ಮೈಸೂರು: ಯಾವುದೇ ನಿರೀಕ್ಷೆಗಳಿಲ್ಲದೆ ವಿದ್ಯಾರ್ಥಿಗಳ ಯಶಸ್ಸಿಗೋಸ್ಕರ ಉಚಿತ ತರಬೇತಿ ನೀಡುತ್ತಿರುವ ಜ್ಞಾನಬುತ್ತಿ ಸಂಸ್ಥೆಯು ಮಾದರಿಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.
ನಗರದ ಜ್ಞಾನಬುತ್ತಿ ಉಚಿತ ತರಬೇತಿ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಪಿ.ಸಿ ಮತ್ತು ಪಿಎಸ್ಐ ಪರೀಕ್ಷೆಗಳ 45 ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಸಮೂಹ ಸಮಾಜಕ್ಕೂ ತಮಗೂ ಸಂಬಂಧ ಇಲ್ಲ ಎನ್ನುವ ಹಾಗೆ ಬದುಕುತ್ತಿದೆ. ಅಂತಹ ಯುವ ಸಮೂಹದಿಂದ ದೇಶಕ್ಕೆ ನಷ್ಟವಾಗಲಿದೆ. ಹೀಗಾಗಿ ಯುವಕರು ದಾರಿ ತಪ್ಪದೆ ನಿಮ್ಮ ಗುರಿಕಡೆ ಗಮನಹರಿಸಿ ದೇಶಕ್ಕೆ ಸೇವೆ ಮಾಡಿರಿ ಎಂದ ಅವರು ಸಮಾಜದಲ್ಲಿ ಅನವಶ್ಯಕವಾದ ಸ್ಪರ್ಧೆಗಳಿವೆ ಅಲ್ಲೆಲ್ಲ ನೀವು ಸಹ ಭಾಗವಹಿಸಿರುತ್ತೀರಿ. ಅನವಶ್ಯಕವಾದ ಸ್ಪರ್ಧೆಗಳತ್ತ ಮುಖ ಮಾಡದೆ, ನಿರ್ದಿಷ್ಠ ಗುರಿಯತ್ತ ಮುಖಮಾಡಿ ಬದುಕು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.
ಸಂವಿಧಾನದ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳಿ. ಸಮಾಜದ ಗಟ್ಟಿ ಧ್ವನಿಯಾಗಿ ಮಾರ್ಪಾಡುಗೊಳ್ಳಿ. ಪರೀಕ್ಷೆ ಇದ್ದೇ ಇರುತ್ತೆ ಪರೀಕ್ಷೆಗಾಗಿ ಅಧ್ಯಯನ ಮಾಡಬೇಡಿ ನಿಮ್ಮ ಜ್ಞಾನ ವೃದ್ಧಿಸಿಕೊಳ್ಳುವುದಕ್ಕಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ ಎಂದರು.
ಓದುವುದು, ಬರೆಯುವುದು ಇದಿಷ್ಟೆ ಶಿಕ್ಷಣವಲ್ಲ. ಶಿಕ್ಷಣ ಪಡೆದು ಕೆಲಸ ಪಡೆದರಷ್ಟೆ ಜೀವನವಾ, ಅದು ಬಿಟ್ಟಿ ಬೇರೆ ಇಲ್ಲವಾ? ಎನ್ನುವುದನ್ನು ಆತ್ಮವಲೋಕನ ಮಾಡಿಕೊಳ್ಳಿ ಎಂದರು.
ಜಗತ್ತನ್ನು ಆಳುತ್ತಿರುವುದೇ ಸಾಹಿತ್ಯ, ಮಿಮಾಂಸೆ ಹಾಗೂ ಕಾವ್ಯಗಳು. ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯು ಗ್ರಹಿಕ ಶಕ್ತಿಯನ್ನು ಕಳೆದುಕೊಂಡಿದೆ. ನೀವು ಗ್ರಹಿಕೆಯನ್ನು ಕಳೆದುಕೊಳ್ಳಬೇಡಿ. ಸಾಹಿತ್ಯದ ಕಡೆ ಒಲವು ಬೆಳೆಸಿಕೊಳ್ಳಿ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ.ಎಚ್.ಎಂ.ರಾಜಶೇಖರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಗ್ರಹಿಕೆ ಶಕ್ತಿ ಬಹಳ ಮುಖ್ಯ. ಹೀಗಾಗಿ ಗ್ರಹಿಕೆ ಶಕ್ತಿ ಬೆಳೆಸಿಕೊಳ್ಳಿ ಎಂದ ಅವರು ಮನಸ್ಸಿಟ್ಟು ಮಾಡುವ ಕೆಲಸ ಅಳಿಲು ಸೇವೆಯೇ ಆದರೂ ಭವಿಷ್ಯದಲ್ಲಿ ಅದು ಮಹತ್ತರ ಪಾತ್ರವನ್ನು ಮತ್ತು ಬದುಕಿಗೆ ತಿರುವನ್ನು ನೀಡುತ್ತದೆ. ನಿರಂತರ ಕಲಿಕೆಯಿಂದ ಪ್ರತಿಭಾವಂತರನ್ನೇ ಹಿಂದಕ್ಕೆ ಹಾಕಬಹುದು ಎಂದರು.
ಸಂಶೋಧನೆಗೆ ಬೌದ್ಧಿಕ ಮಟ್ಟ ಹೆಚ್ಚಿರಬೇಕು. ನಿಮ್ಮ ಜ್ಞಾನ ಅಗಾಧವಾದಾಗ ಮಾತ್ರ ನಿಮ್ಮಲ್ಲಿ ಚೈತನ್ಯ ಮೂಡಲು ಸಾಧ್ಯ. ಯಾವುದು ಕೂಡ ಅಸಾಧ್ಯವಲ್ಲ. ಎಲ್ಲವೂ ಸಾಧ್ಯವೇ. ಅದು ನಿಮ್ಮ ನಿರಂತರ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಹನ್ ರವಿಕುಮಾರ್, ಕಾರ್ಯದರ್ಶಿ ಎಚ್. ಬಾಲಕೃಷ್ಣ, ಜೈನಹಳ್ಳಿ ಸತ್ಯನಾರಾಯಣಗೌಡ, ಪ್ರೊ.ಸಿ.ಕೆ.ಕಿರಣ್ ಕೌಶಿಕ್, ಕೆ.ವೈ.ನಾಗೇಂದ್ರ, ರಾಜೀವ್ ಶರ್ಮ, ಪ್ರೊ.ವಿ.ಜಯಪ್ರಕಾಶ್ ಇದ್ದರು.