More

    ಮುಗುಳು: ಎಲ್ಲೆಲ್ಲೂ ಇದ್ದಾರೆ ಈ ಹಣಕುವೀರರು…

    ಮುಗುಳು: ಎಲ್ಲೆಲ್ಲೂ ಇದ್ದಾರೆ ಈ ಹಣಕುವೀರರು...ಹೆಚ್ಚೇನಿಲ್ಲ, ಈಗೊಂದು ಮೂರು ತಿಂಗಳ ಹಿಂದಿನ ದಿನವೊಂದನ್ನು ನೆನಪಿಸಿಕೊಳ್ಳಿ. ಸಂಜೆ ಬಿಡಿಬೀಸಾಗಿ ಹೆಜ್ಜೆ ಹಾಕುತ್ತ ರಸ್ತೆಬದಿಯಲ್ಲಿ ವಾಕ್ ಹೋಗಿದ್ದೀರಿ. ನಿಮ್ಮ ತಲೆಮಾರಿಗೆ ಅನುಗುಣವಾಗಿ ಒಬ್ಬರೇ ಇದ್ದೀರಾ, ಕಟ್ಟಿಕೊಂಡವರನ್ನು ಕರೆದುಕೊಂಡೇ ವಾಕ್ ಹೊರಟಿದ್ದೀರಾ, ಜತೆಯಲ್ಲಿ ನಾಯಿ ಇದೆಯಾ? ಮಂಕಿ ಕ್ಯಾಪ್ ಹಾಕಿದ್ದೀರಾ, ಕಿವಿಯಿಂದ ಕೇಳುವ ವಯರ್ ಜೋಡಿಸಿಕೊಂಡಿದ್ದೀರಾ? ಹೀಗೆ ಯಾವ ಪ್ರಶ್ನೆಗಳನ್ನೂ ನಾನು ಕೇಳುವುದಿಲ್ಲ. ಆದರೆ ಸಂಜೆಯ ಹೊತ್ತು ಹೀಗೆ ಬಿಡಿ ಬಿಸಾಡಿ ಹೆಜ್ಜೆ ಹಾಕುತ್ತಿರುವ ನಿಮ್ಮ ಅದೃಷ್ಟವನ್ನು ಮಾತ್ರ ಅಭಿನಂದಿಸ ಬಯಸುತ್ತೇನೆ. ವಾಕ್ ಇಲ್ಲದಿದ್ದರೆ ಕಳವಳವಾಗುವ ಅನುಭವ ನನಗಿದೆ. ಸರಿ. ರಸ್ತೆ ನಿರ್ಜನವಾಗಿದೆ. ಇದ್ದಕ್ಕಿದ್ದಂತೆ ಎದುರಿನಿಂದ ಬಂದ ಸ್ಕೂಟರ್ ಒಂದು ನಿಮ್ಮ ಹಿಂದೆ ಬರುತ್ತಿರುವ ರಿಕ್ಷಾವೊಂದಕ್ಕೆ ಕುಟ್ಟಿ ದ್ವಿಚಕ್ರ ವಾಹನ ಸವಾರ ಕೆಳಗೆ ಬೀಳುತ್ತಾನೆ. ರಿಕ್ಷಾದವನು ಕೆಳಗಿಳಿದು ಬಂದು ತಪ್ಪು ತನ್ನದಲ್ಲ ಎಂಬುದನ್ನು ನಿರೂಪಿಸಲು ಸುತ್ತಮುತ್ತ ನೋಡುತ್ತಾನೆ. ಒಂದೋ ಎರಡೋ ತಲೆಗಳು ಕಾಣಿಸಿಕೊಳ್ಳುತ್ತವೆ. ಓಡೋಡಿ ಬಂದು ದ್ವಿಚಕ್ರ ಸವಾರನನ್ನು ಎತ್ತಿ ನಿಲ್ಲಿಸುತ್ತಾರೆ. ಆಗ ನೋಡಿ ಒಬ್ಬೊಬ್ಬರಾಗಿ ಆ ಮೂಲೆಯಿಂದ, ಈ ಸಿಗ್ನಲ್​ನಿಂದ, ಹಿಂದಿನಿಂದ ಮುಂದಿನಿಂದ ಎಲ್ಲೆಲ್ಲಿಂದ ಬರುತ್ತಾರೋ ತಿಳಿಯದು. ರಿಕ್ಷಾ ಮತ್ತು ಸ್ಕೂಟರಿನ ಸುತ್ತಮುತ್ತ ಒಂದು ಜನರ ಚಕ್ರವ್ಯೂಹವೇ ನಿಂತುಬಿಡುತ್ತದೆ. ದ್ವಿಚಕ್ರ ಸವಾರನನ್ನು ಎಬ್ಬಿಸಿ ನಿಲ್ಲಿಸಿ ‘ಹೆಚ್ಚೇನೂ ಪೆಟ್ಟಾಗಲಿಲ್ಲ ಅಲ್ಲವೇ’ ಎಂದು ಕೇಳುವವರು, ಕುಡಿಯಲು ನೀರು ಕೊಡುವವರು ಅವರ ವಸ್ತುಗಳನ್ನು ಎತ್ತಿಕೊಡುವ, ಪೊಲೀಸರಿಗೆ ಫೋನ್ ಮಾಡುವ, ರಿಕ್ಷಾದವನನ್ನು ಗದರಿಸುವ ಹೀಗೆ ಅನೇಕ ಬಗೆಯ ಮನುಜರು ಅಲ್ಲಿ ಅದೆಲ್ಲಿಂದಲೋ ಬಂದು ಸೇರಿದ್ದಾರೆ. ಎರಡೇ ಎರಡು ನಿಮಿಷದಲ್ಲಿ ಅಲ್ಲೊಂದು ಜನಸಂಖ್ಯಾ ಸ್ಪೋಟವೇ ನಡೆದುಬಿಟ್ಟಿದೆ. ಮಹಿಳೆಯರು ಇಲ್ಲವೆಂದೇನಿಲ್ಲ. ಅಷ್ಟೆಲ್ಲ ಜನ ನೆರೆದಾಗ ಒಬ್ಬಂಟಿಯಾಗಿ ವಾಕ್ ಹೋಗುತ್ತಿದ್ದ ನೀವು ಒಂದರೆಗಳಿಗೆ ನಿಂತು ನೋಡಲಾರಿರಾ? ಅಲ್ಲೇ ನಿಲ್ಲುತ್ತೀರಿ. ಇದನ್ನೂ ಓದಿ: ಮುಗುಳು|ಎಳ್ಳು ಬೆಲ್ಲ ತಿನ್ನದೆಯೂ ಒಳ್ಳೆಯ ಮಾತನಾಡಬಹುದು!

    ಆಗ ಬಂದ ಯುವಕನೋರ್ವನಿಗೆ ನಿಜವಾಗಿ ನಡೆದಿದ್ದು ಏನೆಂಬುದು ಕಾಣುತ್ತಲೇ ಇಲ್ಲ. ಪಾಪ ಆತ ಹೆಣಗಾಡುತ್ತ ಅಲ್ಲಿ ನಿಂತವರನ್ನು ತುಳಿಯುತ್ತ ಬದಿಗೆ ಸರಿಸುತ್ತ ಮುಂದಕ್ಕೆ ನುಗ್ಗಲು ಪ್ರಯತ್ನಿಸುತ್ತಿದ್ದಾನೆ. ಆತನ ಗಡಿಬಿಡಿ ಅಲ್ಲಿ ನೆರೆದವರಿಗೆ ಅರ್ಥವಾಗಬೇಕಲ್ಲ… ನಿರಾತಂಕವಾಗಿ ಆ ದೃಶ್ಯವನ್ನು ನೋಡುತ್ತ ನಿಂತವರು ಆತನನ್ನು ತಡೆಯುತ್ತಾರೆ, ತಳ್ಳುತ್ತಾರೆ. ಅಲ್ಲೊಂದು ನೂಕಾಟದ ಸ್ಪರ್ಧೆಯೇ ನಡೆದು ಕೊನೆಗೂ ಆ ಯುವಕ ಮುಂದಿನ ಸಾಲನ್ನು ಗಿಟ್ಟಿಸಿಕೊಂಡು ದೃಶ್ಯವನ್ನು ವೀಕ್ಷಿಸತೊಡಗುತ್ತಾನೆ. ಇಂಥದ್ದೊಂದು ರೋಚಕದೃಶ್ಯ ಕಣ್ಣೆದುರು ಸಿಕ್ಕರೆ ಅದನ್ನು ಕಣ್ತುಂಬಿಸಿಕೊಂಡು ಹೋಗಬೇಕೆಂಬ ಭಾವುಕ ಹುಡುಗ ಆತ. ಕುತೂಹಲದಿಂದ ನಿಂತುಬಿಡುತ್ತಾನೆ.

    ‘ಛೇ ಯಾವ ನಮೂನೆ ಸ್ಪೀಡಲ್ಲಿ ಬರುತ್ತಾರೆ ಮಾರಾಯ್ರೇ?’ ‘ಈ ರಿಕ್ಷಾದವರಿಗೆ ರೂಲ್ಸೇ ಇಲ್ಲ’ ‘ಆ ಹುಡುಗನೂ ಅಷ್ಟಿಷ್ಟು ನೋಡಿಕೊಂಡು ಗಾಡಿ ಬಿಡಬಾರದಾ?’ ‘ಏನೋ ಬೇರೆ ವೆಹಿಕಲ್ಲುಗಳು ಬರುತ್ತಿರಲಿಲ್ಲ. ಹುಡುಗನ ತಂದೆ-ತಾಯಿ ಅದೃಷ್ಟ ಚೆನ್ನಾಗಿತ್ತು. ಇಲ್ಲವಾದರೆ ಯಾವುದೋ ಲಾರಿಯ ಚಕ್ರ ತಲೆಯ ಮೇಲೆ ಹೋದರೆ ಆಯ್ತಲ್ಲ, ಈಗಿನ ಹುಡುಗರಿಗೆ ದ್ವಿಚಕ್ರ ವಾಹನ ಏರಿದರೆ ತಲೆಯೇ ನೆಟ್ಟಗಿರುವುದಿಲ್ಲ…’ ನಿಷ್ಠುರ ವಿಮರ್ಶೆ ಪ್ರಾರಂಭವಾಗುತ್ತದೆ. ಜನ ಬಂದು ಸೇರುತ್ತಲೇ ಇದ್ದಾರೆ. ಹುಡುಗನಿಗೆ ಕೈಕಾಲು ಮುರಿದಿರಬೇಕು. ಎತ್ತಿ ಕೂಡಿಸಿದ ಹಾಗೆ ಮತ್ತೆ ಬೀಳುತ್ತಿದ್ದಾನೆ. ಅಷ್ಟರಲ್ಲಿ ಪೊಲೀಸರ ಆಗಮನವಾಗುತ್ತದೆ. ಗುಂಪು ಸೇರಿದ ಜನರಲ್ಲಿ ವಿದ್ಯುತ್ ಸಂಚಾರ. ಪಂಚನಾಮೆ ನಡೆದು ಅಲ್ಲಿ ಯಾರೋ ಒಂದೆರಡು ಸಹಿ ಹಾಕಿ ಆತನನ್ನು ಅದೇ ರಿಕ್ಷಾದಲ್ಲಿ ಹಾಕಿ ಆಸ್ಪತ್ರೆಗೆ ಒಯ್ಯಲಾಗುತ್ತಿದೆ. ಇದನ್ನೂ ಓದಿ:  ನೀರವ್​ ಮೋದಿ ದುಬೈಗೆ ಸಾಗಿಸಿದ್ದ 1350 ಕೋಟಿ ರೂ.ಮೌಲ್ಯದ ವಜ್ರ, ಮುತ್ತುಗಳನ್ನು ವಾಪಸ್​ ತಂದ ಇ.ಡಿ.

    ಮುಖ್ಯದೃಶ್ಯ ಮುಗಿದ ಮೇಲೂ ಜನದಟ್ಟಣೆ ಕಳಚಿಕೊಳ್ಳುವ ಲಕ್ಷಣವಿಲ್ಲ. ಪುರುಸೊತ್ತಿದ್ದವರು ಅಲ್ಲೇ ನಿಂತು ಆ ಘಟನೆಯ ಬಗ್ಗೆ ವಿಮರ್ಶೆ ನಡೆಸುತ್ತಲೇ ಇದ್ದಾರೆ. ಕೊನೆಗೂ ಪೊಲೀಸನೊಬ್ಬ ‘ನೀವೇನು ಮಾಡ್ತೀರಿ ಇಲ್ಲಿ ನಿಂತು? ಸುಮ್ಮನೆ ನಿಮ್ಮ ನಿಮ್ಮ ಕೆಲಸ ನೋಡಿಕೊಳ್ಳಿ’ ಎಂದು ವಿಶಲ್ ಊದಿದ ಮೇಲೆ ಒಬ್ಬೊಬ್ಬರೇ ನಿಧಾನವಾಗಿ ಅಲ್ಲಿಂದ ಹೆಜ್ಜೆ ಕಿಳತೊಡಗುತ್ತಾರೆ. ಅಲ್ಲಿಗೆ ನಿಮ್ಮಅಂದಿನ ವಾಕಿಂಗ್ ಮುಗಿಯಿತು ಎಂದೇ ಲೆಕ್ಕ. ಆ ಪರಿ ಕುತೂಹಲದಿಂದ ಘಟನೆಗಳನ್ನು ವೀಕ್ಷಿಸುತ್ತಿದ್ದ ವ್ಯಕ್ತಿಗಳೆಲ್ಲ ಆ ಬಳಿಕ ಅದೆಲ್ಲಿ ಮಾಯವಾಗುತ್ತಾರೋ? ಕುತೂಹಲ ಕಳೆದುಕೊಂಡ ದೃಶ್ಯ ಕ್ರಮೇಣ ಮಸುಕಾಗುತ್ತ ಹೋಗಿ ಸ್ವಲ್ಪ ಹೊತ್ತಿನಲ್ಲೇ ಅಲ್ಲೊಂದು ಅಪಘಾತ ನಡೆದದ್ದೇ ಸುಳ್ಳೆಂಬಷ್ಟು ಸಹಜವಾಗಿ ಬಿಡುತ್ತದೆ. ಇದನ್ನೂ ಓದಿ: ಮಹಿಳಾ ದಿನಾಚರಣೆ ವಿಶೇಷ; ರೈಲಿನಲ್ಲಿ ಸ್ತ್ರೀ ಕಾಳಜಿ-ಕಾರುಬಾರು

    ಮಂಗಳೂರಿನ ನನ್ನ ಕಾಲೇಜು ನಗರದ ಮುಖ್ಯರಸ್ತೆಗೆ ಹೊಂದಿಕೊಂಡಿದೆ. ನಗರದಲ್ಲಿ ನಡೆಯುವ ಎಲ್ಲ ಗದ್ದಲ ಗಲಾಟೆ, ಅಪಘಾತ, ಮೆರವಣಿಗೆ ಏನು ನಡೆಯುವುದಿದ್ದರೂ ನಮ್ಮ ಕಾಲೇಜಿನ ಮುಂಭಾಗದ ರಸ್ತೆಯಲ್ಲೇ ನಡೆಯುತ್ತಿರುತ್ತದೆ. ನಮ್ಮ ತರಗತಿಗಳು ಗಂಭೀರವಾಗಿ ನಡೆಯುತ್ತಿರುವಾಗ ರಸ್ತೆಯಲ್ಲಿ ‘ಡಢಂ ಡಢಂ ಟರಟರ…’ ಸಪ್ಪಳ ಕೇಳುತ್ತದೆ. ನಾವು ಅಧ್ಯಾಪಕರು ಅದನ್ನು ಕೇಳಿಸಿಕೊಳ್ಳದಂತೆ ನಟಿಸುತ್ತ ಪಾಠ ಮುಂದುವರಿಸುತ್ತೇವೆ. ಆದರೆ ತೀರಾ ನಮ್ಮ ಕ್ಲಾಸಿನ ಕಿಟಕಿಗೆ ಆ ಮೆರವಣಿಗೆಯ ದೃಶ್ಯಗಳು ಕಾಣತೊಡಗಿದಾಗ ವಿದ್ಯಾರ್ಥಿಗಳ 66 ಕುತ್ತಿಗೆಗಳು ಅಪ್ರಯತ್ನವಾಗಿ ಹಿಂದುಗಡೆ ತಿರುಗಿಬಿಡುತ್ತವೆ. ಅಧ್ಯಾಪಕರು ಒಬ್ಬಂಟಿಯಾಗಿ ಬೋರ್ಡಿನ ಕೆಳಗೆ ನಿಂತು ಮೆರವಣಿಗೆ ಪೂರ್ತಿ ಹಾದು ಹೋಗಿ ಬೀದಿಗಳು ನಿಶ್ಯಬ್ದವಾಗುವ ತನಕ ಕಾಯಬೇಕಾಗುತ್ತದೆ. ಅದರಲ್ಲಂತೂ ಯಾವುದೋ ಒಂದು ಕ್ಲಾಸಿನಲ್ಲಿ ಅಂದು ಅಧ್ಯಾಪಕರು ಇರದಿದ್ದರೆ ಆ ಕ್ಲಾಸಿನ ಹುಡುಗರು ಕಾರಿಡಾರಿನಲ್ಲಿ ದಡಬಡ ದಡಬಡ ಎಂದು ಗೇಟಿನ ಕಡೆ ಓಡುತ್ತಾರೆ. ಒಳಗೆ ಕೂತ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರೊಂದು ತೊಡಕಾಗಿ ಕಾಣುತ್ತಾರೆ.

    ‘ಮೇಡಮ್ ಎರಡೇ ನಿಮಿಷ ನೋಡಿ ಬಂದು ಬಿಡುತ್ತೇವೆ’ ಎಂದು ಓಡುವ ಧೈರ್ಯವಂತರು ಇಲ್ಲದಿಲ್ಲ. ‘ಯಾರೂ ಮೆರವಣಿಗೆ ನೋಡಲು ಹೋಗುವಂತಿಲ್ಲ’ ಎಂದು ಹೆದರಿಸಿ ಅಲ್ಲೇ ಕೂಡಿಸಿದರೋ ಕುತ್ತಿಗೆಗಳು ಪೂರ್ತಿಯಾಗಿ ಹಿಂಭಾಗ ತಿರುಗಿದ ಸ್ಥಿತಿಗೆ ಮರಳುತ್ತವೆ. ಆದ್ದರಿಂದ ಆ ಬಗೆಯ ಮೆರವಣಿಗೆ ಬಂದರೆ ನಾನು ನನ್ನ ತರಗತಿಗಳಲ್ಲಿ ‘ಸರಿ ಐದು ನಿಮಿಷ ಕೊಡುತ್ತೇನೆ. ಎಲ್ಲರೂ ಗೇಟಿನ ಬಳಿ ಹೋಗಿ ನೋಡಿ ವಾಪಸ್ ಬರಬೇಕು’ ಎಂದು ಒಂದು ಉದಾರವಾದ ಪ್ರಕಟಣೆ ಹೊರಡಿಸಿದೆ. ಇಡೀ ಕ್ಲಾಸು ದಬದಬ ಓಡಿತ್ತು ಮತ್ತು ಪೂರ್ತಿ ಬೆಲ್ಲಾಗುವ ತನಕ ವಾಪಸ್ ಬರುವುದನ್ನು ಮರೆತು ಬಿಟ್ಟಿತ್ತು. ಆ ದೃಶ್ಯದ ಸಾರಸರ್ವಸ್ವವನ್ನು ಹೀರಿ ಮುಗಿಸಿ ಅಲ್ಲಿ ಇನ್ನೇನೂ ಉಳಿದಿಲ್ಲ ಎಂದಾಗುವ ತನಕ ಈ ನೋಟಕರು ವಾಪಸ್ಸಾದರೆ ಕೇಳಿ.

