More

    ನಾನು ನೀವು ಮತ್ತು..| ಮೌಲ್ಯಗಳ ಬಲದ ಮೇಲೆ ಉದ್ಯಮಸಾಮ್ರಾಜ್ಯ ಕಟ್ಟಿದ ಟಾಟಾ

    ಜೆಮ್​ಷೆಡ್​ಜಿ ಅವರ ನಿಧನದ ನಂತರವೂ (1904ರಲ್ಲಿ) ಟಾಟಾ ಬಲಿಷ್ಠ ಶಕ್ತಿಯಾಗಿ ಮುಂದುವರಿಯಲು ಕಾರಣ ಜೆಮ್​ಷೆಡ್​ಜಿ ಉತ್ತರಾಧಿಕಾರಿಗಳೆಲ್ಲ ಅವರು ಹಾಕಿಕೊಟ್ಟ ಮಾರ್ಗದಲ್ಲೇ ನಡೆದದ್ದು. ಅದು ದೇಶಾಭಿಮಾನದ, ಮಾನವಪ್ರೇಮದ ಮಾರ್ಗ. ಬಹುಸಂಖ್ಯೆಯ ಮಂದಿ ಆಯ್ಕೆ ಮಾಡಿಕೊಳ್ಳದ ಸುಲಭವಲ್ಲದ ಹಾದಿ. ಈ ಉತ್ತರಾಧಿಕಾರಿಗಳಲ್ಲಿ ಜಗತ್ತಿನ ಗಮನ ಸೆಳೆದವರು ಜೆಆರ್​ಡಿ ಟಾಟಾ ಮತ್ತು ರತನ್ ಟಾಟಾ.

    ನಾನು ನೀವು ಮತ್ತು..| ಮೌಲ್ಯಗಳ ಬಲದ ಮೇಲೆ ಉದ್ಯಮಸಾಮ್ರಾಜ್ಯ ಕಟ್ಟಿದ ಟಾಟಾ1938ರಲ್ಲಿ ಕಂಪನಿಯ ಆಡಳಿತದ ಚುಕ್ಕಾಣಿ ಹಿಡಿದವರು ಜೆಮ್​ಷೆಡ್​ಜಿಯವರ ವಿಶಿಷ್ಟ ಹಿನ್ನೆಲೆಯ ದೂರದ ಸಂಬಂಧಿ, ನಮಗೆಲ್ಲ ಜೆಆರ್​ಡಿ ಟಾಟಾ ಎಂದೇ ಪರಿಚಿತರಾಗಿರುವ ಜಹಾಂಗಿರ್ ರತನ್​ಜಿ ದಾದಾಭಾಯಿ ಟಾಟಾ! 1904 ಜೂನ್ 29ರಂದು ಜನಿಸಿದ ಜೆಆರ್​ಡಿ ಹುಟ್ಟಿದ್ದು, ಬೆಳೆದದ್ದೆಲ್ಲ ಫ್ರಾನ್ಸ್​ನಲ್ಲಿ. ತಂದೆ ರತನ್​ಜಿ ದಾದಾಭಾಯಿ ಟಾಟಾ ಮತ್ತು ತಾಯಿ ಫ್ರಾನ್ಸಿನ ಸುಝುನ್. ಜೆಆರ್​ಡಿ ಫ್ರೆಂಚ್ ಪ್ರಜೆಯಾಗಿದ್ದರಿಂದ ಒಂದು ವರ್ಷ ಅಲ್ಲಿನ ಸೇನೆಯಲ್ಲೂ ಸೇವೆ ಸಲ್ಲಿಸಿದರು. ಕೇಂಬ್ರಿಡ್ಜ್​ಗೆ ಮುಂದೆ ಓದಲು ತೆರಳಬೇಕೆಂದಿದ್ದಾಗ ತಂದೆ ಟಾಟಾ ಕಂಪನಿಗೆ ಜೆಆರ್​ಡಿಯವರನ್ನು ಕರೆಸಿಕೊಂಡರು. ಜೆಆರ್​ಡಿ 1925ರಿಂದ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಭಾರತಕ್ಕೆ ಬಂದ ನಂತರ ತಮ್ಮ ಫ್ರೆಂಚ್ ನಾಗರಿಕತ್ವ ಬಿಟ್ಟು ಭಾರತೀಯ ಪ್ರಜೆಯಾದರು.

