ಪರಶುರಾಮಪುರ: ದೊಡ್ಡಬೀರನಹಳ್ಳಿಯಲ್ಲಿ ಈಚೆಗೆ ಗ್ರಾಮದೇವತೆ ಶ್ರೀ ಮುದ್ದಮ್ಮದೇವಿ ಕಡೇಕಾರ್ತಿಕೋತ್ಸವ ಅಂಗವಾಗಿ ವಿವಿಧ ದೇವರುಗಳ ಉತ್ಸವ, ಜನಪದ, ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಅಭಿಷೇಕ, 101 ದೀಪೋತ್ಸವದ ಬಳಿಕ ತಾಯಿಮುದ್ದಮ್ಮ ದೇವಿ, ಆಂಜನೇಯಸ್ವಾಮಿ, ಜುಂಜಪ್ಪಸ್ವಾಮಿ ಹಾಗೂ ಜಲ್ದಿ ಬೊಪ್ಪರಾಯ ಸ್ವಾಮಿಯನ್ನು ಪಾದಗಟ್ಟೆಗೆ ಮೆರವಣಿಗೆ ಮೂಲಕ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ದೇವರ ಮೂಲ ಸನ್ನಿಧಿಗೆ ಗುಡಿಕಟ್ಟೆಯ ಅಣ್ಣ-ತಮ್ಮಂದಿರಿಂದ ಎಣ್ಣೆ, ಅಕ್ಕಿ ಅಳೆಯುವ ಶಾಸ್ತ್ರ, ಚಿನ್ನಾರಿ ಗೊಂಬೆ ಕುಣಿತ, ಹಾಲು ಕಂಬಿ ಉತ್ಸವ, ಆಕರ್ಷಕ ಕೋಲಾಟ, ಪಂಡರಿ ಭಜನೆ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆದವು.
ದೇವಸ್ಥಾನ ಬೀದಿಯಲ್ಲಿ ಸಂಜೆ ರಂಗೋಲಿ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಸಾದ ವಿನಿಯೋಗದ ನಂತರ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.