ನವದೆಹಲಿ: ನೇಪಾಳ ಪ್ರವಾಸಕ್ಕೆ ತೆರಳಿದ್ದ ಕೇರಳೀಯರ ತಂಡದಲ್ಲಿ ಸಾವಿಗೀಡಾದ ಎಂಟು ಮಂದಿಯ ಪೈಕಿ ಒಂದು ಕುಟುಂಬದ ಕುಡಿಯೊಂದು ಅದೃಷ್ಟವಶಾತ್ ಬದುಕಿ ಉಳಿದಿದೆ. ಎರಡನೇ ತರಗತಿ ಆ ಬಾಲಕನಿಗೆ ಮನೆಯವರ ಸಾವಿನ ವಿಚಾರ ಇನ್ನೂ ತಿಳಿದಿಲ್ಲ.
ಕೋಳಿಕ್ಕೋಡ್ ನಿವಾಸಿ ರಂಜಿತ್ ಕುಮಾರ್ ಮತ್ತು ಇಂದು ಲಕ್ಷ್ಮಿ ದಂಪತಿಯ ಹಿರಿಯ ಪುತ್ರ ಮಾಧವ್ ಬದುಕಿ ಉಳಿದ ಪುಟಾಣಿ. ಎರಡನೇ ತರಗತಿಯ ಮಾಧವ್ ರಾತ್ರಿ ಇನ್ನೊಂದು ಗುಂಪಿನವರ ಜತೆಗೆ ಮಲಗಿದ್ದರಿಂದ ಏನೂ ಆಗಿರಲಿಲ್ಲ ಎಂಬ ವಿಷಯ ಬಹಿರಂಗವಾಗಿದೆ.
ಕೋಳಿಕ್ಕೋಡ್ನಿಂದ ಸಂಬಂಧಿಕರೊಬ್ಬರು ಕರೆ ಮಾಡಿ ಮಾಧವ್ ಜತೆಗೆ ಮಾತನಾಡಿದ್ದು, ಆತನಿಗೆ ದುರಂತದ ಅರಿವು ಇಲ್ಲ ಎಂಬುದು ಗೊತ್ತಾಗಿತ್ತು. ಜತೆಗಿದ್ದ ಪ್ರವಾಸಿಗರ ಜತೆಗೂ ಮಾತನಾಡಿದ ವೇಳೆ, ಸಂಬಂಧಿಕರ ಜತೆಗೆ ಬೆಳಗ್ಗೆ ತಿಂಡಿಗೆ ಬಂದಾಗ ಇನ್ನೊಂದು ರೂಮಿನಲ್ಲಿ ಇದ್ದವರು ಯಾರೂ ಬಂದಿರಲಿಲ್ಲ. ಆತ ಅಮ್ಮ, ಅಪ್ಪ, ಸಹೋದರನ ಬಗ್ಗೆ ವಿಚಾರಿಸಿದ್ದ. ಆದರೆ, ದುರಂತದ ಬಗ್ಗೆ ಹೇಳಲು ಯಾರಿಗೂ ಧೈರ್ಯ ಇರಲಿಲ್ಲ ಎಂಬುದು ಗೊತ್ತಾಗಿತ್ತು. ಪ್ರವಾಸಿಗರ ಜತೆಗೆ ಮಾಧವ್ ಒಂಟಿಯಾಗಿದ್ದು, ಆತನನ್ನು ಕರೆತರಲು ರಂಜಿತ್ ಕುಮಾರ್ ಅವರ ಫ್ರೆಂಡ್ ಪ್ರತಾಪನ್ ಪಿಳ್ಳೈ ದೆಹಲಿಗೆ ತೆರಳಿದ್ದಾರೆ.
ಇದೇ ವೇಳೆ, ಮೃತರ ಪೋಸ್ಟ್ ಮಾರ್ಟಂ ಮುಗಿದಿದ್ದು, ಗುರುವಾರ ಪಾರ್ಥಿವ ಶರೀರಗಳು ಕೇರಳಕ್ಕೆ ತಲುಪುವ ನಿರೀಕ್ಷೆ ಇದೆ. (ಏಜೆನ್ಸೀಸ್)
ನೇಪಾಳ ದುರಂತ| ಮೂವರು ಮಕ್ಕಳ ಹುಟ್ಟುಹಬ್ಬಕ್ಕೆ ತೆರಳಿದ್ದ ಕೇರಳ ಕುಟುಂಬ ಮರಳಿದ್ದು ಶವವಾಗಿ