ಅಶ್ಲೀಲ ಹಾಡು, ನೃತ್ಯಗಳ ಭರಾಟೆ ಗಣೇಶೋತ್ಸವದ ಆಶಯ, ಉದ್ದೇಶವನ್ನೇ ಹಾಳು ಮಾಡುತ್ತಿದೆ. ನವರಾತ್ರಿ ಸಂದರ್ಭದಲ್ಲಿ ಏರ್ಪಡುವ ಮನರಂಜನಾ ಸಮಾರಂಭಗಳು ಮನೋವಿಕಾರ ಸೃಷ್ಟಿಸುತ್ತಿವೆ. ಇದು ನಾವು ಹಬ್ಬಗಳನ್ನು ಆಚರಿಸುವ ರೀತಿಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ.
ಭಾರತೀಯ ಸಂಸ್ಕೃತಿ ಶ್ರೇಷ್ಠ ಮೌಲ್ಯಗಳು, ಜೀವನಪದ್ಧತಿಯನ್ನು ನೀಡಿದೆ. ನಮ್ಮ ಪರಂಪರೆ ಜಗತ್ತಿಗೆ ಮಾರ್ಗದರ್ಶಿಯಾದುದು, ನೈತಿಕತೆ ಕಲಿಸುವಂಥದ್ದು ಎಂಬ ಹೆಮ್ಮೆ ಇದೆ. ಆದರೆ, ಆಧುನಿಕತೆಯ ಸೋಗಿನಲ್ಲಿ ನಾವು ಯಾವ ದಿಕ್ಕಿನಲ್ಲಿ ಸಾಗಿದ್ದೇವೆ? ನಮ್ಮ ಜೀವನಕ್ರಮವನ್ನೇ ಮರೆತು ಹೇಗೆಲ್ಲ ವರ್ತಿಸುತ್ತಿದ್ದೇವೆ? ಎಂಬುದನ್ನು ಅವಲೋಕಿಸಿದರೆ ನಾಚಿಕೆಯಿಂದ ತಲೆ ತಗ್ಗಿಸಿಕೊಳ್ಳುವ ಸ್ಥಿತಿ ಬಂದಿದೆ. ಪಾಶ್ಚಾತ್ಯರು ಭಾರತದ ಶ್ರೇಷ್ಠ ಜೀವನಪದ್ಧತಿಯನ್ನು ಅಳವಡಿಸಿಕೊಳ್ಳುತ್ತ ಸಾರ್ಥಕ ಬಾಳ್ವೆಯತ್ತ ಮುಖ ಮಾಡಿದ್ದರೆ, ನಮ್ಮವರು ಪಾಶ್ಚಾತ್ಯ ಜೀವನಶೈಲಿ ಅನುಸರಿಸುತ್ತ ವಿಕಾರದತ್ತ, ಅಧಃಪತನದತ್ತ ಸಾಗುತ್ತಿದ್ದಾರೆ ಎಂಬುದು ವಿಪರ್ಯಾಸ.
