ಹುಣಸೂರು: ನಗರಾದ್ಯಂತ ಪ್ರತಿ ಬಡಾವಣೆಯಲ್ಲಿ ಬಿ ಖಾತಾ ಆಂದೋಲನ ಆಯೋಜಿಸಿ ನಾಗರಿಕರಲ್ಲಿ ಸರ್ಕಾರ ನೀಡಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಅರಿವು ಮೂಡಿಸಲಾಗುವುದೆಂದು ಶಾಸಕ ಜಿ.ಡಿ.ಹರೀಶ್ಗೌಡ ತಿಳಿಸಿದರು.

ರಾಜ್ಯ ಸರ್ಕಾರ ಎರಡು ದಿನಗಳ ಹಿಂದೆ ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ, ಕಟ್ಟಡಗಳ ಇ ಆಸ್ತಿ ತಂತ್ರಾಂಶದ ಮೂಲಕ ಬಿ ಖಾತೆ ಪಡೆಯಲು ಅವಕಾಶ ಮಾಡಿಕೊಟ್ಟಿದೆ. 2023ರಲ್ಲಿ ಈ ಕುರಿತು ನಾನು ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದೆ. ಇದೀಗ ಸರ್ಕಾರ ರಾಜ್ಯಾದ್ಯಂತ ಲಕ್ಷಾಂತರ ಬಡ, ಮಧ್ಯಮ ವರ್ಗದ ಜನರ ಬಹುವರ್ಷಗಳ ಕನಸನ್ನು ಈಡೇರಿಸಿದೆ. ಇದಕ್ಕಾಗಿ ನಾನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಗರಾಡಳಿತ ಮತ್ತು ವಕ್ಭ್ ಖಾತೆ ಸಚಿವ ರಹೀಂ ಖಾನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮನೆ ಬಾಗಿಲಿಗೆ ಬಿ ಖಾತೆ: ತಾಲೂಕಿನಲ್ಲಿ 81 ಅನಧಿಕೃತ ಬಡಾವಣೆಗಳಿದ್ದು, ಇವರೆಲ್ಲರೂ ನಿವೇಶನ ಅಥವಾ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ಇವರಿಗೆ ನಗರಸಭೆಯಿಂದ ನಮೂನೆ 3 ಯಾವುದೇ ರೂಪದಲ್ಲೂ ಸಿಕ್ಕಿಲ್ಲ. ಇದರಿಂದ ಮನೆ ಮಾರಾಟ, ಬ್ಯಾಂಕ್ ಸೌಲಭ್ಯ ಇನ್ನಿತರ ಸೌಲಬ್ಯಗಳಿಂದ ವಂಚಿತವಾಗಿದ್ದರು. ಹುಣಸೂರು ನಗರ ವ್ಯಾಪ್ತಿಯ ಎಲ್ಲ 31 ವಾರ್ಡ್ಗಳಲ್ಲಿ ಇನ್ನೆರಡು ದಿನಗಳಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಕೌನ್ಸಿಲರ್ಗಳನ್ನೊಳಗೊಂಡು ಬಿ ಖಾತಾ ಆಂದೋಲನ ಆಯೋಜಿಸಿ ನಾಗರಿಕರಲ್ಲಿ ಅರಿವು ಮೂಡಿಸಲಾಗುವುದು. ಮಾತ್ರವಲ್ಲದೆ ಎಲ್ಲ ಬಡಾವಣೆಗಳಲ್ಲಿ ನಗರಸಭೆ ಅಧಿಕಾರಿಗಳು ಮೊಕ್ಕಾಂ ಹೂಡಿ ನಾಗರಿಕರಿಂದ ದಾಖಲೆಗಳನ್ನು ಪಡೆದು ಸ್ಥಳದಲ್ಲೇ ಬಿ ಖಾತೆ ನೀಡುವ ಉದ್ದೇಶ ಹೊಂದಿದ್ದೇನೆ. ಈ ಕುರಿತು ತಂತ್ರಾಂಶಗಳ ಬಗ್ಗೆ ಮಾಹಿತಿ ಪಡೆಯಲಿದ್ದೇನೆ ಎಂದರು.