    ಕರಾವಳಿಯ ಸಾಂಸ್ಕೃತಿಕ ಮೆರವಣಿಗೆ ಎಂದರೆ ಕಿಲೋಮೀಟರ್ ಗಟ್ಟಲೆ ಉದ್ದವಿರುವ ಕಲಾದಿಬ್ಬಣ. ವಿವಿಧ ಬಗೆಯ ಡೋಲು, ಕಹಳೆ, ತುತ್ತೂರಿ, ಕೀಲುಕುದುರೆ, ತಟ್ಟಿ ರಾಯರು, ವಿದೂಷಕರು, ಯಕ್ಷಗಾನದ ದಿರಿಸು ಹಾಕಿಕೊಂಡ ಎತ್ತರೆತ್ತರ ಮೂರ್ತಿಗಳು, ಪಕ್ಕದಲ್ಲಿ ನಿಂತವರ ಕೈಕುಲುಕುತ್ತ ನಮಸ್ಕರಿಸುತ್ತ ಮನರಂಜನೆ ನೀಡುತ್ತ ಹೋಗುವ ವಿವಿಧ ನಮೂನೆಯ ಸ್ತ್ರೀ-ಪುರುಷ ವೇಷಧಾರಿಗಳು, ಸಿನಿಮಾ ಹಾಡುಗಳನ್ನಿಟ್ಟು ಕೋಲಾಹಲದ ಸಂಗೀತ ಸೃಷ್ಟಿಸುವ ವಾದ್ಯಗೋಷ್ಠಿಗಳು ಅದಕ್ಕೆ ತಕ್ಕಂತೆ ನರ್ತಿಸುವ ಯುವಸಮೂಹ, ಸ್ತ್ರೀವೇಷಧಾರಿಗಳ ನಗೆಯುಕ್ಕಿಸುವ ಕುಣಿತಗಳು… ನೋಡುತ್ತ ನಿಂತರೆ ಗಂಟೆಗಳೇನು ದಿನಗುರುಳಿದರೂ ಗೊತ್ತಾಗುವುದಿಲ್ಲ. ಅಂಥದ್ದರಲ್ಲಿ ‘ಐದು ನಿಮಿಷ ಮುಗಿಸಿ ಬನ್ನಿ’ ಎಂದು ಹೇಳುವ ಅಧ್ಯಾಪಕಿ ನಾನಾಗಲೇ ಬೇಕಿತ್ತು. ಒಂದೆರಡು ಬಾರಿ ನಾನು ಕ್ಲಾಸ್ ಇಲ್ಲದ ಪ್ರಯುಕ್ತ ಆ ಮಕ್ಕಳೊಟ್ಟಿಗೆ ಹೋಗಿ ಮುಂದಿನ ದಿಬ್ಬಣ ಆರ್ಭಟವನ್ನು ಕಣ್ತುಂಬಿಸಿಕೊಂಡಿದ್ದೂ ಇದೆ. ಆಗ ನನ್ನೊಟ್ಟಿಗೆ ನಿಲ್ಲುವ ನನ್ನ ವಿದ್ಯಾರ್ಥಿಗಳಲ್ಲಿ ಒಂದು ಬಗೆಯ ಸಮಾನ ಸಂಭ್ರಮದ ಪುಳಕ. ಇದನ್ನೂ ಓದಿ: ಮನೋಲ್ಲಾಸ: ನಮ್ಮೊಳಗಿನ ಇಲಿಯ ಕಥೆ

    ತಮ್ಮ ಅಧ್ಯಾಪಕಿಯೇ ಸಾಥ್ ಕೊಡುತ್ತಿದ್ದಾರೆಂದು ಅನುಮೋದನೆಯ ಗತ್ತು ಬೇರೆ. ಮೆರವಣಿಗೆಯೆಲ್ಲ ಮುಗಿದು ಅದರ ಹಿಂದಿರುವ ಆ ಸಂಭ್ರಮದ ಕಾರಣಕರ್ತನಾದ ಸಮಾಜಸೇವಕನೋ, ರಾಜಕಿಯ ಮುಖಂಡನೋ ಮೂಡಿ ಬಂದಾಗ ನಾನು ನೋಟಕರ ಸಾಲಿನಿಂದ ಮೆಲ್ಲನೆ ನುಸುಳಿಕೊಂಡು ಗೇಟಿನ ಮೂಲಕ ನನ್ನ ಚೇಂಬರನ್ನು ಪ್ರವೇಶಿಸುತ್ತಿದ್ದೆ. ಇದೊಂದು ಬಗೆಯ ಕುತೂಹಲದ ಕಾಯಿಲೆಯಾದ್ದರಿಂದ ಅದನ್ನು ಖಂಡಿಸುವಂತೆ ಇಲ್ಲ ಪಾಲಿಸುವಂತೆಯೂ ಇಲ್ಲ.

    ಮಲೆನಾಡಿನ ಮನೆಯಂಗಳದ ಮದುವೆಗಳಲ್ಲಿ ಊರವರ ಸಮಕ್ಷಮ ಮದುವೆ ಮುಗಿಸಿದ ಬಳಿಕ ಮದುಮಕ್ಕಳನ್ನು ಮನೆದೇವರ ದರ್ಶನಕ್ಕೆಂದು ಪುರೋಹಿತರು ಒಳಗೆ ಕರೆದುಕೊಂಡು ಹೋಗುತ್ತಾರೆ. ಈ ಹಣಕುವೀರರ ದಂಡು (ಇದರಲ್ಲಿ ಮಹಿಳೆಯರ ಸಂಖ್ಯೆಯೇ ಜಾಸ್ತಿ) ಅದೆಲ್ಲಿಂದ ಎದ್ದು ಬಿಡುತ್ತಾರೋ ಚಿಕ್ಕದಾದ ದೇವರಕೋಣೆ ಇದ್ದರೆ ಅಲ್ಲಿ ಸಾಸಿವೆ ಹಾಕದಷ್ಟು ಆಕ್ರಮಿಸಿ ನಿಂತುಬಿಡುತ್ತಾರೆ. ಅದರಲ್ಲಿಯೇ ಪುರೋಹಿತರು, ವಿಡಿಯೋದಾತ ಹೆಣ್ಣು-ಗಂಡಿನ ತಂದೆ-ತಾಯಿಗಳು ಎಷ್ಟೊಂದು ಜನ ನುಸುಳಬೇಕು! ಹಣಕು ವರಿಯರು ಮಾತ್ರ ನೋಡುತ್ತಲೇ ನಿಂತುಬಿಡುತ್ತಾರೆ. ಅವರನ್ನು ಅಲ್ಲಿಂದ ಹೊರಡಿಸಲು ಪುನಃ ಮದುಮಕ್ಕಳ ಲೊಕೇಷನ್ ಬದಲಾಗಬೇಕು.

