ಅಹಮದಾಬಾದ್: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.
ಅವರು ಶನಿವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತ, ಈ ವಿಷಯವನ್ನು ಅಭಿಪ್ರಾಯವಾಗಿ ಹೇಳಿದ್ದರು. ಎಪತ್ತು ವರ್ಷಗಳ ಹಿಂದೆಯೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರಬೇಕಾಗಿತ್ತು. ಆದರೆ, ಕಾಂಗ್ರೆಸ್ಸಿಗರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿಭಜನೆಯ ಪ್ರತೀಕ ಎಂಬಂತೆ ಬಿಂಬಿಸುತ್ತಿದ್ದಾರೆ. ಇದೇ ರಾಜಕಾರಣಿಗಳು ಮತ್ತು ನೇತಾರರು ಅಂದು ಧಾರ್ಮಿಕ ನೆಲೆಯಲ್ಲಿ ದೇಶ ವಿಭಜನೆ ನಡೆಯುವಾಗ ಮೌನದ ಮೊರೆ ಹೋಗಿದ್ದರು ಎಂದು ಟೀಕಿಸಿದರು.
ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘನ್ನಲ್ಲಿ ಹಿಂದುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಆ ದೇಶಗಳಲ್ಲಿ ಅವರನ್ನು ಧರ್ಮದ ನೆಲೆಯಲ್ಲಿ ಹಿಂಸಿಸಲಾಗುತ್ತಿದೆ. ಕಾಂಗ್ರೆಸ್ನವರು ಪ್ರಮಾದವೆಸಗಿದ್ದಾರೆ. ಅದನ್ನು ನಾವು ಸರಿಪಡಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಬೇಕು ಎಂದು ಸಾರಂಗಿ ಹೇಳಿದ್ದಾರೆ.
ಉಚಿತ ವಿದ್ಯುತ್, ನೀರು ಕೊಡುತ್ತೇವೆ ಎಂಬ ಭರವಸೆ ನೀಡಿ ಚುನಾವಣೆ ಗೆಲ್ಲಬಹುದೇ ಹೊರತು, ಅವುಗಳೆಲ್ಲ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲಾರವು ಎಂದು ಸಾರಂಗಿ ಹೇಳಿದ್ದಾರೆ. (ಏಜೆನ್ಸೀಸ್)
#WATCH Union Minister Pratap Sarangi in Surat, Gujarat: Those who do not accept Vande Mataram have no right to live in India. (18.01.2020) pic.twitter.com/zEr4R8Z7Op
— ANI (@ANI) January 18, 2020