ಶಿವಮೊಗ್ಗ: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಒಂದು ರೂಪಾಯಿ ನೀಡಬೇಕು ಎಂದು ಹಿಂದಿನ ಜಿಲ್ಲಾಧಿಕಾರಿ, ಕೆಪಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್ಗೆ ಇಲ್ಲಿನ ಮೂರನೇ ಜೆಎಂಎಫ್ಸಿ ನ್ಯಾಯಾಲಯ ಆದೇಶಿಸಿದೆ.
ಪೊನ್ನುರಾಜ್ 2011ರಲ್ಲಿ ಶಿವಮೊಗ್ಗ ಡಿಸಿಯಾಗಿದ್ದ ವೇಳೆ ಕಂದಾಯ ಇಲಾಖೆ ನಿವೃತ್ತ ನೌಕರ ವಿನೋಭಾನಗರದ ಕೆ.ಶಿವಪ್ಪ ಮಾನನಷ್ಟ ಮೊಕದ್ದಮೆ ದಾಖಲಿಸಿ, ಒಂದು ರೂ. ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಸತೀಶ್, 60 ದಿನಗಳಲ್ಲಿ ಕೆ.ಶಿವಪ್ಪ ಅವರಿಗೆ 1 ರೂ. ಪರಿಹಾರ ನೀಡುವಂತೆ ಜ.10ರಂದು ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಶಿವಪ್ಪ ನಿವೃತ್ತರಾಗಿದ್ದರೂ ಕಂದಾಯ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸಾರ್ವಜನಿಕರ ವ್ಯವಹಾರಗಳಿಗೆ ತೊಂದರೆ ಮಾಡುತ್ತಿದ್ದಾರೆಂದು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಎ.ಎಂ.ಮಹದೇವಪ್ಪ ಅಂದಿನ ಡಿಸಿ ಪೊನ್ನುರಾಜ್ಗೆ ದೂರು ನೀಡಿದ್ದರು. ವಿಚಾರಣೆ ನಡೆಸದೆ, ವಿವರಣೆ ಕೇಳಿ ನೋಟಿಸ್ ಕೂಡ ನೀಡದೆ ಶಿವಪ್ಪಗೆ ಯಾವುದೇ ಇಲಾಖೆ ಕಚೇರಿಗೆ ಹೋಗಬಾರದು ಎಂದು ಡಿಸಿ ಸುತ್ತೋಲೆ ಹೊರಡಿಸಿದ್ದರು. ಪೊನ್ನುರಾಜ್ ಹೊರಡಿಸಿದ್ದ ಸುತ್ತೋಲೆ ತನ್ನ ವ್ಯವಹಾರಿಕ ಬದುಕಿನ ಮೇಲೆ ದುಷ್ಪರಿಣಾಮ ಬೀರಿದ್ದು, 25 ಲಕ್ಷ ರೂ.ಗೂ ಹೆಚ್ಚಿನ ನಷ್ಟ ಸಂಭವಿಸಿದೆ ಎಂದ ಶಿವಪ್ಪ, 1 ರೂ.ಗೆ ಸೀಮಿತಗೊಳಿಸಿ 2014ರಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.