blank

ಜೀವಧಾರೆಗೆ ನೋಬೆಲ್ ವರ್ಲ್ಡ್ ರೆಕಾರ್ಡ್ಸ್: ದಾಖಲೆ ಬರೆದಿದ್ದ ರಕ್ತದಾನ ಶಿಬಿರ

blank

ಮಂಡ್ಯ: ರಾಜ್ಯದಲ್ಲಿಯೇ ಮೊದಲ ಬಾರಿಗೆ ನಗರದಲ್ಲಿ ಆಯೋಜಿಸಿದ್ದ ದಿನದ 24 ಗಂಟೆ ರಕ್ತ ಸಂಗ್ರಹಿಸಿದ ಶಿಬಿರ ನೋಬೆಲ್ ವರ್ಲ್ಡ್ ರೆಕಾರ್ಡ್ಸ್‌ಗೆ ಭಾಜನವಾಗಿದೆ. ಇದರೊಂದಿಗೆ ದಾಖಲೆ ಬರೆದ ಜೀವಧಾರೆ ಟ್ರಸ್ಟ್‌ನ ಪ್ರಯತ್ನಕ್ಕೆ ಪ್ರಶಸ್ತಿಯ ಮುಡಿಗೇರಿದೆ.
ನೊಂದ ಜನಗಳ ಜತೆ ನಮ್ಮ ಹೆಜ್ಜೆ ಎನ್ನುವ ಘೋಷ ವಾಕ್ಯದೊಂದಿಗೆ ಹಲವು ವರ್ಷದಿಂದ ರಕ್ತದಾನ ಶಿಬಿರ ಆಯೋಜಿಸುತ್ತಿರುವ ಜೀವಧಾರೆ ಟ್ರಸ್ಟ್, ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮದಿನದ ಅಂಗವಾಗಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಿನದ 24 ಗಂಟೆಯೂ ರಕ್ತ ಸಂಗ್ರಹ ಮಾಡಿದ ವಿಶೇಷ ದಾಖಲೆಗೆ ಪಾತ್ರವಾಗಿತ್ತು.
ಕಾರ್ಗಿಲ್ ವಿಜಯೋತ್ಸವ, ಸುಭಾಷ್ ಚಂದ್ರ ಬೋಸ್, ಭಗತ್‌ಸಿಂಗ್ ನೆನಪಿನಾರ್ಥ ಜೀವಧಾರೆ ಟ್ರಸ್ಟ್ ಶಿಬಿರ ಆಯೋಜಿಸಿಕೊಂಡು ಬರುತ್ತಿದೆ. ಅದೇ ರೀತಿ ಈ ಬಾರಿ ದಾಖಲೆ ಬರೆಯುವ ಗುರಿಯೊಂದಿಗೆ ವಿನೂತನ ಪ್ರಯತ್ನಕ್ಕೆ ಮುಂದಾಯಿತು. ಟ್ರಸ್ಟ್‌ನ ವತಿಯಿಂದ ಇದುವರೆಗೂ 344 ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಸುಮಾರು 43 ಸಾವಿರ ಯೂನಿಟ್ ರಕ್ತ ಸಂಗ್ರಹಿಸಿ ಸೈನಿಕರ ಆಸ್ಪತ್ರೆಯನ್ನೂ ಒಳಗೊಂಡಂತೆ ಸರ್ಕಾರಿ ರಕ್ತನಿಧಿ ಕೇಂದ್ರಗಳಿಗೆ ಹಸ್ತಾಂತರ ಮಾಡಿದ ಹೆಗ್ಗಳಿಗೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ನಡೆಸಿದ ಶಿಬಿರ ದಾಖಳೆ ಬರೆದಿದೆ.
ನೊಂದ ಜನರಿಗೆ ನೆರವಾಗುವ ಉದ್ದೇಶವನ್ನಿಟ್ಟುಕೊಂಡು ಸೇವೆ ಸಲ್ಲಿಸುತ್ತಿರುವ ಜೀವಧಾರೆ ಟ್ರಸ್ಟ್, ಎಂದಿಗೂ ಪ್ರಶಸ್ತಿ ಹಾಗೂ ಹೊಗಳಿಕೆಯ ಹಿಂದೆ ಬಿದ್ದಿಲ್ಲ. ಬದಲಿಗೆ ಪ್ರತಿ ವರ್ಷವೂ ಶಿಬಿರ ಆಯೋಜಿಸಿ ರಕ್ತ ಸಂಗ್ರಹಿಸುವ ಕಾಯಕವನ್ನು ತಪ್ಪದೇ ಮಾಡಿಕೊಂಡು ಬರುತ್ತಿದೆ. ಮಾತ್ರವಲ್ಲದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಹಾಗೂ ಹುತಾತ್ಮರಾದವರಿಗೆ ಪ್ರಶಸ್ತಿ ನೀಡಿ ಗೌರವ ಸಲ್ಲಿಸುವ ಮತ್ತು ಸೇನೆಯಿಂದ ನಿವೃತ್ತಿಯಾಗಿ ತಾಯ್ನಡಿಗೆ ಆಗಮಿಸಿದ ಸೈನಿಕರನ್ನು ರಾಜ ಮರ್ಯಾದೆಯಲ್ಲಿ ಸ್ವಾಗತಿಸಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಗುತ್ತದೆ. ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡು ಸೈನಿಕರಿಗೆ ಗೌರವಿಸಲು ಹೊರ ಜಿಲ್ಲೆ ಹಾಗೂ ರಾಜ್ಯಕ್ಕೆ ಹೋಗಿರುವುದು ಇದೆ. ಇದರಿಂದಲೇ ಜೀವಧಾರೆ ಟ್ರಸ್ಟ್‌ಗೆ ಜಿಲ್ಲೆಯಲ್ಲಿ ವಿಶೇಷ ಸ್ಥಾನವಿದೆ.
ಜನವರಿಯಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ನಿರೀಕ್ಷೆಗೂ ಮೀರಿದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಶಿಬಿರ ಸಂಬಂಧ 128 ಹಳ್ಳಿಗೆ ಭೇಟಿ ಪ್ರಚಾರ ಮಾಡಲಾಗಿತ್ತು. ಸಚಿವರು, ಶಾಸಕರು, ಜಿಲ್ಲಾಮಟ್ಟದ ಅಧಿಕಾರಿಗಳು, ಸಂಘಟನೆಗಳಿಂದ ನಿರೀಕ್ಷೆಗೂ ಮೀರಿದ ಬೆಂಬಲ ಸಿಕ್ಕಿತು. ಇದೆಲ್ಲದರ ಪರಿಣಾಮ ಒಂದೇ ಶಿಬಿರದಲ್ಲಿ ಬರೋಬರಿ 1,525 ಯೂನಿಟ್ ರಕ್ತ ಸಂಗ್ರಹ ಮಾಡಿದ ಮೈಲಿಗಲ್ಲನ್ನು ಜೀವಧಾರೆ ಸ್ಥಾಪಿಸಿತ್ತು. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಗಿಯಾಗಿದರು.

blank

ಜೀವಧಾರೆಗೆ ನೋಬೆಲ್ ವರ್ಲ್ಡ್ ರೆಕಾರ್ಡ್ಸ್: ದಾಖಲೆ ಬರೆದಿದ್ದ ರಕ್ತದಾನ ಶಿಬಿರ

ನೋಬೆಲ್ ವರ್ಲ್ಡ್ ರೆಕಾರ್ಡ್ಸ್
ಇದೇ ಮೊದಲ ಬಾರಿಗೆ ಹಗಲು ರಾತ್ರಿ ರಕ್ತಸಂಗ್ರಹ ಶಿಬಿರ ಆಯೋಜಿಸಲಾಗಿತ್ತು. ವಿಶೇಷವೆಂದರೆ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಶೇಖ್ ತನ್ವೀರ್ ಆಸಿಫ್, ಪಿಎಸ್‌ಐಗಳಾದ ರವಿಕುಮಾರ್, ಜಗದೀಶ್ ಸೇರಿದಂತೆ ಹಲವು ಗಣ್ಯರು ರಕ್ತದಾನ ಮಾಡಿ ಶಿಬಿರಕ್ಕೆ ಶುಭ ಹಾರೈಸಿದರು. ಮಿಮ್ಸ್‌ನ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ರಕ್ತನಿಧಿ ಸಿಬ್ಬಂದಿ ಶಿಬಿರದ ಯಶಸ್ಸಿಗೆ ಕೈಜೋಡಿಸಿದರು. ಇವರು 3 ಪಾಳಿಯಲ್ಲಿ ಕಾರ್ಯನಿರ್ವಹಿಸಿದರು. ಸರ್ಕಾರಿ ಆಸ್ಪತ್ರೆಯಿಂದ 150 ಹಾಸಿಗೆ ವ್ಯವಸ್ಥೆ ಒದಗಿಸಲಾಗಿತ್ತು. ಅಂದಿನ ಶಿಬಿರದಲ್ಲಿ ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯ ಪ್ರತಿನಿಧಿಗಳು ಪಾಲ್ಗೊಂಡು ವೀಕ್ಷಣೆ ಮಾಡಿದರು. ಅದರಂತೆ ಏ.7ರಂದು ಪ್ರಶಸ್ತಿಯನ್ನು ೋಷಣೆ ಮಾಡಲಾಯಿತು.
ಅಂದು ಸಂತೆಕಸಲಗೆರೆ ಭೂಮಿ ಸಿದ್ದೇಶ್ವರ ಸ್ವಾಮಿ ಬಸಪ್ಪನಿಗೆ ಪೂಜೆ ಸಲ್ಲಿಸಿ ಶಿಬಿರಕ್ಕೆ ಚಾಲನೆ ನೀಡಲಾಗಿತ್ತು. ಮೊದಲ ದಿನದ ರಾತ್ರಿ 10ಗಂಟೆ ಹೊತ್ತಿಗೆ 1200 ಯೂನಿಟ್ ರಕ್ತಸಂಗ್ರಹವಾಗಿತ್ತು. ಈ ಸಮಯದಲ್ಲಿ ಗುರಿ ತಲುಪುವ ಬಗ್ಗೆ ಕೊಂಚ ಗೊಂದಲವೂ ಇತ್ತು. ಆದರೆ ಯುವಕರು ರಾತ್ರಿಯಾದರೂ ಆಗಮಿಸಿ ರಕ್ತದಾನ ಮಾಡಿದರು. ಮೊದಲೇ ನಿಗದಿಪಡಿಸಿದಂತೆ ಶುಕ್ರವಾರ ಬೆಳಗ್ಗೆ 8ಗಂಟೆಗೆ ಶಿಬಿರ ಮುಕ್ತಾಯವಾಗಬೇಕಿತ್ತಾದರೂ ದಾನಿಗಳ ಸಂಖ್ಯೆ ಇಳಿಕೆಯಾಗಲೇ ಇಲ್ಲ. ಇದರಿಂದಾಗಿ ಕೆಲ ಗಂಟೆ ಮುಂದುವರೆಸಲಾಯಿತು. ಆದಾಗ್ಯೂ ಒತ್ತಾಯದಲ್ಲಿಯೇ ಶಿಬಿರವನ್ನು ಮುಕ್ತಾಯಗೊಳಿಸಬೇಕಾಯಿತು. ಇದರೊಂದಿಗೆ ಜೀವಧಾರೆ ಟ್ರಸ್ಟ್ ಅಂದುಕೊಂಡ ಗುರಿ ಸಾಧಿಸಿತು. ಭಾನುವಾರ ಸಂತೆಕಸಲಗೆರೆ ಭೂಮಿ ಸಿದ್ದೇಶ್ವರ ಸ್ವಾಮಿ ಸನ್ನಿದಿಯಲ್ಲಿ ಟ್ರಸ್ಟ್‌ನ ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಡಿಸಿ ಡಾ.ಕುಮಾರ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿಎಚ್‌ಒ ಡಾ.ಕೆ.ಮೋಹನ್ ಇತರರಿದ್ದರು.
ಶಿಬಿರದಲ್ಲಿ 1,525 ಯೂನಿಟ್ ರಕ್ತಸಂಗ್ರಹವಾಯಿತು. ಈ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ 213 ಯೂನಿಟ್, ಆದಿಚುಂಚನಗಿರಿ ಆಸ್ಪತ್ರೆಗೆ 106 ಯೂನಿಟ್, ಬೆಂಗಳೂರು ಕಮಾಂಡೋ ಹಾಸ್ಪಿಟಲ್ಗೆ 57 ಯೂನಿಟ್, ಮಂಡ್ಯ ಜಿಲ್ಲಾಸ್ಪತ್ರೆಗೆ 1,011 ಯೂನಿಟ್, ಚಾಮರಾಜನಗರ ಜಿಲ್ಲಾಸ್ಪತ್ರೆಗೆ 138 ಯೂನಿಟ್ ರಕ್ತವನ್ನು ಹಸ್ತಾಂತರ ಮಾಡಲಾಯಿತು. 345ನೇ ರಕ್ತದಾನ ಶಿಬಿರದಲ್ಲಿ 1,525 ಯೂನಿಟ್ ಸಂಗ್ರಹಿಸುವ ಮೂಲಕ ಜೀವಧಾರೆ ಟ್ರಸ್ಟ್ ತನ್ನ ಹಳೆಯ ದಾಖಲೆಯನ್ನು ಅಳಿಸಿಹಾಕಿದೆ. 2019ರಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಗರದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಅಂದು ಒಂದೇ ದಿನ ಬರೋಬರಿ 904 ಯೂನಿಟ್ ರಕ್ತ ಸಂಗ್ರಹವಾಗಿತ್ತು. ಇದು ಈವರೆಗಿನ ದಾಖಲೆಯಾಗಿ ಉಳಿದಿತ್ತು. ಕಳೆದ ವರ್ಷ ಸುಭಾಷ್ ಚಂದ್ರ ಬೋಸ್ ಜನ್ಮದಿನಕ್ಕಾಗಿ ನಗರದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 750 ಜನರು ರಕ್ತದಾನ ಮಾಡಿದರು.

ಜೀವಧಾರೆಗೆ ನೋಬೆಲ್ ವರ್ಲ್ಡ್ ರೆಕಾರ್ಡ್ಸ್: ದಾಖಲೆ ಬರೆದಿದ್ದ ರಕ್ತದಾನ ಶಿಬಿರ

ಇದೊಂದು ಅವಿಸ್ಮರಣೀಯ ಕ್ಷಣ. ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಅಂದಿನ ಶಿಬಿರ ಅಭೂತಪೂರ್ವ ಯಶಸ್ಸು ಕಾಣಲು ಅಧಿಕಾರಿಗಳು, ಸಂಘ ಸಂಸ್ಥೆಗಳು ಸಹಕರಿಸಿದರು. ಟ್ರಸ್ಟ್‌ನ ಸದಸ್ಯರು ಅವಿರತವಾಗಿ ಶ್ರಮಿಸಿದರು. ಆದ್ದರಿಂದ ಈ ಪ್ರಶಸ್ತಿಯನ್ನು ಅವರೆಲ್ಲರಿಗೂ ಅರ್ಪಿಸುತ್ತೇನೆ.
ನಟರಾಜು
ಜೀವಧಾರೆ ಟ್ರಸ್ಟ್ ಅಧ್ಯಕ್ಷ

ಜೀವಧಾರೆಗೆ ನೋಬೆಲ್ ವರ್ಲ್ಡ್ ರೆಕಾರ್ಡ್ಸ್: ದಾಖಲೆ ಬರೆದಿದ್ದ ರಕ್ತದಾನ ಶಿಬಿರ

Share This Article

ಪ್ರತಿದಿನ ಒಂದು ಕಪ್ ಅರಿಶಿನ ಶುಂಠಿ ಚಹಾ ಕುಡಿದು ಈ ಎಲ್ಲಾ ಸಮಸ್ಯೆಗಳಿಗೆ ಗುಡ್​​ ಬಾಯ್​​ ಹೇಳಿ | Immunity

Immunity: ನಿಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರೆ, ಅಡುಗೆಮನೆಯಲ್ಲಿರುವ ಅರಿಶಿನ ಮತ್ತು ಶುಂಠಿ ಪದಾರ್ಥಗಳು ಅದನ್ನು…

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…