    ಇಂಗ್ಲಿಷಿನಲ್ಲಿ ಈ ಬಗೆಯ ಕುತೂಹಲಕ್ಕಾಗಿ ನಿಂತು ನೋಡುವುದನ್ನು ರಬ್ಬರಿಂಗ್ ಎನ್ನುತ್ತಾರೆ. ಹಾಗೆ ಹಣಕುವೀರರನ್ನು ‘ರಬ್ಬರಿಗರು’ ಎಂದು ಹೇಳಬಹುದು. ಓ ಹೆನ್ರಿಯ ಸಣ್ಣಕಥೆಯೊಂದು ಈ ರಬ್ಬರ್ ವಿನೋದಾವಳಿಗಳನ್ನು ಅದ್ಭುತವಾಗಿ ವಿವರಿಸಿದೆ. ನ್ಯೂಯಾರ್ಕ್ ನಗರದ ಎಲ್ಲ ಸಾರ್ವಜನಿಕ ಸ್ಥಳದಲ್ಲಿ ಏನೇ ನಡೆಯಲಿ, ಅಲ್ಲೊಬ್ಬ ಯುವಕ ಈ ನೋಟಕರ ನಡುವೆ ನುಸುಳಿ ಮುಂದಿನ ಸಾಲಿನಲ್ಲಿ ಹೋಗಿ ನಿಂತು ಬಿಡುತ್ತಾನೆ. ಹಾಗೆ ನುಸುಳುವ ಅವನ ಕೂದಲು ಕೆದರಿ ಶೂಗಳು ಹರಿದು ಆಗಿರುತ್ತದೆ. ಅವನೆದುರು ಸಾಲಿನಲ್ಲಿ ಇವನಂತೆಯೇ ನುಗ್ಗಿ ಅಷ್ಟೇ ಶೀಘ್ರವಾಗಿ ಸ್ಥಾನ ಗಿಟ್ಟಿಸಿಕೊಂಡು ನೋಡುತ್ತ ನಿಲ್ಲುವ ಯುವತಿಯೊಬ್ಬಳು ದಿನವೂ ಅವನಿಗೆ ಕಾಣುತ್ತಾಳೆ. ಕ್ರಮೇಣ ಅವರಿಬ್ಬರಲ್ಲೂ ಸಮಾನಾಸಕ್ತಿಯ ಪ್ರೇಮ ಉದಯವಾಗಿ ಮದುವೆಯಾಗುವುದೆಂದು ತೀರ್ವನಿಸುತ್ತಾರೆ.

    ಯಾವಾಗಲೂ ಮದುವೆಗಳು ನಡೆಯುವ ರ್ಚಚಿನಲ್ಲಿ ಇವರಿಗೆ ಹೋಗಿ ನುಗ್ಗಿ ನಿಂತು ನೋಡುವ ಅಭ್ಯಾಸವಾಗಿರುತ್ತದೆ. ತಮ್ಮದೇ ಸ್ವಂತ ಮದುವೆಯ ದಿನವೂ ಅಭ್ಯಾಸಬಲದಿಂದ ಜನರ ನಡುವೆ ಹೋಗಿ ನಿಂತು ಬಿಡುತ್ತಾರೆ. ಎಷ್ಟು ಹೊತ್ತಾದರೂ ಮದುಮಕ್ಕಳ ದರ್ಶನ ಆಗದಿದ್ದಾಗ ಸಂಬಂಧಪಟ್ಟವರು ಜನರ ನಡುವೆ ಹುಡುಕಿ ಇವರಿಬ್ಬರನ್ನೂ ಎಳೆದು ತಂದಾಗ ಎಂದಿನಂತೆ ನುಗ್ಗಿ ನುಚ್ಚಾದ ಅವರಿಬ್ಬರ ಬಟ್ಟೆಗಳು ಹರಿದು, ಕೂದಲು ಕೆದರಿ ಸಾಮಾನ್ಯ ಹಣಕುವೀರರೇ ಆಗಿಬಿಟ್ಟಿರುತ್ತಾರೆ. ಅಪರಾಧವೇನಲ್ಲದ ಈ ತಳ್ಳುಆಸಕ್ತಿಯನ್ನು ಏನೆಂದು ಕರೆಯೋಣ? ಇದನ್ನೂ ಓದಿ: VIDEO| ಹಾವಿನ ಬಾಯಿಂದ ಬಾಲಕ ಜಸ್ಟ್ ಮಿಸ್!

    ಲಾಕ್​ಡೌನ್ ಸಂದರ್ಭದಲ್ಲಿ ಹಣುಕಲು ದೃಶ್ಯಗಳೇ ಇಲ್ಲದೆ ಈ ಹಣಕು ಜನಾಂಗಕ್ಕೆ ಕೆಲಸವೇ ಇರಲಿಲ್ಲ ಪಾಪ. ಈಗ ಮತ್ತೆ ರಸ್ತೆಗಳಲ್ಲಿ ವಾಹನಗಳು ಕಾಣತೊಡಗಿವೆ. ಹಣಕುವೀರರಿಗೆ ಜೀವನೋತ್ಸಾಹ ಮರಳಿದೆ.

    (ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts