More

    ವಜ್ರವಾಡದಲ್ಲಿ ಹಳೆಗನ್ನಡ ಶಾಸನ: ಮಹಾರಾಷ್ಟ್ರದ ಜತ್ತ ತಾಲೂಕಿನ ವಜ್ರವಾಡ ಗ್ರಾಮದಲ್ಲಿ ಪತ್ತೆ

    | ಪ್ರಮೋದ ಪೈಠಣಕರ ಉಮದಿ (ಮಹಾರಾಷ್ಟ್ರ)

    ಮಹಾರಾಷ್ಟ್ರ ಗಡಿಭಾಗದ ಬಹುತೇಕ ಗ್ರಾಮಗಳಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಿತ್ತು ಎನ್ನುವುದಕ್ಕೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಜತ್ತ ತಾಲೂಕಿನ ವಜ್ರವಾಡದಲ್ಲಿ ಇತ್ತೀಚೆಗೆ ಪತ್ತೆಯಾದ ಅಂದಾಜು 650 ವರ್ಷಗಳ ಹಳೆಯದಾದ, ಹಳೆಗನ್ನಡ ಲಿಪಿ ಹೊಂದಿರುವ ಶಿಲಾ ಶಾಸನ ಸಾಕ್ಷಿಯಾಗಿದೆ.

    ಜತ್ತ ತಾಲೂಕಿನ 40ಕ್ಕೂ ಹೆಚ್ಚು ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕೆನ್ನುವುದು ಬಹು ವರ್ಷಗಳ ಬೇಡಿಕೆಯಾಗಿದೆ. ಇದಕ್ಕೆ ಪುಷ್ಠಿ ನೀಡುವಂತಹ ಶಾಸನವನ್ನು ಮಹಾರಾಷ್ಟ್ರದ ಮಿರಜ್​ನ ಇತಿಹಾಸ ಹಾಗೂ ಪುರಾತತ್ವ ಇಲಾಖೆ ಪತ್ತೆ ಮಾಡಿದೆ. ಇತ್ತೀಚೆಗಷ್ಟೇ ಇತಿಹಾಸ ತಜ್ಞ ಗೌತಮ ಕಾಟಕರ, ಮಾನಸಿಂಗರಾವ್ ಕುಮಟೇಕರ್ ಅವರನ್ನು ಒಳಗೊಂಡ ತಂಡ ಜತ್ತ ತಾಲೂಕಿನ ವಜ್ರವಾಡಕ್ಕೆ ಭೇಟಿ ನೀಡಿ ಅಲ್ಲಿನ ಹಳ್ಳದ ದಡದಲ್ಲಿರುವ ಸಿದ್ಧನಾಥ ಮಂದಿರ (ಬಸವೇಶ್ವರ)ದಲ್ಲಿಯ ಶಿಲಾ ಶಾಸನ ಪತ್ತೆ ಮಾಡಿದೆ. ‘1371ರಲ್ಲಿ ಸಿದ್ಧನಾಥ ದೇವಾಲಯದ ಜೀಣೋದ್ಧಾರಕ್ಕಾಗಿ ಮತ್ತು ಪೂಜೆ- ನೈವೇದ್ಯಕ್ಕಾಗಿ ಕೆಲ ಜಮೀನುಗಳನ್ನು ದಾನದ ರೂಪದಲ್ಲಿ ನೀಡಿರುವ ಬಗ್ಗೆ ಈ ಶಾಸನದಲ್ಲಿ ಹಳೆಗನ್ನಡದಲ್ಲಿ ಉಲ್ಲೇಖಿಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

    ಈ ಮಂದಿರವನ್ನು ಚಾಲುಕ್ಯರ ಕಾಲಘಟ್ಟದಲ್ಲಿ ಹೇಮಾಡಿಪಂಥಿ ಪದ್ಧತಿ ಪ್ರಕಾರ ನಿರ್ಮಾಣ ಮಾಡಲಾಗಿದೆ. ಈ ಮಂದಿರ ಕಟ್ಟಡದ ಗೋಡೆ ಮೇಲಿದ್ದ ಶಾಸನದಲ್ಲಿ ಹಳೆಗನ್ನಡ ಭಾಷೆೆಯಲ್ಲಿ ಬರೆಯಲಾಗಿದೆ. ಕರ್ನಾಟಕದ ಹಂಪಿಯ ಕಲವೀರ ಮನ್ವಾಚಾರ್ಯರಿಂದ ಹಳೆಗನ್ನಡ ಲಿಪಿಯ ಮಾಹಿತಿ ಪಡೆಯಲಾಗಿದೆ. ಮೊದಲು ಇದು ಶಿವಾಲಯವಾಗಿದ್ದು, ಸಿದ್ಧನಾಥ ಮಂದಿರ ಎಂದೇ ಕರೆಯಲಾಗುತ್ತಿತು. ಈಗ ಇದನ್ನು ಬಸವೇಶ್ವರ ಮಂದಿರ ಎಂದು ಕರೆಯಲಾಗುತ್ತದೆ ಎಂದು ಸ್ಥಳೀಯ ಈರಗೊಂಡ ಪಾಟೀಲ ಹೇಳುತ್ತಾರೆ. 1371ರಲ್ಲಿ ಮಂದಿರದ ಜೀಣೋದ್ಧಾರ ಕೈಗೊಂಡಾಗ ಶಿಲಾ ಶಾಸನ ಅಳವಡಿಸಿರಬಹುದು. ಇತಿಹಾಸದ ಪ್ರಕಾರ 1371ರ ಸಮಯದಲ್ಲಿ ಯಾದವರ ಆಳ್ವಿಕೆ ಮುಕ್ತಾಯಗೊಂಡು ಮುಸ್ಲಿಂ ರಾಜರ ಆಳ್ವಿಕೆ ಪ್ರಾರಂಭವಾಗಿತ್ತು. ಆಗ ವಜ್ರವಾಡ ಗ್ರಾಮದ ವ್ಯಾಪಾರಿ ಗೋಪಾಳಶೆಟ್ಟಿಯ ಮಗ ರಾಜು ಶೆಟ್ಟಿ ಈ ಮಂದಿರವನ್ನು ಮತ್ತೊಮ್ಮೆ ಜೀಣೋದ್ಧಾರ ಮಾಡಿರುವ ಬಗ್ಗೆ ಉಲ್ಲೇಖವಿದೆ. ಕೆಲ ಜಮೀನನ್ನು ಬ್ರಾಹ್ಮಣರಿಗೆ ದಾನ ರೂಪದಲ್ಲಿ ನೀಡಿರುವ ಬಗ್ಗೆ ಹಾಗೂ ಈ ಶಾಸನವನ್ನು ಹಾಳು ಮಾಡಬೇಡಿ, ರಕ್ಷಿಸಿ ಎಂದು ಅದರ ಮೇಲೆ ಉಲ್ಲೇಖಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts