ರೋಣ: ಪಕ್ಷಿ ಸಂಕುಲಗಳ ಜೀವನ ಕ್ರಮಕ್ಕೆ ಜಿಲ್ಲೆಯ ವಾತಾವರಣ ಸೂಕ್ತವಾಗಿದೆ. ಪಕ್ಷಿಗಳ ಉಳಿವಿಗೆ ಗಿಡಮರಗಳು ಅಗತ್ಯವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸಮೀಪದ ಜಿಗಳೂರು ಕೆರೆಯ ಪಕ್ಕದಲ್ಲಿ ಕರ್ನಾಟಕ ಅರಣ್ಯ ಇಲಾಖೆ, ಪ್ರಾದೇಶಿಕ ಅರಣ್ಯ ವಲಯ ಗದಗ ಸಹಯೋಗದಲ್ಲಿ ಶನಿವಾರ ಸಸ್ಯೋದ್ಯಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜಿಗಳೂರು ಕೆರೆಯ ಪಕ್ಕದ 13 ಎಕರೆ ಜಮೀನಿನಲ್ಲಿ ಟ್ರೀ ಪಾರ್ಕ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ರೋಣ ತಾಲೂಕಿನ ಸೌಂದರ್ಯಕರಣಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.
ಟ್ರೀ ಪಾರ್ಕ್ ನಿರ್ಮಾಣ ಕಾಮಗಾರಿಗೆ ಮೊದಲ ಹಂತದಲ್ಲಿ 1 ಕೋಟಿ ರೂ. ನೀಡಲಾಗಿದೆ. ಹಂತ ಹಂತವಾಗಿ ಒಟ್ಟು 5 ಕೋಟಿ ರೂ. ವೆಚ್ಚದಲ್ಲಿ ಈ ಪಾರ್ಕ್ ನಿರ್ಮಾಣವಾಗಲಿದೆ. ಬಿಂಕದಕಟ್ಟಿಯಲ್ಲಿರುವ ಮಾದರಿಯಂತೆ ಸುಂದರವಾದ ಟ್ರೀ ಪಾರ್ಕ್ ನಿರ್ಮಾಣ ಮಾಡಲಾಗುವುದು. ಜೂನ್ ವೇಳೆಗೆ 2 ಸಾವಿರ ಗಿಡ ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಗಿಡಮರಗಳು ಹೆಚ್ಚಾದಾಗ ಮಾತ್ರ ವಿವಿಧ ಪ್ರಭೇದದ ಪಕ್ಷಿಗಳು ಕೆರೆಯ ವಾತಾವರಣಕ್ಕೆ ಬರುವುದರಿಂದ ಪಕ್ಷಿಪ್ರಿಯರಿಗೆ ಇದು ಒಳ್ಳೆಯ ಅವಕಾಶ ಸೃಷ್ಟಿಸಲಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಪರಶುರಾಮಪ್ಪ ಅಳಗವಾಡಿ, ವಿ.ಆರ್. ಗುಡಿಸಾಗರ, ಹೇಮಯ್ಯ ಹಿರೇಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ, ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಗದಗ ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಮ್ಮನವರ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಸವರಾಜ ನವಲಗುಂದ, ರಾಜಣ್ಣ ಸುಂಕದ ಇತರರು ಇದ್ದರು.