ಇತ್ತೀಚಿನ ವರ್ಷಗಳಲ್ಲಿ ನಮ್ಮ ಹಬ್ಬಗಳಿಗೂ ‘ವೆಸ್ಟರ್ನ್ ಟಚ್’ ಬಂದಿದೆ. ಹಬ್ಬಗಳೆಂದರೆ ಮೋಜು, ಕುಣಿತ, ಸಲ್ಲದ ವರ್ತನೆಗಳು ಎಂಬಂತಾಗಿದೆ. ಹಿಂದೆಲ್ಲ ಗಣೇಶೋತ್ಸವ ಎಂದರೆ ನಮ್ಮ ಸಂಸ್ಕೃತಿಯನ್ನು ಸಾರುವ ಶುಭಕರ, ಮಂಗಳಕರ ಹಬ್ಬವಾಗಿತ್ತು. ಇಂದು ಏನು ನಡೆಯುತ್ತಿದೆ? ಕೆಲವೆಡೆ ಗಣೇಶ ಮಂಡಳಿಗಳ ನಡುವೆಯೇ ಪ್ರತಿಷ್ಠೆ, ಮೇಲಾಟ ಬೆಳೆದು ದುಡ್ಡಿನ ಆಟ ನಡೆಯುತ್ತಿದೆ. ಇನ್ನು, ಗಣೇಶೋತ್ಸವದಲ್ಲಿ ನಡೆಯುವ ಚಟುವಟಿಕೆಗಳು ನಮ್ಮ ಸಂಸ್ಕೃತಿಯನ್ನೇ ಹಾಳುಗೆಡವುವಂತಿರುತ್ತವೆ. ಅಶ್ಲೀಲ ಹಾಡು, ನೃತ್ಯಗಳ ಅಬ್ಬರ, ಕುಡಿದು ಮೆರವಣಿಗೆಯಲ್ಲಿ ಸಾಗುವ ಧಾಷ್ಟರ್್ಯ.. ಒಂದೇ? ಎರಡೇ? ಇಂಥ ಅಪಸವ್ಯಗಳ ಪಟ್ಟಿಯನ್ನೇ ಮಾಡಬಹುದು.
ಇನ್ನು, ನವರಾತ್ರಿ, ಇದಂತೂ ಶಕ್ತಿದೇವತೆಗಳನ್ನು ಆರಾಧಿಸುವ ಪುಣ್ಯಕಾಲ. ನವರಾತ್ರಿ ಹೊತ್ತಲ್ಲಿ ಉಚ್ಚರಿಸುವ ಮಂತ್ರಗಳಿಗೆ ವಿಶೇಷ ಶಕ್ತಿ ಇರುತ್ತದೆ. ಹೀಗಾಗಿ, ಆಧ್ಯಾತ್ಮಿಕ ಸಾಧನೆಗೆ, ದೇವಿಕೃಪೆಗೆ ಪಾತ್ರವಾಗಲು ಇದು ಪ್ರಶಸ್ತ ಕಾಲ. ಆದರೆ, ನವರಾತ್ರಿ ಆಚರಣೆಯೂ ಅರ್ಥ ಕಳೆದುಕೊಳ್ಳುತ್ತಿದೆ. ಈ ಪರ್ವವನ್ನು ಧರ್ಮದಿಂದ ದೂರ ಮಾಡಲಾಗಿದ್ದು, ಅದಕ್ಕೆ ವಾಣಿಜ್ಯಿಕ ಸ್ಪರ್ಶ ನೀಡಲಾಗಿದೆ. ದಾಂಡಿಯಾ ಹೆಸರಲ್ಲಿ ಯುವಕ-ಯುವತಿಯರು ಒಟ್ಟಿಗೆ ಕುಣಿಯುತ್ತಾರೆ, ಅನೇಕ ದುರಾಚಾರಗಳಿಗೆ ಆಹ್ವಾನ ನೀಡುತ್ತಾರೆ. ಇಂಥ ಕೃತಕ ಆಚರಣೆಗಳಿಂದ ನೈತಿಕತೆ ಮಾಯವಾಗುತ್ತಿದೆ. ಇದು ಭಾರತೀಯ ಸಂಸ್ಕೃತಿಗೆ ಘಾತಕವಾಗಿದೆ, ಹಿಂದೂ ಪರಂಪರೆ, ಹಿಂದೂ ಸಮಾಜಕ್ಕೂ ಹಾನಿಕಾರಕ. ಸಹಿಷ್ಣು ಹಿಂದೂ ಸಮಾಜ ಉದಾರತೆ ಹೆಸರಲ್ಲಿ ದಿಕ್ಕು ತಪು್ಪತ್ತಿದೆ, ಕೆಲ ಅವಕಾಶವಾದಿಗಳ ಕಾರಣದಿಂದ ಸಾಂಸ್ಕೃತಿಕ ಮೌಲ್ಯಗಳಿಗೆ ಪೆಟ್ಟು ಬೀಳುತ್ತಿದೆ. ಸಾಮಾಜಿಕ ಪರಂಪರೆಗಳು ಮರೆಯಾಗುತ್ತಿವೆ. ನವರಾತ್ರಿಯ ಆಚರಣೆಯ ದುರುಪಯೋಗವಾಗುತ್ತಿದೆ. ವಾಸ್ತವದಲ್ಲಿ ನವರಾತ್ರಿ ಹೊತ್ತಲ್ಲಿ ಎಲ್ಲ ಬಗೆಯ ಪಾಪಗಳಿಂದ ಮುಕ್ತವಾಗಬೇಕು. ಈ ಅವಧಿಯಲ್ಲಿ ಯಾವುದೇ ಅಸಮ್ಮತ ಚಟುವಟಿಕೆ ಕೈಗೊಳ್ಳಬಾರದು. ಒಂಭತ್ತು ದಿನ ಶುದ್ಧ ಬ್ರಹ್ಮಚರ್ಯ ಪಾಲಿಸಬೇಕು. ದೇವಿಯ ಅನುಷ್ಠಾನ ಮಾಡಿ, ಮಂತ್ರಶಕ್ತಿಗಳನ್ನು ಆರಾಧಿಸಬೇಕು. ಈ ಅವಧಿಯಲ್ಲಿ ಮಾಡಿದ ಪುಣ್ಯಕಾರ್ಯಗಳು ಒಳ್ಳೆಯ ಫಲ ನೀಡಿದರೆ, ಪಾಪಕಾರ್ಯಗಳು ಭಾರಿ ದೌರ್ಭಾಗ್ಯಕ್ಕೆ ಆಹ್ವಾನ ನೀಡುತ್ತವೆ. ಮುಸಲ್ಮಾನರನ್ನು ನೋಡಿ, ಅವರು ತಮ್ಮ ಹಬ್ಬ, ಉತ್ಸವಗಳನ್ನು ಸಾಂಸ್ಕೃತಿಕವಾಗಿ ಭ್ರಷ್ಟವಾಗಲು ಬಿಟ್ಟಿಲ್ಲ. ಸಿಖ್ ಸಮುದಾಯ ಕೂಡ ಉತ್ಸವ, ಆಚರಣೆಗಳನ್ನು ಸಂಪ್ರದಾಯದ ಚೌಕಟ್ಟಿನಿಂದ ಆಚೆ ತಂದು, ಅವುಗಳನ್ನು ಅರ್ಥಹೀನವಾಗಿಸುವುದಿಲ್ಲ. ಸಿಕ್ಖರು ಅಹಂಕಾರ ಬದಿಗಿಟ್ಟು, ಸೇವಾಭಾವದಿಂದ ಒಟ್ಟು ಬಂದು ಹಬ್ಬಗಳನ್ನು ಆಚರಿಸುತ್ತಾರೆ. ಯಾವುದೇ ಕಾರಣಕ್ಕೂ ತಮ್ಮ ಪರಂಪರೆಯಿಂದ ದೂರವಾಗುವುದಿಲ್ಲ. ಆಧುನಿಕತೆ ಬಂದರೇನು? ನಮ್ಮ ಆಚರಣೆಯ ಮೂಲ ಸೊಗಡು ಬದಲಾಗಬೇಕೆ? ಪರ್ವಗಳು ನೀಡುವ ಸಂದೇಶವನ್ನೇ ಮರೆಯಬೇಕೆ?
ಹಬ್ಬಗಳ ಹೊತ್ತಲ್ಲಿ ಮೋಜಿನ ಆಚರಣೆಗಳನ್ನು ಮಾಡಬಾರದು. ಈ ಹೊತ್ತಲ್ಲಿ ದೃಢ ಮತ್ತು ಮಹತ್ವದ ಸಂಕಲ್ಪಗಳನ್ನು ಕೈಗೊಂಡು ನಮ್ಮ ಬದುಕಿನ ಪಯಣಕ್ಕೆ ಸ್ಪಷ್ಟ ದಿಕ್ಕು ಕಂಡುಕೊಳ್ಳಬೇಕು. ವಿಶೇಷವಾಗಿ, ಮನಸ್ಸಿನಿಂದ ಶುದ್ಧ ಮತ್ತು ಚಾರಿತ್ರ್ಯವಂತರಾಗಬೇಕು. ನೈತಿಕತೆಯೇ ಜೀವನದ ಯಶಸ್ಸು ಮತ್ತು ಸಾರ್ಥಕತೆಯ ಕೇಂದ್ರಬಿಂದು. ಹಾಗಾಗಿ, ನೀತಿವಂತರಾಗಲು ಶ್ರಮಿಸಬೇಕು. ಸದಾಚಾರದ ಪರಂಪರೆಯನ್ನು ಮುಂದುವರಿಸಬೇಕೆ ಹೊರತು ಶ್ರೇಷ್ಠ ಪರಂಪರೆಯಲ್ಲಿ ಸಲ್ಲದ ಸಂಗತಿಗಳನ್ನು ಸೇರಿಸಿ ಸಂಸ್ಕೃತಿಯನ್ನು ಹಾಳು ಮಾಡಬಾರದು. ಈ ನಿಟ್ಟಿನಲ್ಲಿ ಹಿಂದೂಗಳು ಜಾಗೃತರಾಗಬೇಕು. ಹಬ್ಬಗಳೇ ಅರ್ಥ ಕಳೆದುಕೊಂಡರೆ ಸಂಸ್ಕೃತಿಗೇನು ಅರ್ಥ? ಹೀಗಾಗಿ, ಗಣೇಶೋತ್ಸವ, ನವರಾತ್ರಿ, ದೀಪಾವಳಿ ಹೀಗೆ ಯಾವುದೇ ಪರ್ವವಾಗಿರಲಿ ಅದರ ಮೂಲೋದ್ದೇಶ ತಿಳಿದು ಅದರಂತೆ ಆಚರಿಸಬೇಕು. ಅದರ ಸಂದೇಶಗಳನ್ನು ಹರಡಬೇಕು. ದೈವಿಕ, ಸಾತ್ವಿಕ ಶಕ್ತಿಗಳನ್ನು ಆರಾಧಿಸಬೇಕು.
ಈ ಸ್ಥಿತಿ ಏಕೆ ಸೃಷ್ಟಿಯಾಗಿದೆ? ಒಮ್ಮೆ ಯೋಚಿಸಿ. ಹಿಂದೂಗಳು ಜಡನಿದ್ರೆಗೆ ಜಾರಿದ್ದಾರೆ. ಕಣ್ಣೆದುರೇ ಸಂಸ್ಕೃತಿಯ ಅವಸಾನವಾಗುತ್ತಿದ್ದರೂ ತಿಳಿಯದಂತೆ ವರ್ತಿಸುತ್ತಿದ್ದಾರೆ. ನಮ್ಮತನವನ್ನು ಮರೆತು ನೈತಿಕವಾಗಿ ಕುಸಿಯುತ್ತಿದ್ದಾರೆ. ಸಂಸ್ಕೃತಿ ಮೇಲೆ ನಿರಂತರ ಆಕ್ರಮಣ ನಡೆಯುತ್ತಿದ್ದರೂ ಮೌನವಾಗಿದ್ದಾರೆ. ಈ ಸಾಂಸ್ಕೃತಿಕ ಅಧಃಪತನ ಮನೆಗಳನ್ನೂ ಪ್ರವೇಶಿಸಿರುವುದರಿಂದ ಆಗುತ್ತಿರುವ ಹಾನಿ ಎಷ್ಟು ಗಂಭೀರವಾಗಿದೆ ಗೊತ್ತೆ? ಕೌಟುಂಬಿಕ ಮೌಲ್ಯಗಳು ನಶಿಸುತ್ತಿವೆ, ಕೌಟುಂಬಿಕ ಬಾಂಧವ್ಯಗಳು ಕಡಿಮೆಯಾಗುತ್ತಿವೆ. ಕುಟುಂಬಗಳು ಛಿದ್ರವಾಗುತ್ತಿವೆ, ವಿಚ್ಛೇದನಗಳು ಹೆಚ್ಚುತ್ತಿವೆ. ನಂಬಿಕೆಯ ಸೌಧ ಕುಸಿದಿದೆ, ವಿಶ್ವಾಸದ ಗಂಟು ಮರೆಯಾಗಿದೆ. ಮಕ್ಕಳಿಗೆ ತಂದೆ-ತಾಯಿ ಬಗ್ಗೆ, ಹಿರಿಯರ ಬಗ್ಗೆ ಗೌರವವೇ ಇಲ್ಲದಂತಾಗಿದೆ. ಅವರ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಹದಿಹರೆಯದವರು ಹೊರಗಡೆ ಹೋಗಿ ಏನೆಲ್ಲ ಮಾಡುತ್ತಾರೆಂದು ಪ್ರಶ್ನಿಸುವಂತಿಲ್ಲ. ಜೈನರಲ್ಲೂ ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿವೆ. ನೀವು ಹಿಂದೂಗಳಾಗಿರಬಹುದು, ಶ್ವೇತಾಂಬರ/ದಿಗಂಬರ ಪಂಥದ ಜೈನರಾಗಿರಬಹುದು, ಆದರೆ ನಿಮ್ಮ ಮಕ್ಕಳು, ಮೊಮ್ಮಕ್ಕಳು ಆಚರಣೆಯಲ್ಲಿ ಸ್ವಂತಿಕೆ ಕಳೆದುಕೊಂಡಿದ್ದಾರೆ, ಅವರ ಜೀವನಕ್ರಮ, ಆಹಾರ-ಉಡುಗೆ ಎಲ್ಲವೂ ಬದಲಾಗಿದೆ. ಅನುಕರಣೆ ಅವರ ವ್ಯಕ್ತಿತ್ವದಲ್ಲಿ ಢಾಳಾಗಿ ಕಾಣುತ್ತಿದೆ ಎಂಬ ಕಹಿಸತ್ಯವನ್ನು ಒಪ್ಪಿಕೊಳ್ಳಲೇಬೇಕಾದ ಸ್ಥಿತಿ ಸೃಷ್ಟಿಯಾಗಿದೆ.
ಇದೇ ಸ್ಥಿತಿ ಮುಂದುವರಿದರೆ ಏನು ಗತಿ ಎಂಬುದರ ಬಗ್ಗೆ ಯೋಚಿಸಿ. ಮುಂದಿನ ಪೀಳಿಗೆಯನ್ನು ಸುಸಂಸ್ಕೃತ, ಸದೃಢ, ಸಂಸ್ಕಾರಸಂಪನ್ನರಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ತಂದೆ-ತಾಯಿ ಮತ್ತು ಗುರುಗಳ/ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂಬುದನ್ನು ಅರಿಯಬೇಕು. ಮೊದಲು, ತಂದೆ-ತಾಯಿ ನಮ್ಮ ಭಾರತೀಯ ಪರಂಪರೆಯನ್ನು ರೂಢಿಗತ ಮಾಡಿಕೊಂಡು, ಅದರಂತೆ ಜೀವನಕ್ರಮ ರೂಪಿಸಿಕೊಳ್ಳಬೇಕು. ಅದರ ವೈಶಿಷ್ಟ್ಯಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು. ಹಿರಿಯರ ಬಗ್ಗೆ ಗೌರವ, ದೇವರ ಬಗ್ಗೆ ಶ್ರದ್ಧೆ, ಸಮಾಜದ ಬಗ್ಗೆ ಸಂವೇದನೆ, ಉಪಕಾರದ ಭಾವನೆಗಳನ್ನು ಬಿತ್ತಬೇಕು. ಈ ನಿಟ್ಟಿನಲ್ಲಿ ನಮ್ಮ ಆಲೋಚನಾಕ್ರಮ ಬದಲಾಗಬೇಕಿದೆ, ಜೀವನಕ್ರಮ ಬದಲಾಗಬೇಕಿದೆ. ನಮ್ಮದು ಭೋಗವಾದದ ಸಂಸ್ಕೃತಿಯಲ್ಲ ಎಂಬ ಸತ್ಯವನ್ನು ಅರಿಯಬೇಕಿದೆ. ಪಾಶ್ಚಾತ್ಯರು ಭೋಗವಾದದ ಸಂಸ್ಕೃತಿಯಿಂದ ಸುಖ-ಸಂತೋಷ ಕಾಣಲು ಸಾಧ್ಯವಿಲ್ಲವೆಂದೇ ಭಾರತೀಯ ಸಂಸ್ಕೃತಿಯೆಡೆಗೆ ವಾಲುತ್ತಿದ್ದಾರೆ. ಆದ್ದರಿಂದ, ಮನೆಗಳಿಂದ ಬದಲಾವಣೆ, ಬೀದಿಗಳಿಂದ ಪರಿವರ್ತನೆ ಆರಂಭವಾಗಬೇಕಿದೆ. ಗಣೇಶೋತ್ಸವ ಸಂದರ್ಭದಲ್ಲಿ ಆ ವಿಘ್ನನಿವಾರಕ ನಮ್ಮನ್ನು ಹರಸುವಂತೆ ಮಾಡಬೇಕು. ವಿಕೃತಿಯನ್ನು ಮಣಿಸಿ ಸನ್ನಡತೆ, ಸದ್ಭಾವ, ಸಾಮರಸ್ಯದ ಸಂಗಮವಾಗಿ ಇಡೀ ಸಮಾಜ ನೈತಿಕವಾಗಿ ಮುನ್ನಡೆಯಬೇಕು. ಅಂಥ ವಾತಾವರಣ ರೂಪುಗೊಳ್ಳಲು ಎಲ್ಲರೂ ಶ್ರಮಿಸಬೇಕಿದೆ.
ಈಗಾಗಲೇ ತಡವಾಗಿದೆ. ಇನ್ನಾದರೂ ಜಡನಿದ್ರೆಯಿಂದ ಎಚ್ಚೆತ್ತುಕೊಳ್ಳೋಣ. ಇಲ್ಲವಾದಲ್ಲಿ ಮತ್ತೆ ನಮ್ಮ ಸಂಸ್ಕೃತಿಯನ್ನು ಮರುಸ್ಥಾಪಿಸಲು ನೂರಾರು ವರ್ಷ ಹೋರಾಡಬೇಕಾದ ಪರಿಸ್ಥಿತಿ ಬಂದೊದಗಬಹುದು. ಹಾಗಾಗುವ ಮುನ್ನವೇ ಜಾಗೃತರಾಗೋಣ, ಭಾರತೀಯ ಸಂಸ್ಕೃತಿಯ ಮಹತ್ವವನ್ನು ಅರಿತುಕೊಂಡು ಸಾರ್ಥಕ ಬಾಳು ನಡೆಸೋಣ.
(ಲೇಖಕರು ಜೈನ ಮುನಿ, ಖ್ಯಾತ ಪ್ರವಚನಕಾರರು)
(ಅನಿವಾರ್ಯ ಕಾರಣದಿಂದ ತರುಣ್ ವಿಜಯ್ ಅವರ ‘ವಿಜಯಪಥ’ ಅಂಕಣ ಪ್ರಕಟಗೊಂಡಿಲ್ಲ)