ನಾನೇ ಜವಾಬ್ವಾರಿ ವಹಿಸಲಿದ್ದೇನೆ: ಹುಣಸೂರು ನಗರದಲ್ಲಿ 31 ವಾರ್ಡ್ಗಳಿಂದ ಸರಿಸುಮಾರು 2-3 ಸಾವಿರಕ್ಕೂ ಹೆಚ್ಚು ಯೋಜನೆಯ ಫಲಾನುಭವಿಗಳಾಗಲಿದ್ದು, ಸರ್ಕಾರ ಮೂರು ತಿಂಗಳ ಗಡುವು ನೀಡಿದ್ದು, ಸಿಬ್ಬಂದಿ ಕೊರತೆ ಕಾಡಬಹುದಾಗಿದೆ. ಸಿಬ್ಬಂದಿ ಕೊರತೆ ನೀಗಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದು ಅವಶ್ಯವಿರುವ ಸಿಬ್ಬಂದಿ ಮತ್ತು ಸೌಲಭ್ಯಗಳನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಈ ಎಲ್ಲ ಜವಾಬ್ದಾರಿಗಳನ್ನು ನಗರಸಭಾ ಸದಸ್ಯರೊಡನೆ ನಾನೇ ತೆಗೆದುಕೊಳ್ಳುತ್ತೇನೆ. ಆಂದೋಲನದಲ್ಲೂ ಪಾಲ್ಗೊಂಡು ನಾಗರಿಕರಿಗೆ ಅರಿವು ಮೂಡಿಸುವ ಕಾರ್ಯ ನಡೆಸುತ್ತೇನೆ. ಹಾಗಾಗಿ ಸರ್ಕಾರ ನೀಡಿರುವ ಅವಕಾಶವನ್ನು ಯಾರೊಬ್ಬರೂ ತಪ್ಪಿಸಿಕೊಳ್ಳದೇ ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ನಾಗರಿಕರಲ್ಲಿ ಮನವಿ ಮಾಡಿದರು.
ಆಶ್ರಯ ಹಕ್ಕುಪತ್ರ ತಲುಪಿಸಿ: 25 ವರ್ಷಗಳ ಹಿಂದೆ ನಗರದ ರತ್ನಪುರಿ ರಸ್ತೆಯಲ್ಲಿ ಆಶ್ರಯ ಯೋಜನೆಯಡಿ ನಿವೇಶನಗಳನ್ನು ಗುರುತಿಸಿ 786 ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕುಪತ್ರ ನೀಡಲಾಗಿತ್ತು. ಈ ಪೈಕಿ ಕೇವಲ 106 ಕುಟುಂಬದವರು ಮಾತ್ರ ಮನೆಯಲ್ಲಿ ವಾಸವಿದ್ದು, ಮಿಕ್ಕವರು ಹಕ್ಕುಪತ್ರ ಪಡೆದಿಲ್ಲ. ಹಲವು ಕಾರಣಗಳಿಂದ ಸಮಸ್ಯೆ ಪರಿಹಾರವಾಗದೆ ಕುಳಿತಿದೆ. ಇದೀಗ ನಾನು ಶಾಸಕರಾದ ಮೇಲೆ ಹಕ್ಕುಪತ್ರ ಹೊಂದಿರುವ ಫಲಾನುಭವಿಗಳು ತಮ್ಮ ಹಕ್ಕುಪತ್ರವನ್ನು ನಗರಸಭೆಗೆ ಸಲ್ಲಿಸಿದಲ್ಲಿ ಅದರ ಪರಿಶೀಲನೆ ನಂತರ ವಸತಿ ಸೌಲಭ್ಯ ಒದಗಿಸಲು ಸೂಚಿಸಲಾಗಿತ್ತು. ಒಂದು ತಿಂಗಳ ಕಾಲಾವಕಾಶವನ್ನೂ ನೀಡಲಾಗಿತ್ತು. ಆದರೆ ಕೇವಲ 250 ಜನರು ಮಾತ್ರ ಹಕ್ಕುಪತ್ರ ಸಲ್ಲಿಸಿದ್ದಾರೆ. ಹಾಗಾಗಿ ಮತ್ತೆ ಒಂದು ತಿಂಗಳು ಕಾಲಾವಕಾಶವನ್ನು ಮುಂದುವರಿಸಲಾಗಿದ್ದು, ಕೂಡಲೇ ಹಕ್ಕುಪತ್ರ ಹೊಂದಿರುವವರು ನಗರಸಭೆಯನ್ನು ಸಂಪರ್ಕಿಸಿ ಹಕ್ಕುಪತ್ರ ನೀಡಿ ವಸತಿ ಸೌಲಭ್ಯ ಪಡೆದುಕೊಳ್ಳಬೇಕೆಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾಧ್ಯಕ್ಷ ಎಸ್.ಶರವಣ, ಜೆಡಿಎಸ್ ಮುಖಂಡ ಹರವೆ ಶ್ರೀಧರ್ ಇದ್ದರು.