ಇಸ್ಲಾಮಾಬಾದ್: ಪಾಕಿಸ್ತಾನದ ಪೇಶಾವರದಲ್ಲಿ ಸಿಖ್ ಜನಾಂಗದ ಯುವಕನೊಬ್ಬನ ಕೊಲೆಯಾಗಿದೆ. ನನಕಾನದ ಸಾಹಿಬ್ ಗುರುದ್ವಾರದ ಮೇಲೆ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿದ ಬೆನ್ನಲ್ಲೇ ಈ ಕೊಲೆ ನಡೆದಿದೆ.
ಪೇಶಾವರದ ಚಮ್ಕಾನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹತ್ಯೆಗೈಯ್ಯಲಾಗಿದೆ. ರವೀಂದ್ರ ಸಿಂಗ್ (25) ಕೊಲೆಯಾದ ಸಿಖ್ ಯುವಕ. ಕೊಲೆ ಬಗ್ಗೆ ಈವರೆಗೆ ಯಾರನ್ನು ಬಂಧಿಸಿಲ್ಲ.
ಮಲೇಷ್ಯಾ ನಿವಾಸಿಯಾಗಿದ್ದ ರವೀಂದ್ರ ಸಿಂಗ್, ಹರ್ಮಿತ್ ಸಿಂಗ್ ಎಂಬ ಪತ್ರಕರ್ತನ ಸೋದರ. ಈತ ಪೇಶಾವರಕ್ಕೆ ಶಾಪಿಂಗ್ ಮಾಡಲು ಬಂದಿದ್ದನು.
ಶುಕ್ರವಾರವಷ್ಟೇ ಗುರು ನಾನಾಕ್ ಜನ್ಮ ಸ್ಥಳವಾದ ನನಕಾನ ಗುರುದ್ವಾರದ ಮೇಲೆ ಕಲ್ಲು ತೂರಾಟ ನಡೆದಿದ್ದ ಪ್ರದೇಶದ ಬಳಿ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲು, ಸಿಖ್ ನಿವಾಸಿಗಳ ರಕ್ಷಣೆಗೆ ಧಾವಿಸಲು ಭಾರತವು ಪಾಕಿಸ್ತಾನವನ್ನು ಆಗ್ರಹಿಸಿತ್ತು. ಪಾಕಿಸ್ತಾನ ಅಧ್ಯಕ್ಷ ಇಮ್ರಾನ್ ಖಾನ್ ಹತ್ಯೆಯನ್ನು ಖಂಡಿಸಿದ್ದಾರೆ.
ನನಕಾನ ಗುರುದ್ವಾರದ ಮೇಲಿನ ಕಲ್ಲು ತೂರಾಟವನ್ನು ಖಂಡಿಸಿರುವ ಬಿಜೆಪಿ, ಪಾಕಿಸ್ತಾನದಲ್ಲಿ ನಡೆದ ದೇಗುಲದ ಮೇಲಿನ ದಾಳಿಯನ್ನು ಅಲ್ಪ ಸಂಖ್ಯಾತರ ಮೇಲೆ ನಡೆದ ದಬ್ಬಾಳಿಕೆ ಎಂದಿದೆ.
ಆ ದೇಶಗಳಲ್ಲಿ ಅಲ್ಪಸಂಖ್ಯಾತರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಎಂದು ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)