ನವದೆಹಲಿ: ಇತರ ಹಿಂದುಳಿದ ವರ್ಗಗಳಲ್ಲಿ ಉಪವರ್ಗೀಕರಣ ಮಾಡುವಲ್ಲಿ ಯಾವ್ಯಾವ ಸಮಸ್ಯೆಗಳು ಎದುರಾಗಬಹುದು ಎಂಬಿತ್ಯಾದಿ ಅಂಶಗಳನ್ನು ಪರಿಶೀಲಿಸಲು ರಚಿಸಿರುವ ನಿವೃತ್ತ ನ್ಯಾಯಮೂರ್ತಿ ರೋಹಿಣಿ ಅವರ ನೇತೃತ್ವದ ಆಯೋಗದ ಅವಧಿಯನ್ನು ಇಂದು ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮಾಡಿದೆ.
2017ರಲ್ಲಿ ಸಂವಿಧಾನದ ಆರ್ಟಿಕಲ್ 340ರ ಅಡಿಯಲ್ಲಿ ಆಯೋಗ ರಚನೆ ಮಾಡಲಾಗಿದೆ. ಈಗಾಗಲೇ ಏಳು ಬಾರಿ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು ಇದೀಗ ಎಂಟನೇ ಬಾರಿಗೆ ಆಯೋಗದ ಅವಧಿಯನ್ನು 2020ರ ಜುಲೈ 31ರವರೆಗೆ ವಿಸ್ತರಿಸಲು ಕ್ಯಾಬಿನೇಟ್ ಇಂದು ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)