ಮಂಡ್ಯ: ನಿಮ್ಮೆಲ್ಲರ ಆಶೀರ್ವಾದಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದಾರೆ. ಯಾವ ಸಮಸ್ಯೆಯೂ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಯೋಜಿಸಿದ್ದ ಕಾಂಗ್ರೆಸ್ ಸಭೆಯಲ್ಲಿ ನಮ್ಮ ವಿರುದ್ಧ ಆರೋಪ ಮಾಡಿದ್ದಾರೆ. ಬಡಜನರಿಗೆ ನಿವೇಶನ ಕೊಡುತ್ತೇನೆಂದು ಹಣ ಕಟ್ಟಿಸಿಕೊಂಡಿದ್ದಾರೆಂದಿದ್ದಾರೆ. ರಾಮನಗರದ ರಾಜಕಾರಣಕ್ಕೆ ಎಚ್.ಡಿ.ದೇವೇಗೌಡ ಅವರು ಪದಾರ್ಪಣೆ ಮಾಡಿ 30 ವರ್ಷವಾಗಿದೆ. ಅದಾದ ನಂತರ ಎಚ್.ಡಿ.ಕುಮಾರಸ್ವಾಮಿ ಅವರ ಜನ ಸೇವೆ ಮಾಡಿರುವುದು ಎಲ್ಲರೂ ನೋಡಿದ್ದಾರೆ. ಯಾವ ಹಣವನ್ನು ನಾವು ನಿವೇಶನ ಕೊಡುತ್ತೇವೆಂದು ಕಟ್ಟಿಸಿಕೊಂಡಿಲ್ಲ. ಆದ್ದರಿಂದ ಈ ಆರೋಪ ಮಾಡಿರುವವರನ್ನೇ ಕೇಳಿ ಎಂದರು.
ಎಚ್.ಡಿ.ದೇವೇಗೌಡ ಅವರ ಮಾರ್ಗದರ್ಶನದಲ್ಲಿ ಜೂನ್ ತಿಂಗಳಿಂದ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಕುಮಾರಸ್ವಾಮಿ ಅವರ ಸಹಕಾರದೊಂದಿಗೆ ಯುವಕರ ಜತೆ ಸಂಘಟನೆ ಮಾಡುತ್ತಿದ್ದೇವೆ. ಇನ್ನು ಪಹಲ್ಗಾಮ್ ಘಟನೆಗೆ ಸಂಬಂಧಿಸಿದಂತೆ ತಕ್ಕ ಉತ್ತರ ಕೊಡಲು ಯಾರ ಮಾತನ್ನೂ ಕೇಳುವ ಅವಶ್ಯಕತೆ ಇಲ್ಲ. ಆಪರೇಷನ್ ಸಿಂಧೂರದ ಮೂಲಕವೇ ಉಗ್ರರು ಹಾಗೂ ಅವರಿನ್ನು ಸಾಕುತ್ತಿರುವವರಿಗೆ ಸಂದೇಶ ನೀಡಿದ್ದೇವೆ ಎಂದು ಹೇಳಿದರು.