    ಜೆಆರ್​ಡಿ ಇಂಗ್ಲಿಷ್ ಕಾಲುವೆಯ ಮೇಲೆ ವಿಮಾನ ಹಾರಿಸಿದ ಮೊದಲಿಗ ಲೂಯಿಸ್ ಬ್ಲೆರಾಯ್ಟ್​ ಆಪ್ತ ಸ್ನೇಹಿತರು. ಹೀಗಾಗಿ ವಿಮಾನ ಚಾಲನೆಯಲ್ಲಿ ಜೆಆರ್​ಡಿ ಬಹು ಆಸಕ್ತಿಯುಳ್ಳವರಾಗಿದ್ದರು. 1929 ಫೆಬ್ರವರಿ 10ರಂದು ಪೈಲಟ್ ಲೈಸನ್ಸ್ ಪಡೆದರು. ಈ ಸಾಧನೆಗೈದ ಭಾರತದ ಮೊದಲ ವ್ಯಕ್ತಿಯಾದರು! ಹಾಗಾಗಿ ಟಾಟಾದ ಅವರ ಮೊದಲ ದೊಡ್ಡ ಪ್ರಾಜೆಕ್ಟ್ ವಿಮಾನಯಾನದ್ದೇ ಆಗಿತ್ತು. 1932ರಲ್ಲಿ ಅವರು ಭಾರತದ ಮೊದಲ ವಾಯುಸಾರಿಗೆಯಾದ ಟಾಟಾ ಏರ್​ಲೈನ್ಸ್ ಪ್ರಾರಂಭಿಸಿದರು. ಎಲ್ಲ ಅರ್ಥದಲ್ಲೂ ಭಾರತದ ಕೀರ್ತಿಯನ್ನು ಮುಗಿಲು ಮುಟ್ಟಿಸಿದ ಹೆಗ್ಗಳಿಕೆ ಇವರದ್ದು! ಜೆಆರ್​ಡಿ ಅವರನ್ನು ‘ಭಾರತದ ವಾಯುಸಾರಿಗೆಯ ಪಿತಾಮಹ’ ಎಂದೂ ಕರೆಯುತ್ತಾರೆ. ಮೊದಲು ಪತ್ರ ಸಾಗಾಣಿಕೆಗೆ ಸೀಮಿತವಾಗಿದ್ದ ಇದು 1938ರಲ್ಲಿ ಪ್ರಯಾಣಿಕ ಸೇವೆಯನ್ನೂ ಪ್ರಾರಂಭಿಸಿತು. ಎರಡನೇ ಮಹಾಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಕೂಡ ಮಾಡಿತು. 1946ರಲ್ಲಿ ‘ಏರ್ ಇಂಡಿಯಾ’ ಎಂದು ಹೆಸರು ಬದಲಾಯಿತು. 1953ರಲ್ಲಿ ಟಾಟಾ ವಾಯುಸಾರಿಗೆಯನ್ನು ನೆಹರು ರಾಷ್ಟ್ರೀಕರಣಗೊಳಿಸುವ ನಿರ್ಧಾರ ಕೈಗೊಂಡರು. ಜೆಆರ್​ಡಿಯವರೇ ಅದರ ಚೇರ್ಮನ್ ಆಗಿ ಮುಂದುವರಿದರು. ಆದರೆ 1978ರಲ್ಲಿ ಮೊರಾರ್ಜಿ ದೇಸಾಯಿಯವರು ಈ ಸ್ಥಾನದಿಂದ ಜೆಆರ್​ಡಿಯವರನ್ನು ತೆಗೆದುಹಾಕಿದರು! ಏರ್ ಇಂಡಿಯಾ ಜೆಆರ್​ಡಿಯವರ ಕನಸಿನ ಕೂಸಾಗಿತ್ತು. ಅದರಿಂದ ತಮ್ಮನ್ನು ದೂರ ಮಾಡಿದಾಗ ಅವರು ಬಹುವಾಗಿ ನೊಂದಿದ್ದರು.

    ಇದನ್ನೂ ಓದಿ: ಚೀನಾದ ಟಿಕ್​ಟಾಕ್ ಜಾಗವನ್ನು ನಮ್ಮ ಬೆಂಗಳೂರಿನ ಚಿಂಗಾರಿ ತುಂಬಿತು…

    ಜೆಆರ್​ಡಿ ಅವರಿಗೆ ಕಾರುಗಳ ಹುಚ್ಚು ಬಹಳ. ಯಾವಾಗಲೂ ಟ್ರಾಫಿಕ್ ಪೊಲೀಸರಿಗೆ ದಂಡ ಕಟ್ಟುತ್ತಿದ್ದರು. ಈ ವಿಷಯದ ಸಲುವಾಗಿ ವಿಕಾಜಿ ಎಂಬ ವಕೀಲರನ್ನು ಭೇಟಿಯಾಗಲು ಆಗಾಗ್ಗೆ ಹೋಗುತ್ತಿದ್ದರು. ವಿಕಾಜಿಯವರ ತಂಗಿ ತೆಲ್ಮಾರೊಂದಿಗೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿ 1930ರಲ್ಲಿ ವಿವಾಹವೂ ಆಯಿತು! 1938ರಲ್ಲಿ ಅಂದರೆ 34ರ ಕಿರಿವಯಸ್ಸಿನಲ್ಲಿ ಚೇರ್ಮನ್ ಆದ ಜೆಆರ್​ಡಿ 1977ರವರೆಗೆ ಕಾರ್ಯ ನಿರ್ವಹಿಸಿದರು. ಭಾರತ ಕೂಡ ಪರಮಾಣು ಶಕ್ತಿ ಆಗಬೇಕೆಂದು ದೂರಾಲೋಚನೆ ಹೊಂದಿದ್ದ ಜೆಆರ್​ಡಿ, ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಹೋಮಿ ಜಹಾಂಗೀರ್ ಭಾಭಾರ ಎಲ್ಲ ಪ್ರಾಜೆಕ್ಟ್​ಗಳಿಗೂ ಧನಸಹಾಯ ಮಾಡಿದರು. ಮುಂಬೈನ ಟಾಟಾ ಇನ್​ಸ್ಟಿಟ್ಯೂಟ್ ಆಫ್ ಫಂಢಮೆಂಟಲ್ ರೀಸರ್ಚ್ (ಟಿಐಎಫ್​ಆರ್) ಇಂದಿಗೂ ಅತ್ಯುತ್ತಮ ಸಂಶೋಧನಾ ಸಂಸ್ಥೆಗಳಲ್ಲೊಂದು.

