ಶಿವಮೊಗ್ಗ: ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ದೇವಾಲಯಗಳನ್ನು ತೆರವುಗಳಿಸಿರುವುದನ್ನು ವಿರೋಧಿಸಿ ವಿಶ್ವ ಹಿಂದು ಪರಿಷತ್ ಹಾಗು ಬಜರಂಗದಳದ ಪ್ರಮುಖರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಾರ್ವಜನಿಕ ಸ್ಥಳ, ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಧಾರ್ಮಿಕ ಶ್ರದ್ಧಾ ಕೇಂದ್ರಗಳಾದ ದೇವಸ್ಥಾನ, ಚರ್ಚ್, ಮಸೀದಿ, ಗುರುದ್ವಾರ ಇತ್ಯಾದಿಗಳನ್ನು ಸಕ್ರಮಗೊಳಿಸುವ ಅಥವಾ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದಾದಾಗ ಮಾತ್ರ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಮಾಡಿರುವ ಆದೇಶವನ್ನು ವಿಶ್ವ ಹಿಂದು ಪರಿಷತ್ ಗೌರವಿಸುತ್ತದೆ. ಆದರೆ, ಮೈಸೂರು ಜಿಲ್ಲಾಡಳಿತ ಸುಪ್ರೀಂಕೋರ್ಟ್ ಆದೇಶದ ಅಂಶಗಳನ್ನು ಪರಿಗಣಿಸದೆ ದೇವಾಲಯ ಕೆಡವಿರುವುದು ಖಂಡನೀಯ ಎಂದರು.
ಸುಪ್ರೀಂಕೋರ್ಟ್ ಆದೇಶದಂತೆ ಪ್ರತಿ ದೇವಸ್ಥಾನಗಳಿಗೆ ಪ್ರತ್ಯೇಕ ನೋಟಿಸ್ ಜಾರಿ ಮಾಡಿ ಊರ್ಜಿತಗೊಳಿಸಲು ಮತ್ತು ಸ್ಥಳಾಂತರಿಸಲು ಬೇಕಾದಂತಹ ಕ್ರಮ ಕೈಗೊಂಡು ಹಿಂದು ದೇವಾಲಯಗಳನ್ನು ಉಳಿಸಿ ರಕ್ಷಣೆ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು. ವಿಹಿಂಪ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್, ಕಾರ್ಯದರ್ಶಿ ನಾರಾಯಣ ಜಿ. ವರ್ಣೇಕರ್, ನಗರಾಧ್ಯಕ್ಷ ಸತೀಶ್ ಮುಂಚೆಮನೆ, ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ಪ್ರಮುಖರಾದ ಸಚಿನ್ ರಾಯ್ಕರ್, ಎಸ್.ಆರ್.ಸುಧಾಕರ್, ಅಂಕುಶ್ ಇದ್ದರು.