More

    ರೆಸಾರ್ಟ್ ರಾಜಕೀಯ ಶುರು

    ಮೈಸೂರು: ನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಜ.18ರಂದು ನಡೆಯುವ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರುವುದು ನಿಶ್ಚಿತವಾಗಿದ್ದು, ಅಂತಿಮ ಕ್ಷಣದಲ್ಲಿ ಅಧಿಕಾರ ಕೈ ಜಾರಿ ಹೋಗುವುದನ್ನು ತಪ್ಪಿಸಲು ಜೆಡಿಎಸ್ ಸದಸ್ಯರು ರೆಸಾರ್ಟ್‌ನತ್ತ ಮುಖಮಾಡಿದ್ದಾರೆ.

    ಕಾಂಗ್ರೆಸ್ ಮುಖಂಡರು, ಸದಸ್ಯರು ಹಾಗೂ ಉಪ ಮೇಯರ್ ಸ್ಥಾನದ ಆಕಾಂಕ್ಷಿಗಳು ಗುರುವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ‘ಉಪ ಮೇಯರ್ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆಮಾಡಿ, ನಿಮ್ಮ ತೀರ್ಮಾನಕ್ಕೆ ಎಲ್ಲರೂ ತಲೆಬಾಗುತ್ತೇವೆ’ ಎಂದು ಆಕಾಂಕ್ಷಿಗಳು ಹಾಗೂ ಕಾಂಗ್ರೆಸ್ ಸದಸ್ಯರು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡರು.

    ಅಭ್ಯರ್ಥಿ ಆಯ್ಕೆಯನ್ನು ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ಸಚಿವ ಕೃಷ್ಣ ಭೈರೇಗೌಡ ಅಂತಿಮಗೊಳಿಸಲಿದ್ದಾರೆ. ಅವರ ತೀರ್ಮಾನಕ್ಕೆ ಎಲ್ಲರೂ ತಲೆಬಾಗಬೇಕೆಂದು ಸಿದ್ದರಾಮಯ್ಯ ಕಾಂಗ್ರೆಸ್ ಸದಸ್ಯರಿಗೆ ನಿರ್ದೇಶನ ನೀಡಿದ್ದಾರೆ. ಕೃಷ್ಣಭೈರೇಗೌಡ ಶುಕ್ರವಾರ ನಗರದಲ್ಲಿ ಕಾಂಗ್ರೆಸ್ ಸದಸ್ಯರ ಸಭೆ ನಡೆಸಿ ಅಭಿಪ್ರಾಯ ಆಲಿಸಲಿದ್ದಾರೆ. ಆ ನಂತರ ಕಾಂಗ್ರೆಸ್ ಸದಸ್ಯರು ರೆಸಾರ್ಟ್‌ನತ್ತ ತೆರಳಲು ಚಿಂತನೆ ್ಞಡೆಸುತ್ತಿದ್ದಾರೆ.

    ಬಿಜೆಪಿಯಲ್ಲೂ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು, ಪಕ್ಷ ಅವಕಾಶಕ್ಕಾಗಿ ಕಾದು ನೋಡುತ್ತಿದೆ. ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಶುಕ್ರವಾರ ಬಿಜೆಪಿ ಸದಸ್ಯರು ಸಭೆ ಏರ್ಪಡಿಸಿ ಚುನಾವಣೆಯಲ್ಲಿ ನಮ್ಮ ನಡೆ ಹೇಗಿರಬೇಕೆಂಬ ಕುರಿತು ಚರ್ಚೆ ನಡೆಸಲಿದ್ದಾರೆ.

    ಜೆಡಿಎಸ್ ಹಾಗೂ ಕಾಂಗ್ರೆಸ್ ವರಿಷ್ಠರು ಈಗಾಗಲೇ ಮೇಯರ್ ಹಾಗೂ ಉಪ ಮೇಯರ್ ಸ್ಥಾನದ ಆಕಾಂಕ್ಷಿಗಳ ಅಭಿಪ್ರಾಯವನ್ನು ಆಲಿಸಿದ್ದು, ಶುಕ್ರವಾರ ಉಭಯ ಪಕ್ಷಗಳ ಮುಖಂಡರು ಆಕಾಂಕ್ಷಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಿದ್ದಾರೆ. ಅಭ್ಯರ್ಥಿ ಹೆಸರನ್ನು ಮೊದಲೇ ಘೋಷಿಸಿದರೆ ಬಂಡಾಯ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಹೆಸರು ಘೋಷಿಸಲು ಉಭಯ ಪಕ್ಷಗಳ ಮುಖಂಡರು ತೀರ್ಮಾನಿಸಿದ್ದಾರೆ.