    ಆರೋಗ್ಯ ಕ್ಷೇತ್ರದಲ್ಲೂ ಜೆಆರ್​ಡಿ ಕೊಡುಗೆ ಸಲ್ಲಿಸಿದರು. ‘ಟಾಟಾ ಮೆಮೋರಿಯಲ್ ಸೆಂಟರ್ ಫಾರ್ ಕ್ಯಾನ್ಸರ್’ ಸ್ಥಾಪಿಸಿದರು. ಅದಲ್ಲದೆ ‘ಟಾಟಾ ಇನ್​ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್’, ‘ನ್ಯಾಶನಲ್ ಸೆಂಟರ್ ಫಾರ್ ಫರ್ವಮಿಂಗ್ ಆರ್ಟ್ಸ್’ ಇವೆಲ್ಲವುಗಳನ್ನು ಸ್ಥಾಪಿಸುವ ಮೂಲಕ ಸಮಾಜದ ವಿಭಿನ್ನ ಕ್ಷೇತ್ರಗಳ ಅಭಿವೃದ್ಧಿಗೆ ಬೆಂಬಲ ನೀಡಿದರು. 1945ರಲ್ಲಿ ಜೆಆರ್​ಡಿ, ಜರ್ಮನ್ ಕಂಪನಿಯೊಂದರ ಸಹಯೋಗದೊಂದಿಗೆ ಟೆಲ್ಕೋ ಸ್ಥಾಪಿಸಿದರು. 2003ರಲ್ಲಿ ಅದನ್ನು ಟಾಟಾ ಮೋಟರ್ಸ್ ಎಂದು ಮರುನಾಮಕರಣ ಮಾಡಲಾಯಿತು. ತಮ್ಮ 52 ವರ್ಷಗಳ ಟಾಟಾದೊಂದಿಗಿನ ಪಯಣದಲ್ಲಿ, 39 ವರ್ಷಗಳ ನಾಯಕತ್ವದಲ್ಲಿ ಜೆಆರ್​ಡಿ ಹದಿನಾಲ್ಕು ಕಂಪನಿಗಳ ಟಾಟಾ ಗ್ರೂಪ್ ಅನ್ನು 95 ಕಂಪನಿಗಳಿಗೆ ಹೆಚ್ಚಿಸಿದರು! ಕಂಪನಿಯ ಆದಾಯವನ್ನು ನೂರು ಮಿಲಿಯನ್ ಡಾಲರುಗಳಿಂದ ಐದು ಸಾವಿರ ಮಿಲಿಯನ್ ಡಾಲರು (5 ಬಿಲಿಯನ್) ಗಳಿಗೇರಿಸಿದರು. ಭಾರತದ ಭವಿಷ್ಯದ ಬಗ್ಗೆ ಕನಸು ಕಂಡ ದೂರದೃಷ್ಟಿಯ ವ್ಯಕ್ತಿ. ಭಾರತ ಸಮೃದ್ಧ ಮತ್ತು ಸಂತೋಷಮಯ ದೇಶವಾಗಬೇಕೆಂದು ಜೆಆರ್​ಡಿ ಕನಸು ಕಂಡಿದ್ದರು. ಭಾರತದ ಔದ್ಯೋಗಿಕ ಕ್ರಾಂತಿಯ ಜನಕರೆಂದೇ ಕರೆಸಿಕೊಂಡಿರುವ ಪದ್ಮ ವಿಭೂಷಣ, ಭಾರತರತ್ನ ಜೆಆರ್​ಡಿ ಇಂದಿನ ಆಧುನಿಕ ಭಾರತದ ನಿರ್ವಣದಲ್ಲಿ ಬಹು ಪ್ರಮುಖ ಪಾತ್ರ ವಹಿಸಿದವರು. ಆದರೆ ಯಾರೋ ಅವರನ್ನು ಅವರ ಸಾಧನೆಯ ಬಗ್ಗೆ ಏನನಿಸುತ್ತದೆ ಎಂದು ಕೇಳಿದಾಗ ಜೆಆರ್​ಡಿ, ‘ಮೊದಲೇ ಸ್ಥಾಪಿಸಿದ್ದನ್ನು ನಾನು ಮುಂದುವರಿಸಿಕೊಂಡು ಹೋಗಿದ್ದೀನಷ್ಟೇ, ಏರ್ ಇಂಡಿಯಾ ಬಿಟ್ಟು ಬೇರೇನೂ ನಾನು ಮಾಡಿಲ್ಲ’ ಎಂದು ಹೇಳಿದ್ದರು! ದೊಡ್ಡ ವ್ಯಕ್ತಿಗಳಿಂದ ದೊಡ್ಡ ಮಾತೇ ಬರುತ್ತದೆ ಎನ್ನುವುದಕ್ಕೆ ಸಾಕ್ಷಿ ಈ ನುಡಿಗಳು! ಏರ್ ಇಂಡಿಯಾ ಚೇರ್ಮನ್ ಆದರೂ ವಿಮಾನ ಪ್ರಯಾಣದ ಸಂದರ್ಭದಲ್ಲಿ ಚೆಕ್ ಇನ್​ಗಾಗಿ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದ, ದಿನವೂ ಕಾರನ್ನು ತಾವೇ ಓಡಿಸುತ್ತಿದ್ದಂತಹ ಸರಳಾತಿಸರಳ ವ್ಯಕ್ತಿ ಜೆಆರ್​ಡಿ!

    ಜೆಮ್​ಷೆಡ್​ಜಿ ಅವರ ಮರಿಮೊಮ್ಮಗನಾದ ರತನ್ ಟಾಟಾ ಜನಿಸಿದ್ದು 1937ರ ಡಿಸೆಂಬರ್ 28ರಂದು ಮುಂಬೈನಲ್ಲಿ. ಅಮೆರಿಕದಲ್ಲಿ ಆರ್ಕಿಟೆಕ್ಟ್ ಮತ್ತು ಸ್ಟ್ರಕ್ಚರಲ್ ಇಂಜಿನಿಯರಿಂಗ್​ನಲ್ಲಿ ಪದವಿ ಮುಗಿಸಿ ಅಲ್ಲೇ ಉದ್ಯೋಗ ಮಾಡುತ್ತಿದ್ದರು. ತಮ್ಮ ಉದ್ಯೋಗದಲ್ಲಿ ನೆಮ್ಮದಿಯಾಗಿ ಇದ್ದೆನೆಂದೂ ಸಾಕಿ ಬೆಳೆಸಿದ ಅಜ್ಜಿಯ ಆಸೆಯ ಮೇರೆಗೆ ಭಾರತಕ್ಕೆ ಬಂದೆನೆಂದೂ ಸಂದರ್ಶನವೊಂದರಲ್ಲಿ ರತನ್ ಹೇಳಿದ್ದರು. 1962ರಿಂದ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮೊದಲ ನಾಲ್ಕು ವರ್ಷ ಸಣ್ಣ ಹೋಟೆಲಿನಲ್ಲಿ ಇದ್ದುಕೊಂಡು ಕೆಲಸಗಾರರ ಜತೆಯೇ ಊಟ ತಿಂಡಿ ಮಾಡುತ್ತ ಕೆಲಸ ಮಾಡಿದರು! ಲಾಸ್ ಏಂಜಲೀಸ್​ನಿಂದ ಬಂದ ಹುಡುಗನಿಗೆ ‘ಕೆಲಸಕ್ಕೆ ಕಾರು ಬೇಡ, ಸೈಕಲ್ ತೆಗೆದುಕೊಂಡು ಹೋಗು’ ಎಂದಾಗ ಹೇಗಾಗಿರಬಹುದು? ಕೋಪಿಸಿಕೊಂಡು ನಡೆದುಕೊಂಡೇ ಹೋಗುತ್ತಿದ್ದರಂತೆ ರತನ್! ನಷ್ಟದಲ್ಲಿದ್ದ ಟೆಲ್ಕೋ ಕಂಪನಿಯನ್ನು ಸರಿಪಡಿಸಲು ರತನ್ ಟಾಟಾರಿಗೆ ಜವಾಬ್ದಾರಿ ಕೊಟ್ಟಾಗ ಯಶಸ್ವಿಯಾಗಿ ನಿಭಾಯಿಸಿದರು. ರತನ್​ರಿಗೂ ವಿಮಾನ ಚಾಲನೆಯಲ್ಲಿ ಆಸಕ್ತಿ ಇದ್ದುದರಿಂದ ಜೆಆರ್​ಡಿಯವರ ಜತೆ ಆತ್ಮೀಯತೆ ಬೆಳೆದಿತ್ತು. ಜೆಆರ್​ಡಿಯವರ ಉತ್ತರಾಧಿಕಾರಿ ಎಂದು ಅವರಿಂದಲೇ ಆರಿಸಲ್ಪಟ್ಟ ಪ್ರತಿಭಾವಂತ ರತನ್ 1991ರಲ್ಲಿ ಟಾಟಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ವಿಷಯ ಯಾವುದೇ ಇರಲಿ ನ್ಯಾಯವಾದದ್ದು ಎಂದಾದರೆ ಎಷ್ಟೇ ಕಷ್ಟವಾದರೂ ಮಾಡುತ್ತಿದ್ದ ಜೆಆರ್​ಡಿಯವರ ಸ್ವಭಾವ ರತನ್​ರದ್ದೂ ಆಗಿತ್ತು.

    ಇದನ್ನೂ ಓದಿ: ಎಲ್ಲೆಂದರಲ್ಲಿ ಪಿಪಿಇ ಕಿಟ್​ ಬಿಸಾಡಿದ್ರೆ ಕಠಿಣ ಕ್ರಮ; ಶ್ರೀರಾಮುಲು

    ಭಾರತದಲ್ಲಿ ಉದಾರೀಕರಣದ ಗಾಳಿ ಬೀಸುತ್ತಿದ್ದ ಸಮಯ. ಈಗ ವಿದೇಶೀ ಕಂಪನಿಗಳಿಂದ ಸ್ಪರ್ಧೆ ಎದುರಾಗುವ ಭಯ ಟಾಟಾ ಕಂಪನಿಗಳಿಗೆ ಎದುರಾಯಿತು. ಬಹುಮಟ್ಟಿಗೆ ವಿಕೇಂದ್ರೀಕರಣಗೊಂಡಿದ್ದ ಟಾಟಾಕಂಪನಿಗಳನ್ನು ಮತ್ತೆ ಒಂದೇಕಡೆ ತರುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಈ ಸಂದರ್ಭದಲ್ಲಿ ಟಾಟಾ ಸ್ಟೀಲ್ ಮತ್ತು ಟಾಟಾ ಮೋಟರ್ಸ್​ಗಳ ಷೇರು ಮರಳಿ ಪಡೆಯಲು ಟಾಟಾ ಸನ್ಸ್​ನ ಇಪ್ಪತ್ತು ಶೇಕಡ ಷೇರುಗಳನ್ನು ಮಾರಬೇಕಾಯಿತು. ಆದರೂ ಅಂತಾರಾಷ್ಟ್ರೀಯ ಸ್ಪರ್ಧೆಗೆ ಟಾಟಾ ನಲುಗಿತು. ಆದರೆ ರತನ್ ಟಾಟಾ ಬುದ್ಧಿವಂತರು. ಪ್ರತಿಸ್ಪರ್ಧಿಗಳಾದ ವಿದೇಶೀಯರನ್ನೂ ಟಾಟಾ ಗ್ರೂಪ್​ಗೆ ಸೇರಿಸಿಕೊಳ್ಳಲು ಶುರು ಮಾಡಿದರು! ಹೀಗೆ ವಿದೇಶೀಯರ ಬುದ್ಧಿ ಮತ್ತು ಅವರ ಸಂಪರ್ಕಜಾಲ ಎರಡೂ ಟಾಟಾರ ಉದ್ಯಮಕ್ಕೆ ಬಲ ತುಂಬಿದವು! ದೇಶದೊಳಗೂ ಮತ್ತು ಹೊರಗೂ! 2000ದಲ್ಲಿ ಅವರ ಟಾಟಾ ಟೀ ಇಂಗ್ಲೆಂಡಿನ ಟೆಟ್ಲಿ ಟೀ ಕಂಪನಿಯನ್ನು ಖರೀದಿಸಿತು. 2001ರಲ್ಲಿ ಅಮೆರಿಕದ ಅಂತಾರಾಷ್ಟ್ರೀಯ ಕಂಪನಿಯೊಡನೆ ಸೇರಿ ಟಾಟಾ-ಎಐಜಿ ಎಂಬ ವಿಮಾ ಕಂಪನಿ ಸ್ಥಾಪಿಸಲಾಯಿತು. 2004ರಲ್ಲಿ ದಕ್ಷಿಣ ಕೊರಿಯಾದ ಡೆವೂ ಮೋಟರ್ಸ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. 2007ರಲ್ಲಿ ಯುರೋಪಿನ ದೊಡ್ಡ ಉಕ್ಕು ಕಂಪನಿ ಕೋರಸ್ ಅನ್ನು ಹನ್ನೆರಡು ಬಿಲಿಯನ್ ಡಾಲರ್ ನೀಡಿ ಖರೀದಿಸಿದರು! 2008 ರಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಫೋರ್ಡ್ ಮೋಟರ್ ಕಂಪನಿಯಿಂದ ಎರಡು ಬಿಲಿಯನ್ ಡಾಲರ್ ನೀಡಿ ಖರೀದಿಸಿದರು. ಇಂದಿಗೂ ಟಾಟಾದ ಬಹುಪಾಲು ಆದಾಯ ವಿದೇಶಗಳಿಂದಲೇ ಬರುತ್ತದೆ.

