ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಮರಣದಂಡನೆ ಶಿಕ್ಷೆಗೆ ದೆಹಲಿ ನ್ಯಾಯಾಲಯ ನೂತನ ಡೆತ್ ವಾರೆಂಟ್ ಹೊಡಿಸಿದೆ.
ಶುಕ್ರವಾರ ಹೊರಡಿಸಿರುವ ಡೆತ್ ವಾರೆಂಟ್ ಪ್ರಕಾರ ಫೆಬ್ರವರಿ 1ರ ಬೆಳಗ್ಗೆ 6 ಗಂಟೆಗೆ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಗುತ್ತದೆ. ಅಪರಾಧಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾಧಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಿರಸ್ಕರಿಸಿದ ಬೆನ್ನಲ್ಲೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಸತೀಶ್ ಕುಮಾರ್ ಅರೋರ ಅವರು ವಾರೆಂಟ್ ಜಾರಿ ಮಾಡಿದ್ದಾರೆ.
ವಿನಯ್ ಶರ್ಮ, ಮುಕೇಶ್ ಸಿಂಗ್, ಅಕ್ಷಯ್ ಕುಮಾರ್ ಸಿಂಗ್ ಮತ್ತು ಪವನ್ ಗುಪ್ತ ನಾಲ್ವರು ಅಪರಾಧಿಗಳನ್ನು ಜನವರಿ 22ರಂದು ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಬೇಕಾಯಿತು. ಈ ಸಂಬಂಧ ವಿಚಾರಣಾಧೀನ ನ್ಯಾಯಾಲಯ ಕಳೆದ ವಾರ ತೀರ್ಪು ನೀಡಿ, ಡೆತ್ ವಾರೆಂಟ್ ಹೊರಡಿಸಿತ್ತು. ಆದಾಗ್ಯು ಅಪರಾಧಿ ಸಲ್ಲಿಸಿರುವ ಕ್ಷಮಾಧಾನ ಅರ್ಜಿ ಇತ್ಯರ್ಥ ಆಗುವವರೆಗೂ ಗಲ್ಲುಶಿಕ್ಷೆ ಸಾಧ್ಯವಿಲ್ಲ. ಹೀಗಾಗಿ ಹೊಸ ದಿನಾಂಕ ನಿಗದಿ ಮಾಡಿ ಎಂದು ತಿಹಾರ್ ಜೈಲು ಅಧಿಕಾರಿಗಳು ಕೋರ್ಟ್ ಮೊರೆ ಹೊಗಿದ್ದರು.
ಮುಕೇಶ್ ಸಿಂಗ್ ಮತ್ತು ವಿನಯ್ ಶರ್ಮಾ ಕಾನೂನಿನಲ್ಲಿ ಇದ್ದ ಕೊನೆಯ ಅವಕಾಶ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಮಂಗಳವಾರವಷ್ಟೇ ಮುಕೇಶ್ ಸಿಂಗ್ ಕ್ಷಮಾಧಾನ ಅರ್ಜಿಯನ್ನು ಸಲ್ಲಿಸಿದ್ದನು. ಗೃಹ ಸಚಿವಾಲಯದ ಮೂಲಕ ಗುರುವಾರ ರಾತ್ರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನಿವಾಸಕ್ಕೆ ಕ್ಷಮಾಧಾನ ಅರ್ಜಿ ತಲುಪಿತ್ತು. ಬಳಿಕ ಶುಕ್ರವಾರ ಮಧ್ಯಾಹ್ನ ರಾಷ್ಟ್ರಪತಿಗಳು ಕ್ಷಮಾಧಾನ ಅರ್ಜಿಯನ್ನು ತಿರಸ್ಕರಿಸಿದರು.
ಉಳಿದ ಮೂವರು ಅಪರಾಧಿಗಳು ಕ್ಷಮಾಧಾನ ಅರ್ಜಿ ಸಲ್ಲಿಸಬೇಕಾಗಿದೆ. ಗಲ್ಲಿಗೇರಿಸುವ ಮುನ್ನ ಯಾವಾಗಬೇಕಾದರೂ ಅಪರಾಧಿಗಳು ಅದನ್ನು ಮಾಡಬಹುದಾಗಿದೆ. ಪ್ರತಿ ಬಾರಿ ಅರ್ಜಿಯನ್ನು ಸಲ್ಲಿಸಿದಾಗ ಅದನ್ನು ಪರಿಶೀಲಿಸುವ ಅವಶ್ಯಕತೆ ಎದುರಾಗುವುದರಿಂದ ಮರಣದಂಡನೆ ಶಿಕ್ಷೆ ಮುಂದೆ ಹೋಗುವ ಸಾಧ್ಯತೆ ಇದೆ. (ಏಜೆನ್ಸೀಸ್)