ವಿಜಯಪುರ: ಪ್ರವಾದಿ ಹಜರತ್ ಮೊಹ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಮೇಲೆ ಕ್ರಮಕ್ಕೆ ಆಗ್ರಹಿಸಿ ಮುಸ್ಲಿಂರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ಯುವಕರು ಯತ್ನಾಳ ವಿರುದ್ಧ ಘೋಷಣೆ ಮೊಳಗಿಸಿದರು. ಮಹ್ಮದ್ ಪೈಗಂಬರ್ ಸಂದೇಶಗಳುಳ್ಳ ಫಲಕ ಪ್ರದರ್ಶಿಸಿದರು. ಮಧ್ಯಾಹ್ನದ ಉರಿ ಬಿಸಿಲು ಲೆಕ್ಕಿಸದೇ ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ, ಯತ್ನಾಳರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ಯತ್ನಾಳ ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ಧರ್ಮ-ಧರ್ಮಗಳ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು. ಯತ್ನಾಳರ ವರ್ತನೆ ಕೇವಲ ಮುಸ್ಲಿಂರಿಗೆ ಮಾತ್ರವಲ್ಲ ಸ್ವತಃ ಬಿಜೆಪಿಗೂ ಸಹಿಸಿಕೊಳ್ಳಲಾಗದೆ ಉಚ್ಚಾಟನೆ ಮಾಡಿದೆ. ರಾಜಕೀಯಕ್ಕಾಗಿ ಪಕ್ಷ-ವಿಪಕ್ಷವನ್ನೂ ಲೆಕ್ಕಿಸದೇ ಮಹಾತ್ಮರನ್ನೂ ಬಿಡದೆ ಟೀಕಿಸುವ ಯತ್ನಾಳ ಸಮಾಜಕ್ಕೆ ಕಳಂಕ ಎಂಬುದು ಎಲ್ಲ ನಾಯಕರ ಭಾಷಣದ ಸಾರವಾಗಿತ್ತು.
ಸಚಿವ ಶಿವಾನಂದ ಪಾಟೀಲ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ, ಯತ್ನಾಳರ ವಿರುದ್ಧ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದರು. ಯತ್ನಾಳರ ವಿರುದ್ಧ ವಿಜಯಾನಂದ ಕಾಶಪ್ಪನವರ ವಾಚಾಮಗೋಚವಾಗಿ ಬೈಯುತ್ತಿದ್ದರೆ ನೆರೆದ ಜನ ಕೇಕೆ-ಸಿಳ್ಳೆ ಹಾಕಿ ಸಂಭ್ರಮಿಸಿದರು. ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಲಾಯಿತು.
ಯತ್ನಾಳ ವಿರುದ್ಧ ಒಮ್ಮೆ ಸ್ಪರ್ಧಿಸುವ ಇರಾದೆ ಇದೆ; ಸಚಿವ ಶಿವಾನಂದ ಪಾಟೀಲ
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಮಾತನಾಡಲು ಎಲ್ಲರಿಗೂ ಬರುತ್ತದೆ, ಯತ್ನಾಳರು ಇದನ್ನು ಅರ್ಥೈಸಿಕೊಳ್ಳಬೇಕು, ಮುಸ್ಲಿಂ ಧರ್ಮ ಗುರು ಹಜರತ್ ಮೊಹ್ಮದ್ಪೈಗಂಬರ್ ಅವರಿಗೆ ಇಡೀ ಜಗತ್ತೇ ಗೌರವಿಸುತ್ತದೆ, ಯತ್ನಾಳರು ಅನೈತಿಕ ಮಾರ್ಗದ ಮೂಲಕ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದರು.
ವಿಪ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಹಿಂದು-ಮುಸ್ಲಿಂ ಸಹೋದರರಂತೆ ಬದುಕುತ್ತಿದ್ದಾರೆ, ಈ ಸಾಮರಸ್ಯಕ್ಕೆ ಯಾವ ನಾಯಕರು ಕದಡುವ ಪ್ರಯತ್ನ ಮಾಡಬಾರದು ಎಂದರು.
ಕರ್ನಾಟಕ ಅಹಲೆ ಸುನ್ನತ್ ರಾಜ್ಯಾಧ್ಯಕ್ಷ ಸೈಯ್ಯದ್ ತನ್ವೀರಪೀರಾ ಹಾಶ್ಮೀ ಮಾತನಾಡಿ, ಪದೇ ಪದೇ ನಾಲಿಗೆ ಹರಿಬಿಡುತ್ತಿರುವ ನಗರ ಶಾಸಕರ ಮೇಲೆ ಕ್ರಮವಾಗಬೇಕು, ಈ ನಿಟ್ಟಿನಲ್ಲಿ ವಿಳಂಬವಾದರೆ ಈಗ ಕೇವಲ ಶೇ.1 ರಷ್ಟು ಜನರು ಪ್ರತಿಭಟನೆಗೆ ಭಾಗಿಯಾಗಿದ್ದಾರೆ, ಅವರ ಮೇಲೆ ಕ್ರಮ ಕೈಗೊಳ್ಳಲು ವಿಫಲವಾದರೆ ಲಕ್ಷಾಂತರ ಜನಸ್ತೋಮದೊಂದಿಗೆ ಪ್ರತಿಭಟನೆ ನಡೆಸಲು ನಾವು ಸಿದ್ಧ ಎಂದು ಘೋಷಿಸಿದರು.
ನಾಗಠಾಣ ಶಾಸಕ ವಿಠಲ ಕಟಕದೊಂಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಹಿರಿಯರಾದ ಯೂಸೂಫ್ ಖಾಜಿ, ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಮಠಾಧೀಶರಾದ ವೀರ ಯತೀಶಾನಂದ ಮಹಾಸ್ವಾಮೀಜಿ ಮಾತನಾಡಿ, ಯತ್ನಾಳ ವಿರುದ್ಧ ಆಕ್ರೋಶ ಹೊರಹಾಕಿದರು.
ಮುಖಂಡರಾದ ಮಹ್ಮದ್ರಫೀಕ್ ಟಪಾಲ್, ಎಸ್.ಎಂ. ಪಾಟೀಲ ಗಣಿಹಾರ, ಎಂ.ಸಿ. ಮುಲ್ಲಾ, ಜಮೀರ ಭಕ್ಷಿ, ಅಬ್ದುಲ್ರಜಾಕ್ ಹೊರ್ತಿ, ಸಜ್ಜಾದೆಪೀರಾ ಮುಶ್ರೀಫ್, ಸೋಮನಾಥ ಕಳ್ಳೀಮನಿ, ರಫೀಕ್ಅಹ್ಮದ್ ಖಾಣೆ, ಶ್ರೀನಾಥ ಪೂಜಾರಿ, ಫಯಾಜ್ ಕಲಾದಗಿ ಮತ್ತಿತರರಿದ್ದರು.