    ಕಂಪನಿಯ ಷೇರುಗಳ ಮುಖ್ಯಭಾಗವನ್ನು ಟ್ರಸ್ಟ್​ಗಳು ಹೊಂದಿದ್ದು ಅವು ಶಿಕ್ಷಣ, ಆರೋಗ್ಯ, ಕಲೆ ಮುಂತಾದ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿವೆ! ಏಳು ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಕಂಪನಿಯಲ್ಲಿದ್ದಾರೆ. ಕುಟುಂಬದ ನಾಲ್ಕು ಜನ ಬೈಕಿನಲ್ಲಿ ಹೋಗುವುದನ್ನು ನೋಡಿ ಒಂದು ಲಕ್ಷ ರೂಪಾಯಿಯ ಜಗತ್ತಿನ ಅತ್ಯಂತ ಕಡಿಮೆ ಬೆಲೆಯ ಕಾರಾದ ನ್ಯಾನೋವನ್ನು 2008ರಲ್ಲಿ ಲಾಂಚ್ ಮಾಡಿದ ರತನ್ ಟಾಟಾ 2013ರಲ್ಲಿ ನಿವೃತ್ತರಾದರು.

    ಸಮಗ್ರತೆ, ಜವಾಬ್ದಾರಿ, ಶ್ರೇಷ್ಠತೆ, ಪ್ರವರ್ತಕತೆ, ಏಕತೆ ಇವು ಟಾಟಾ ಗುಂಪಿನ ಐದು ಬಹುಮುಖ್ಯ ಮೌಲ್ಯಗಳು. ಮೌಲ್ಯಗಳನ್ನು ವ್ಯವಹಾರದಲ್ಲಿ ಸೇರಿಸಿದರೆ ನಷ್ಟ ಎನ್ನುವ ಮನಸ್ಥಿತಿಯವರಿಗೆ, ಸ್ವಾರ್ಥದ ಗೂಡುಗಳಲ್ಲಿ ಕೂತು ಬ್ಯಾಂಕ್ ಬ್ಯಾಲನ್ಸ್ ಹೆಚ್ಚಿಸುತ್ತ ನೆಮ್ಮದಿಯಿಂದ ಇರುವವರಿಗೆ ಟಾಟಾ ಯಶಸ್ಸು ಮತ್ತು ಗಳಿಸಿದ ಗೌರವ ಒಂದು ಪಾಠ. ‘ರಾತ್ರಿ ಮಲಗುವಾಗ, ಬೆಳಗ್ಗೆ ಏಳುವಾಗ ನಾವು ನಮ್ಮ ತತ್ತ್ವಗಳನ್ನು ಬಿಟ್ಟುಕೊಟ್ಟಿಲ್ಲ ಮತ್ತು ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡಿಲ್ಲ ಎಂಬ ನೆಮ್ಮದಿಯೇ ಮುಖ್ಯ’ ಎನ್ನುವ ರತನ್​ರ ಮಾತು ಎಷ್ಟು ಸತ್ಯ! ಈ ಮನೋಭಾವವೇ ಟಾಟಾ ಕಂಪನಿಗೆ ಗೌರವ ತಂದುಕೊಟ್ಟಿದೆ. ನಿಜ, ಟಾಟಾ, ಭಾರತದ, ಭಾರತೀಯರ ಹೆಮ್ಮೆ.
    (ಲೇಖಕರು ಉಪನ್ಯಾಸಕಿ, ಕವಯಿತ್ರಿ)

    5,000ದ ಗಡಿ ದಾಟಿತು ಬೆಂಗಳೂರಿನಲ್ಲಿ ಕೋವಿಡ್​ 19 ಕೇಸ್​- ರಾಜ್ಯದಲ್ಲಿಂದು 1272 ಪ್ರಕರಣಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts