ಜಗಳೂರು: ಪಟ್ಟಣದ ಬೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆ ಸೇರಿ ಕೆಲ ಸರ್ಕಾರಿ ಇಲಾಖೆಗಳಲ್ಲಿ ಬಾಬೂ ಜಗಜೀವನ್ ರಾಮ್ ಅವರ ಜಯಂತಿ ಆಚರಿಸದೇ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಶನಿವಾರ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ, ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ದೀನ ದಲಿತರ ನಾಯಕ, ದೇಶದ ಉಪಪ್ರಧಾನಿ ಬಾಬೂಜಿ ಅವರ ಜಯಂತಿಯನ್ನು ಆಚರಿಸದೇ ಸರ್ಕಾರಿ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ಕೆಲವು ಇಲಾಖೆಗಳಲ್ಲಿ ಎಚ್ಚರಿಸಿದ ನಂತರ ಮಧ್ಯಾಹ್ನ ಬಾಬೂಜಿ ಅವರ ಭಾವಚಿತ್ರಕ್ಕೆ ಪೂಜೆ ಮಾಡಲು ಮುಂದಾಗಿದ್ದಾರೆ. ಪೊಲೀಸ್ ಇಲಾಖೆ, ಬೆಸ್ಕಾಂ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಸಮಿತಿ ಜಿಲ್ಲಾಧ್ಯಕ್ಷ ಗೌರಿಪುರ ಕುಬೇರಪ್ಪ ಮಾತನಾಡಿ, ಪ್ರತಿ ಬಾರಿಯೂ ಕೆಲ ಇಲಾಖೆಗಳು ಆಚರಣೆಗೆ ನಿರ್ಲಕ್ಷ್ಯ ತೋರುತ್ತಿವೆ. ಜಗಳೂರು ಕ್ಷೇತ್ರ ಎಸ್ಸಿ, ಎಸ್ಟಿ ಜನಸಂಖ್ಯೆ ಹೊಂದಿದೆ. ಆದರೂ ಯಾಕೆ ಈ ತಾರತಮ್ಯ ಎಂದು ಪ್ರಶ್ನಿಸಿ, ತಾಲೂಕು ಆಡಳಿತ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಬೇಕು ಎಂದರು.
ಬೆಸ್ಕಾಂ ಎಇಇ ಸುಧಾಮಣಿ ಪ್ರತಿಕ್ರಿಯಿಸಿ, ಆಚರಣೆಗೆ ಬೆಳಗ್ಗೆಯೇ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿ ಕೆಲಸದ ನಿಮಿತ್ತ ತಡವಾಗಿ ಬರಬೇಕಾಯಿತು. ಸಿಬ್ಬಂದಿ ಗೊಂದಲಗಳಿಂದ ಆಚರಣೆ ವಿಳಂಬ ಮಾಡಿದ್ದಾರೆ. ಮುಂದೆ ಈ ರೀತಿ ಆಗದಂತೆ ಮುಂಜಾಗ್ರತೆ ವಹಿಸಲಾಗುವುದು ಎಂದರು ತಿಳಿಸಿದರು.
ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಮನವಿ ಸ್ವೀಕರಿಸಿ ಮಾತನಾಡಿ, ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಿದಂತೆ ಜಯಂತಿಗಳ ಆಚರಣೆ ಮಾಡಬೇಕು. ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಸೂಚನೆ ನೀಡಲಾಗುವುದು. ಈ ಘಟನೆಯ ಬಗ್ಗೆ ಮೇಲಧಿಕಾರಿಗಳ ಜತೆ ರ್ಚಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಪ್ರಗತಿಪರ ಹೋರಾಟಗಾರರಾದ ರಾಜಪ್ಪ ವ್ಯಾಸಗೊಂಡನಹಳ್ಳಿ, ಗೌರಿಪುರ ಸತ್ಯಮೂರ್ತಿ, ಮಾದಿಗ ದಂಡೂರ ಸಮಿತಿ ತಾಲೂಕಾಧ್ಯಕ್ಷ ಕ್ಯಾಸೇನಹಳ್ಳಿ ಹನುಮಂತಪ್ಪ, ಪದಾಧಿಕಾರಿಗಳಾದ ಕರ್ನಾಟಕ ಮಂಜು, ಚಂದ್ರಪ್ಪ, ಕರಿಬಸಪ್ಪ, ಕುಬೇಂದ್ರಪ್ಪ, ಸಿದ್ದಮ್ಮನಹಳ್ಳಿ, ಬಸವರಾಜ್, ವೆಂಕಟೇಶ್, ಗಂಗಾಧರ್, ನಿಂಗಪ್ಪ ಸೇರಿ ಮತ್ತಿತರರಿದ್ದರು.