ಬೆಂಗಳೂರು: ರಾಜ್ಯ ಬೀಜ ನಿಗಮದ ವತಿಯಿಂದ 2025-26ನೇ ಸಾಲಿಗೆ 6 ಲಕ್ಷ ಕ್ವಿಂಟಾಲ್ ಬೀಜೋತ್ಪಾದನೆ ಗುರಿ ಇರಿಸಿ ಅದರ ಸಾಧನೆಗೆ ಸಿದ್ಧತೆೆ ಮಾಡಿಕೊಳ್ಳಲು ಕೃಷಿ ಸಚಿವ ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಕಾಸ ಸೌಧದಲ್ಲಿ ರಾಜ್ಯ ಬೀಜ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು ನಿಗಮವು 2024-25ನೇ ಸಾಲಿನಲ್ಲಿ 4.30 ಲಕ್ಷ ಕ್ವಿಂಟಾಲ್ ಬೀಜೋತ್ಪಾದನೆ ಗುರಿ ಹೊಂದಿದ್ದು, ಈ ತನಕ 0.75 ಲಕ್ಷ ಕ್ವಿಂಟಾಲ್ ದಾಸ್ತಾನು ಸ್ವೀಕರಿಸಲಾಗಿದೆ. ಉಳಿಕೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸೂಚಿಸಿದರು.
ರಸಗೊಬ್ಬರ ದಾಸ್ತಾನು ಯೋಜನೆಯಡಿ 2024-25ನೇ ಸಾಲಿನಲ್ಲಿ 1.18 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪಡೆದು 1.10 ಲಕ್ಷ ಮೆಟ್ರಿಕ್ ಟನ್ ವಿತರಿಸಿದ್ದು, ಬಾಕಿ 0.8 ಲಕ್ಷ ಮೆಟ್ರಿಕ್ ಟನ್ ಆದಷ್ಟು ಶೀಘ್ರವಾಗಿ ವಿಲೇವಾರಿ ಮಾಡಬೇಕೆಂದರು.
ಬೀಜೋತ್ಪಾದನೆ, ಗುರಿಸಾಧನೆಗೆ ಜತೆಗೆ ಸುಧಾರಿತ ಸೇವಾ ಸೌಲಭ್ಯವನ್ನು ಒದಗಿಸಿ ಎಂದು ನಿರ್ದೇಶನ ನೀಡಿದ ಅವರು ಕೃಷಿ ಅಭ್ಯುದಯದ ಆಶಯದೊಂದಿಗೆ ರಚನೆಗೊಂಡಿರುವ ಕರ್ನಾಟಕ ರಾಜ್ಯ ಬೀಜ ನಿಗಮವು ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಪರಿಣಾಮಕಾರಿ ಪರಿವರ್ತನೆಗಳೊಂದಿಗೆ ರೈತರಿಗೆ ಇನ್ನಷ್ಟು ಗುಣಾತ್ಮಕ ಸೇವೆ ಒದಗಿಸಬೇಕೆಂದರು.
ನಿಗಮದಿಂದ ರೈತರಿಗೆ ಹಾಗೂ ಷೇರುದಾರರಿಗೆ 4.30 ಕೋಟಿ ರೂ. ಲಾಭಾಂಶ ವಿತರಣೆ ಮಾಡಿರುವುದು ಅಭಿನಂದನೀಯ ಎಂದು ಸಚಿವರು ಪ್ರಶಂಸೆ ವ್ಯಕ್ತಪಡಿಸಿದರಲ್ಲದೇ, ಐಸಿಆರ್ಐಎಸ್ಎಟಿ ಹೈದರಾಬಾದ್ನೊಂದಿಗೆ ಹೊಸತಳಿ ಅಳವಡಿಕೆ ಬಗ್ಗೆ ಎಂಒಯು ಮಾಡಿಕೊಂಡಿದ್ದು, ಇದುವರೆಗಿನ ಪ್ರಗತಿ ಏನು? ಯಾವ ತಳಿ ಅಳವಡಿಸಲಾಗಿದೆ? ರೈತರಿಗೆ ಆಗಿರುವ ಪ್ರಯೋಜನವೇನು? ಎಂಬ ಬಗ್ಗೆ ಮಾಹಿತಿ ಪಡೆದ ಸಚಿವರು ನಿಗಮದ ಕಾರ್ಯ ಚಟುವಟಿಕೆಗಳು ರೈತರ ಹೊಲಗಳಲ್ಲಿ ರಚನಾತ್ಮಕ ಪರಿಣಾಮ ಬೀರುವುದನ್ನು ಖಾತರಿ ಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದರು.
ಎನ್ಎ್ಎಸ್ಎಂ ಯೋಜನೆಯಡಿ 2023-24 ಮತ್ತು 2024-25ನೇ ಸಾಲಿನಲ್ಲಿ ಉತ್ಪಾದಿಸಿದ ನ್ಯೂಟ್ರಿಸಿರಿಯಲ್ಸ್ ಮತ್ತು ದ್ವಿದಳ ಧಾನ್ಯ ಪ್ರಮಾಣಿತ ಬೀಜಗಳಿಗೆ ಒಟ್ಟಾರೆ 10.38 ಕೋಟಿ ರೂ. ಪ್ರೋತ್ಸಾಹಧನ ಪಡೆಯಲಾಗಿದ್ದು, ಆದಷ್ಟು ಬೇಗ ಪೂರ್ಣಗೊಳಿಸುವಂತೆ ತಿಳಿಸಿದರು.
ಇದೇ ವೇಳೆ ಕೃಷಿ ಇಲಾಖೆ ಕಾರ್ಯದರ್ಶಿ ಡಾ.ರವಿಶಂಕರ್, ಆಯುಕ್ತ ವೈ.ಎಸ್.ಪಾಟೀಲ್, ಕರ್ನಾಟಕ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ದೇವರಾಜ್ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.