ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಸಂತ್ರಸ್ತೆಯ ತಾಯಿ ಆಶಾದೇವಿ ಅವರು ಕ್ಷಮಿಸಬೇಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಮಾಡಿರುವ ಟ್ವೀಟ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇಂದಿರಾ ಜೈಸಿಂಗ್ ಈ ರೀತಿಯ ಸಲಹೆ ನೀಡಲು ಅವರು ಯಾರು. ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಎಂದು ಇಡೀ ದೇಶವೆ ಹೇಳುತ್ತಿದೆ. ಹೀಗಿರುವಾಗ ಇಂದಿರಾ ಜೈಸಿಂಗ್ ಅವರು ಮಾನವ ಹಕ್ಕುಗಳ ಹೆಸರಿನಲ್ಲಿ ಹಣ ಮಾಡಲು ಈ ರೀತಿ ಹೇಳುತ್ತಿದ್ದಾರೆ ಎಂದು ಸಂತ್ರಸ್ತೆ ತಾಯಿ ಆಶಾದೇವಿ ಆಕ್ರೋಶ ವ್ಯಕ್ತಪಡಿಸಿದರು.
ಇಂದಿರಾ ಜೈಸಿಂಗ್ ಅವರ ಈ ನಡೆಯಿಂದ ಅತ್ಯಾಚಾರಕ್ಕೆ ಒಳಗಾದವರಿಗೆ ನ್ಯಾಯ ದೊರೆಯುವುದಿಲ್ಲ. ಈ ರೀತಿಯ ಹೇಳಿಕೆ ನೀಡಲು ಅವರಿಗೆ ಹೇಗೆ ಧೈರ್ಯ ಬಂತು. ಇವರನ್ನು ಸುಪ್ರೀಂಕೋರ್ಟ್ನಲ್ಲಿ ಹಲವು ಬಾರಿ ನೋಡಿದ್ದೇನೆ. ಒಮ್ಮೆಯೂ ನನ್ನ ಯೋಗಕ್ಷೇಮ ವಿಚಾರಿಸಲಿಲ್ಲ. ಆದರೆ ಅಪರಾಧಿಗಳ ಪರ ಮಾತನಾಡುತ್ತಿದ್ದಾರೆ. ಅಪರಾಧಿಗಳ ಪರವಾಗಿ ಮಾತನಾಡಿ ಜೀವನೋಪಾಯಕ್ಕಾಗಿ ಹಣ ಸಂಪಾದಿಸುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಇಂದಿರಾ ಜೈಸಿಂಗ್ರಂತ ವ್ಯಕ್ತಿಗಳು ಮಾನವ ಹಕ್ಕುಗಳ ಅಸ್ತ್ರ ಬಳಸಿ ಹಣ ಸಂಪಾದನೆ ಮಾಡುತ್ತಿದ್ದಾರೆ. ನನಗೆ ಅವರ ಸಲಹೆ ಅಗತ್ಯ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ರಾಜೀವ್ ಗಾಂಧಿ ಹಂತಕರಲ್ಲಿ ಒಬ್ಬಳಾದ ನಳಿನಿಯನ್ನು ಕ್ಷಮಿಸಿ ಮರದಂಡೆ ಶಿಕ್ಷೆಯಿಂದ ಪಾರು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇದೆ ರೀತಿ ಆಶಾದೇವಿ ಅವರು ಅಪರಾಧಿಗಳನ್ನು ಕ್ಷಮಿಸಿ ಮಾದರಿಯಾಗಬೇಕು ಎಂದು ಟ್ವೀಟ್ ಮಾಡಿದ್ದರು. (ಏಜೆನ್ಸೀಸ್)