ಮದ್ದೂರು: ಸಂಘ ಸಂಸ್ಥೆಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಕೆ.ಎಂ.ಉದಯ್ ಅವರ ವಿರುದ್ಧ ಗೆಜ್ಜಲಗೆರೆ ಗ್ರಾಮದ ನಿವಾಸಿಗಳು ಪ್ರತಿಭಟನೆ ನಡೆಸಿದರು.
ತಾಲೂಕಿನ ಗೆಜ್ಜಲಗೆರೆ ಗ್ರಾಪಂ ಕಚೇರಿ ಬಳಿ ಶುಕ್ರವಾರ ಜಮಾಯಿಸಿದ ರೈತ ಸಂಘಟನೆಯ ಕಾರ್ಯಕರ್ತರು, ಸ್ಥಳೀಯ ಮುಖಂಡರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಉದಯ್ ಕೂಡಲೇ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.
ಹೆಮ್ಮನಹಳ್ಳಿ ಗ್ರಾಮದಲ್ಲಿ ಗುರುವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ‘ಕೆಲ ರೋಲ್ಕಾಲ್ ಗಿರಾಕಿಗಳಿಗೆ ಅಭಿವೃದ್ಧಿ ಬೇಡವಾಗಿದ್ದು, ಸಂಘಟನೆ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಾರೆ. ಇವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲವಾಗಿದೆ’ ಎಂದಿದ್ದರು. ಇದು ಅಕ್ಷಮ್ಯ ಹೇಳಿಕೆಯಾಗಿದ್ದು, ಮೂರು ದಿನಗಳೊಳಗಾಗಿ ಶಾಸಕರು ಸಂಘಟನೆಗಳ ಮುಖಂಡರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಶಿವಪುರದ ಬ್ಲಾಕ್ ಕಾಂಗ್ರೆಸ್ ಕಚೇರಿ ಬಳಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ರೈತನಾಯಕಿ ಸುನಂದಾ ಜಯರಾಂ ಮಾತನಾಡಿ, ಕೂಡಲೇ ಗೆಜ್ಜಲಗೆರೆ ಗ್ರಾಮವನ್ನು ನಗರಸಭೆಯಿಂದ ಕೈಬಿಟ್ಟು ಗ್ರಾಪಂ ಆಗಿ ಮುಂದುವರಿಯಲು ಶಾಸಕರು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಸ್ಥಳೀಯ ನಿವಾಸಿಗಳೊಟ್ಟಿಗೆ ಪ್ರತಿಭಟನೆ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಸಿ.ಮಹೇಂದ್ರ, ಮುಖಂಡರಾದ ಲಿಂಗಪ್ಪಾಜಿ, ಮೋಹನ್, ತಾಪಂ ಮಾಜಿ ಸದಸ್ಯ ಯೋಗೇಶ್, ಲಿಂಗರಾಜು, ಮಂಜು, ಡಾಬಾ ಕಿಟ್ಟಿ, ಕೃಷ್ಣ ಮತರರು ಇದ್ದರು.