ಶಿವಮೊಗ್ಗ: ಉಮಾಭಾರತಿ ಅವರಂತಹ ದೊಡ್ಡ ನಾಯಕರೇ ಅಶಿಸ್ತು ತೋರಿದಾಗ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟಿಸಿರುವುದು ಇದೇ ಮೊದಲೇನಲ್ಲ. ನಾಳೆ ನಾನು ಪಕ್ಷದ ವಿರುದ್ಧ ಹೇಳಿಕೆ ನೀಡಿ ಅಶಿಸ್ತು ತೋರಿದರೂ ವರಿಷ್ಠರು ಇಂಥದ್ದೇ ಕ್ರಮ ಜರುಗಿಸುತ್ತಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಕಾರ್ಯಕರ್ತರನ್ನು ಆಧರಿಸಿದ ಪಕ್ಷ. ಎಷ್ಟೇ ದೊಡ್ಡ ನಾಯಕರಾಗಿದ್ದರೂ ಅಶಿಸ್ತನ್ನು ಸಹಿಸುವುದಿಲ್ಲ. ಮೊದಲು ದೇಶ, ಬಳಿಕ ಪಕ್ಷ ಎಂಬುದು ಬಿಜೆಪಿ ಸಿದ್ಧಾಂತ. ಇಲ್ಲಿ ಯಾರೂ ದೊಡ್ಡವರಲ್ಲ ಎಂದರು.
ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿರುವ ಬಗ್ಗೆ ಪ್ರತಿಕ್ರಿಯಿಸಿದ ಚನ್ನಬಸಪ್ಪ, ಬಿಜೆಪಿಗೆ ಸೀಟುಗಳು ಮುಖ್ಯವಲ್ಲ. ಸೊನ್ನೆಯಿಂದಲೇ ಆರಂಭವಾದ ಪಕ್ಷ ನಮ್ಮದು. ಮುಂದೆ ಸೊನ್ನೆ ಬಂದರೂ ಮತ್ತೆ ಪಕ್ಷಕ್ಕೆ ಅಧಿಕಾರ ಸಿಗುವ ಬಗ್ಗೆ ಸಂಶಯ ಬೇಡ ಎಂದು ಹೇಳಿದರು.
ಯತ್ನಾಳ್ ಅಭಿಮಾನಿಗಳು ಸಹಜವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಅವರು ಬಿಜೆಪಿ ವಿರುದ್ಧ ಪ್ರತಿಭಟನೆಯನ್ನೂ ಮಾಡಬಹುದು. ಅವರಿಗೆ ಪಕ್ಷದ ಸಿದ್ಧಾಂತದ ಬಗ್ಗೆ ಸ್ಪಷ್ಟತೆಯಿಲ್ಲ. ಪಕ್ಷದ ಶಿಸ್ತು ಅವರಿಗೆ ಅರ್ಥವಾಗುವುದಿಲ್ಲ. ಯಾವ ಕಾರ್ಯಕರ್ತನೂ ಎದೆಹೊಡೆದುಕೊಳ್ಳುವುದು ಬೇಡ. ಈಗಿನ ಬೆಳವಣಿಗೆಯಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂತಹ ಅನೇಕ ಘಟನೆಗಳು ಈ ಹಿಂದೆಯೂ ನಡೆದಿವೆ. ಪಕ್ಷ ಎಲ್ಲವನ್ನೂ ಎದುರಿಸಿ ಬೆಳೆದಿದೆ. ಇಲ್ಲಿ ವ್ಯಕ್ತಿಗತವಾಗಿ ಯಾರೂ ಯೋಚನೆ ಮಾಡುವುದಿಲ್ಲ. ಸಿದ್ಧಾಂತಕ್ಕೋಸ್ಕರ, ದೇಶಕ್ಕಾಗಿ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಯಾರೂ ಧೃತಿಗೆಡುವುದು ಬೇಡ ಎಂದರು.