ಬೆಳಗಾವಿ: ಕೆಎಸ್ಆರ್ಟಿಸಿ ಹಾಗೂ ಇತರೆ ಸಾರಿಗೆ ಸಂಸ್ಥೆಗಳ ಅಧಿಕಾರಿ ಮತ್ತು ನೌಕರರ ವರ್ಗಕ್ಕೆ ಪಿಂಚಣಿ, ಆರೋಗ್ಯ ವಿಮೆ ಮಂಜೂರು ಮಾಡುವಂತೆ ಆಗ್ರಹಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರು ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಬೆಳಗಾವಿ ವಿಭಾಗ, ಸಾರಿಗೆ ಸಂಸ್ಥೆ ನೌಕರರು, ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಮಹಾಮಂಡಳಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಪ್ರಶಸ್ತಿಗಳನ್ನು ಪಡೆದಿವೆ. ಅತಿ ಕಡಿಮೆ ಅಪಘಾತ ಮತ್ತು ಅತಿ ಹೆಚ್ಚು ಮೈಲೇಜ್ ಹಾಗೂ ಅತ್ಯುತ್ತಮ ಸೇವೆಯಲ್ಲಿ ದಾಖಲೆ ಬರೆದಿವೆ. ಈ ಎಲ್ಲ ಸಾಧನೆಗೆ ಸಾರಿಗೆ ಸಚಿವಾಲಯದ ಮುತ್ಸದ್ದಿತನ, ಅಧಿಕಾರಿಗಳ ಜಾಣ್ಮೆ ಹಾಗೂ ಕಾರ್ಮಿಕರ ನಿರಂತರ ಪರಿಶ್ರಮವೆ ಕಾರಣವಾಗಿದೆ.
ನಮ್ಮ ದೇಶದ ಇತರೆ ಸಾರಿಗೆ ಸಂಸ್ಥೆಗಳಿಗಿಂತ ಕರ್ನಾಟಕ ಸಾರಿಗೆ ನಿಗಮಗಳಲ್ಲಿಯೇ ಹೆಚ್ಚು ಕೆಲಸದ ಅವಧಿ ಇದೆ. ಆದರೆ, ನಮ್ಮ ನಿಗಮದ ನಿವೃತ್ತ ಅಧಿಕಾರಿ ಮತ್ತು ನೌಕರರಿಗೆ ರಾಜ್ಯ ಸರ್ಕಾರದಿಂದ ಯಾವುದೇ ಪಿಂಚಣಿ ನೀಡಿಲ್ಲ. ಸ್ವಂತ ವಂತಿಕೆಯಲ್ಲಿ ಭವಿಷ್ಯ ನಿಧಿ ಸಂಘಟನೆ ನೀಡುತ್ತಿರುವ ಅತ್ಯಲ್ಪ ಪಿಂಚಣಿಯು ಸಣ್ಣ ಪುಟ್ಟ ಖರ್ಚಿಗೂ ಸಾಲುತ್ತಿಲ್ಲ.
ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಸಾರಿಗೆ ಸಂಸ್ಥೆಗಳಲ್ಲಿ ನೌಕರರಿಗೆ ಪಿಂಚಣಿ ನೀಡಲಾಗುತ್ತಿದೆ. ಅದರಂತೆ ನಮಗೂ ಸೌಲಭ್ಯ ನೀಡಬೇಕು. ಕಲಬುರ್ಗಿಯಲ್ಲಿ ನಡೆದ ಕೆಎಸ್ಆರ್ಟಿಸಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮಹಾ ಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾಸಿಕ 10 ಸಾವಿರ ರೂ. ಕನಿಷ್ಠ ಪಿಂಚಣಿ ಮತ್ತು ಆರೋಗ್ಯ ವಿಮೆ ಸೇರಿ ಹಲವು ಸೌಲಭ್ಯಗಳನ್ನು ಒದಗಿಸಿ ಕೊಡುವುದಾಗಿ ಭರವಸೆ ನೀಡಲಾಗಿತ್ತು. ಹೀಗಾಗಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದೆ.
ಸಾರಿಗೆ ಸಂಸ್ಥೆಗಳ ನಿವೃತ್ತ ನೌಕರರಿಗೆ, ಅವರ ಪತ್ನಿ ಮತ್ತು ಪತಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಲಾಗಿದೆ. ಆದರೆ, ಮೃತ ಹಾಗೂ ನಿವೃತ್ತ ನೌಕರನ ಪತ್ನಿ, ಪತಿಗೆ ಉಚಿತ ಪಾಸ್ ನೀಡುತ್ತಿಲ್ಲ. ನಿವೃತ್ತಿ ಅಂಚಿನಲ್ಲಿದ್ದಾಗ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ರಾಜೀನಾಮೆ ನೀಡಿದ ನೌಕರರಿಗೂ ಪಾಸ್ ನೀಡಬೇಕು ಎಂದು ಮನವಿ ಮಾಡಿದೆ. ಮಂಡಳದ ಉಪಾಧ್ಯಕ್ಷರಾದ ಎಸ್.ಎಸ್.ಮಹಾಜನ, ಎನ್.ಎಂ. ಕೊಟ್ಟುರಮಠ, ವೈ.ಎಸ್.ರಾಮಭದ್ರಯ್ಯ, ಸಹ ಕಾರ್ಯದರ್ಶಿ ಸಿ.ಎಸ್.ಪುರದ, ಎಸ್.ಎನ್.ನಿಂಗನಗೌಡರ, ಆರ್.ಎಸ್.ಸಾಸನೂರ, ಪಿ.ಆರ್.ಕಾಂಬಳೆ, ಎಂ.ಐ.ಮಗದಾಳ ಇತರರು ಇದ್ದರು.