    ಸಂಖ್ಯಾಬಲ: ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಆಯ್ಕೆಗೊಂಡ ಬಿಜೆಪಿ ಸದಸ್ಯ ಗುರುವಿನಾಯಕ ತಮ್ಮ ಸ್ಥಾನ ಕಳೆದುಕೊಂಡಿದ್ದು, ಇದೀಗ ಪಾಲಿಕೆಯ ಸದಸ್ಯ ಬಲ 64ಕ್ಕೆ ಕುಸಿದಿದೆ. ಈ ಪೈಕಿ ಬಿಜೆಪಿ 21, ಕಾಂಗ್ರೆಸ್ 19, ಜೆಡಿಎಸ್ 18, ಬಿಎಸ್‌ಪಿ 1 ಹಾಗೂ ಐವರು ಪಕ್ಷೇತರರು ಇದ್ದಾರೆ. ಪಾಲಿಕೆಗೆ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸಹ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಸದಸ್ಯ ಬಲ ಒಟ್ಟು 74 ಇದ್ದು, ಈ ಪೈಕಿ ಬಿಜೆಪಿ 24, ಜೆಡಿಎಸ್ 23, ಕಾಂಗ್ರೆಸ್ 21, ಬಿಎಸ್‌ಪಿ 1 ಹಾಗೂ ಐವರು ಪಕ್ಷೇತರ ಸದಸ್ಯರು ಇದ್ದಾರೆ.


    ಆಕಾಂಕ್ಷಿಗಳಿವರು: ಮೇಯರ್ ಸ್ಥಾನ ಬಿಸಿಎ ಮಹಿಳೆ, ಉಪ ಮೇಯರ್ ಸ್ಥಾನ ಎಸ್ಸಿಗೆ ನಿಗದಿಯಾಗಿದೆ. ಜೆಡಿಎಸ್‌ನಲ್ಲಿ ಮೇಯರ್ ಸ್ಥಾನಕ್ಕೆ ರೇಷ್ಮಾಬಾನು (ಬನ್ನಿಮಂಟಪ), 22ನೇ ವಾರ್ಡ್‌ನ (ಪಡುವಾರಹಳ್ಳಿ) ನಮ್ರತಾ ರಮೇಶ್, 26ನೇ ವಾರ್ಡ್‌ನ ತಸ್ನಿಂ (ಮೀನಾಬಜಾರ್), 45ನೇ ವಾರ್ಡ್‌ನ (ಶಾರದಾದೇವಿನಗರ) ಕೆ.ನಿರ್ಮಲಾ ಆಕಾಂಕ್ಷಿಗಳಾಗಿದ್ದಾರೆ. ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ವಾರ್ಡ್ ನಂ.15ರ (ರಾಜೇಂದ್ರನಗರ) ಪ್ರದೀಪ್‌ಚಂದ್ರ, 38ನೇ ವಾರ್ಡ್‌ನ (ಗಿರಿಯಾಭೋವಿಪಾಳ್ಯ) ಸಿ.ಶ್ರೀಧರ್, 39ನೇ ವಾರ್ಡ್‌ನ (ಗಾಯತ್ರಿಪುರಂ 1ನೇ ಹಂತ)ಜಿ.ಎಸ್.ಸತ್ಯರಾಜ್, ಭುವನೇಶ್ವರಿ (60) ಆಕಾಂಕ್ಷಿಗಳಾಗಿದ್ದಾರೆ.

    ಬಿಜೆಪಿ ಮೇಯರ್ ಸ್ಥಾನದ ರೇಸ್‌ನಲ್ಲಿ 49ನೇ ವಾರ್ಡ್‌ನ (ಲಕ್ಷ್ಮೀಪುರಂ) ಎನ್.ಸೌಮ್ಯಾ, 52ನೇ ವಾರ್ಡ್‌ನ (ಇಟ್ಟಿಗೆಗೂಡು) ಎಂ.ಛಾಯಾದೇವಿ, 53ನೇ ವಾರ್ಡ್‌ನ (ಕುರುಬಾರಹಳ್ಳಿ) ಜಿ.ರೂಪಾ, 64ನೇ ವಾರ್ಡ್‌ನ (ಅರವಿಂದನಗರ) ಕೆ.ಚಂಪಕಾ, 65ನೇ ವಾರ್ಡ್‌ನ (ಶ್ರೀರಾಂಪುರ) ಎಂ.ಗೀತಾಶ್ರೀ ಯೋಗಾನಂದ ಕಾಣಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts