ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾಗಿರುವ ಅಪರಾಧಿ ಪವನ್ ಕುಮಾರ್ ಗುಪ್ತಾ ಪರ ವಕೀಲ ಎ.ಪಿ. ಸಿಂಗ್ಗೆ ನಕಲಿ ದಾಖಲೆ ಸಲ್ಲಿಸಿದ್ದಕ್ಕಾಗಿ ದೆಹಲಿ ಬಾರ್ ಕೌನ್ಸಿಲ್ ನೋಟಿಸ್ ನೀಡಿದೆ.
ವಕೀಲ ಎ.ಪಿ. ಸಿಂಗ್ಗೆ ನೀಡಿರುವ ನೋಟಿಸ್ ಎರಡು ವಾರಗಳಲ್ಲಿ ಉತ್ತರಿಸಲು ಸೂಚಿಸಲಾಗಿದೆ.
ಪವನ್ ಗುಪ್ತಾ ಪ್ರಕರಣ ನಡೆದ ಸಮಯದಲ್ಲಿ ಅಪ್ರಾಪ್ತ ಎಂಬ ಹೇಳಿಕೆಯನ್ನು ದೆಹಲಿ ಹೈಕೋರ್ಟ್ ತಳ್ಳಿ ಹಾಕಿತ್ತು. ಅಲ್ಲದೆ ಈ ಸಂಬಂಧ ನಕಲಿ ದಾಖಲೆ ಸಲ್ಲಿಸಿದ್ದ ವಕೀಲ ಎ.ಪಿ. ಸಿಂಗ್ಗೆ 25 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಜತೆಗೆ ಕೋರ್ಟ್ಗೆ ಗೈರಾಗುವ ವಕೀಲರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.
ವಕೀಲರ ಈ ನಡೆಯನ್ನು ನ್ಯಾಯಾಧೀಶ ಸುರೇಶ್ಕುಮಾರ್ ಕೈತ್, ದೆಹಲಿ ಬಾರ್ ಕೌನ್ಸಿಲ್ ಗಮನಕ್ಕೆ ತಂದಿದ್ದರು. ಈ ಬಗ್ಗೆ ವಕೀಲ ಎ.ಪಿ. ಸಿಂಗ್ ವಿರುದ್ಧ ಅಗತ್ಯ ಕ್ರಮಕ್ಕೆ ಆಗ್ರಹಿಸಿದ್ದರು. ಅಲ್ಲದೆ ಉದ್ದೇಶ ಪೂರ್ವಕವಾಗಿ ನಕಲಿ ಅಫಿಡವಿಟ್ನ್ನು ಸಲ್ಲಿಸಿದ್ದು ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಾರೆ ಎಂದಿತ್ತು.
ಅಪರಾಧಿ ಪವನ್ ಗುಪ್ತಾ ಇದೇ ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದಾನೆ. ಪ್ರಕರಣ ನಡೆದ ಸಮಯದಲ್ಲಿ ತಾನು ಅಪ್ರಾಪ್ತನಾಗಿದ್ದೆ ಎಂದು ವಾದಿಸಿದ್ದಾನೆ. ಇದರ ವಿಚಾರಣೆಯನ್ನು ಸುಪ್ರೀಂ ನಾಳೆ ( ಜನವರಿ 20) ಕೈಗೆತ್ತಿಕೊಳ್ಳಲಿದೆ. (ಏಜೆನ್ಸೀಸ್)