಕ್ಕೇರಿ ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಹಿರಾ ಶುಗರ್ಸ್‌ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಜಯಗೌಡ ಪಾಟೀಲ, ಚನ್ನಪ್ಪ ಗಜಬರ, ಪುಟ್ಟು ಖಾಡೆ, ಕುಮಾರ ಜುಠಾಳೆ, ಮಧುಕರ ಕರನಿಂಗ, ನೀಲಪ್ಪ ಕೋಲೆ, ರಾಜು ಚೌಗಲಾ, ಸಿದ್ದು ಬೆನ್ನಾಡಿಕರ, ಮುನ್ನಾ ಕಳಾವಂತ, ಮಿಯಾ ಮೊಕಾಶಿ, ಮಿರ್ಜಾ ಮೋಮಿನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts