More

    ನಾಗಲಮಡಿಕೆ ಸುಬ್ರಹ್ಮಣ್ಯಸ್ವಾಮಿ ಜಾತ್ರೆ ಸಂಪನ್ನ

    ಪಾವಗಡ: ನಾಗಲಮಡಿಕೆ ಸುಬ್ರಹ್ಮಣ್ಯಸ್ವಾಮಿಯ ಬ್ರಹ್ಮರಥೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

    ಪುಷ್ಯ ಶುದ್ಧ ಷಷ್ಠಿಯಂದು ಬೆಳಗ್ಗೆ 11.50ಕ್ಕೆ ಮಧುಗಿರಿ ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪಂಚಾಯಿತಿ ಸದಸ್ಯ ಚೆನ್ನಮಲ್ಲಯ್ಯ, ತಹಸೀಲ್ದಾರ್ ವರದರಾಜು ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಥಕ್ಕೆ ಹೂವು ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

    ಇದೇ ಮೊದಲ ಬಾರಿಗೆ ದೇವರ ದರ್ಶನ ಪಡೆಯಲು ಬ್ಯಾರಿಕೇಡ್ ನಿರ್ವಾಣ ಮಾಡಲಾಗಿತ್ತು, ರಾಜ್ಯ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ರಥೋತ್ಸವ ನಂತರ ಭಕ್ತರು ಉತ್ತರ ಪಿನಾಕಿನಿ ನದಿಯಲ್ಲಿ ಸ್ನಾನ ವಾಡಿ, ಗಂಗಮ್ಮನಿಗೆ ಪೂಜೆ ವಾಡಿ, ಪುಲಗಂ ಮತ್ತು ಬದನೆಕಾಯಿ ಬಜ್ಜಿ ಪ್ರಸಾದ ಸವಿದು ಉಪವಾಸ ವ್ರತ ಕೈಬಿಟ್ಟರು.

    20 ನಿಮಿಷ ಮೊದಲೇ ರಥೋತ್ಸವಕ್ಕೆ ಚಾಲನೆ: ಕರಪತ್ರಗಳಲ್ಲಿ ರಥೋತ್ಸವ 12.10ಕ್ಕೆ ಎಂದು ಮುದ್ರಿಸಿ, 11.50ಕ್ಕೇ ಚಾಲನೆ ನೀಡಲಾಯಿತು. ಇದರಿಂದ ರಥೋತ್ಸವ ಚಾಲನೆ ನೀಡಿದ ನಂತರ ಆಗಮಿಸಿದ ತಾಲೂಕು ಪಂಚಾಯಿತಿ ಅಧ್ಯಕ್ಷ ಸೊಗಡುವೆಂಕಟೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎನ್.ನರಸಿಂಹಯ್ಯ, ಮಾಜಿ ಶಾಸಕರಾದ ಸೋವ್ಲಾನಾಯ್ಕ, ತಿಮ್ಮರಾಯಪ್ಪ ನಿರಾಸೆ ಪಟ್ಟರು. 12ಗಂಟೆ ನಂತರ ರಾಹುಕಾಲ ಇರುವುದರಿಂದ ದೇವಸ್ಥಾನದ ಅರ್ಚಕರು 11.50ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಕರಪತ್ರ ಮುದ್ರಿಸುವ ಮೊದಲೇ ಈ ಬಗ್ಗೆ ತಿಳಿದಿರಲಿಲ್ಲವೇ ಎಂದು ಸೊಗಡುವೆಂಕಟೇಶ್ ಮುಜರಾಯಿ ಇಲಾಖೆಯ ವಿರುದ್ಧ ಬೇಸರ ವ್ಯಕ್ತಪಡಿಸಿದರು.

    ವಿಶೇಷ ಬಸ್ ಸೌಕರ್ಯ, ಅನ್ನ ದಾಸೋಹ: ಪಾವಗಡದಿಂದ ನಾಗಲಮಡಿಕೆಗೆ ಹೋಗಲು ಖಾಸಗಿ ಮತ್ತು ರಾಜ್ಯ ರಸ್ತೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಗ್ರಾಮದಲ್ಲಿ 1 ಕಿ.ಮೀ.ದೂರದಲ್ಲಿ ಬಸ್ ನಿಲ್ದಾಣ ಮಾಡಿ ಭಕ್ತರು ದೇವಸ್ಥಾನಕ್ಕೆ ತೆರಳಲು ಅನುವು ಮಾಡಿಕೊಡಲಾಗಿತ್ತು. ತಹಸೀಲ್ದಾರ್ ಕಾರ್ಯಾಲಯದಿಂದ ಕುಡಿಯುವ ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ವಾಸವಿ ಮತ್ತಿತರ ಟ್ರಸ್ಟ್ ಗಳಿಂದ ಭಕ್ತರಿಗೆ ದಾಸೋಹದ ವ್ಯವಸ್ಥೆ ವಾಡಲಾಗಿತ್ತು. ಜಾತ್ರೆಯಲ್ಲಿ ತೊಂದರೆಯಾಗದಂತೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು, ಜಾತ್ರೆ ಪ್ರಯುಕ್ತ ವಿವಿಧ ಅಂಗಡಿಗಳನ್ನು ತೆರೆದಿದ್ದರಿಂದ ಭರ್ಜರಿ ವ್ಯಾಪಾರ ವಹಿವಾಟು ಸಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts