ಬೆಂಗಳೂರು: ಕನ್ನಡದ ಹಳೆಯ ಸಿನಿಮಾಗಳ ಟೈಟಲ್ ಹೊಸ ಸಿನಿಮಾಗಳಿಗೆ ಶೀರ್ಷಿಕೆಯಾಗುತ್ತಿರುವುದು ಇತ್ತೀಚಿನ ಟ್ರೆಂಡ್. ‘ಧ್ರುವತಾರೆ’, ‘ನಾ ನಿನ್ನ ಬಿಡಲಾರೆ’ ಸಿನಿಮಾಗಳಾಗಿ ತೆರೆಕಂಡಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ‘ಮುಗಿಲ ಮಲ್ಲಿಗೆ’.
1985ರಲ್ಲಿ ಕೆ. ಬಾಲಚಂದರ್ ನಿರ್ದೇಶನದ ‘ಮುಗಿಲ ಮಲ್ಲಿಗೆ’ ಚಿತ್ರದಲ್ಲಿ ಶ್ರೀನಾಥ್, ಪವಿತ್ರಾ ನಟಿಸಿದ್ದರು. ಈ ಚಿತ್ರ ತೆರೆಕಂಡು ನಾಲ್ಕು ದಶಕಗಳ ಬಳಿಕ ಇದೇ ಹೆಸರಿನಲ್ಲಿ ಮತ್ತೊಂದು ಕನ್ನಡ ಸಿನಿಮಾ ಬರುತ್ತಿದೆ. ಇದನ್ನು ‘ರುದ್ರಾಕ್ಷಪುರಂ’, ‘ಪ್ರೇಮಭಿಕ್ಷೆ’ ಖ್ಯಾತಿಯ ಆರ್.ಕೆ.ಗಾಂಧಿ ನಿರ್ದೇಶಿಸುತ್ತಿದ್ದಾರೆ. ತಮ್ಮನ ಸಾವಿಗೆ ಕಾರಣಳಾದ ನಾಯಕಿಯ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟ ಖಳನಾಯಕನ ವಿರುದ್ಧ ನಾಯಕ ನಟ ಹೋರಾಡಿ ಹೇಗೆ ನಾಯಕಿಯನ್ನು ರಕ್ಷಿಸುತ್ತಾನೆ ಎಂಬುದು ಕಥಾಹಂದರ. ‘ಕಮರೊಟ್ಟು ಚೆಕ್ಪೋಸ್ಟ್’, ‘ಒಲವೇ ಮಂದಾರ 2’ ನಟ ಸನತ್ ನಾಯಕನಟರಾಗಿದ್ದು, ಇವರಿಗೆ ಸಹನಾ ಗೌಡ ಜೋಡಿಯಾಗಿದ್ದಾರೆ.
ಚಿತ್ರ ತಂಡವು ಹೊಸಕೋಟೆ ಸುತ್ತ ಮುತ್ತಲಿನ ಗಟ್ಟಿಗನಬ್ಬೆ, ಪೂಜೆನ ಅಗ್ರಹಾರ, ಕಂಬ್ಳಿಪುರ ಕಾಟೇರಮ್ಮ, ಭಕ್ತರಹಳ್ಳಿ ಮೊದಲಾದ ಕಡೆ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ಆರಂಭಿಸಲಾಗುತ್ತದೆ. ಈ ಚಿತ್ರದಲ್ಲಿ ಬಲ ರಾಜವಾಡಿ, ಶಂಕನಾದ ಆಂಜಿನಪ್ಪ, ಅನ್ನಪೂರ್ಣ, ಶಂಕರ್, ಎಂ.ವಿ.ಸಮಯ್. ಮೋನಿಕಾ, ಚಂದ್ರಕಲಾ, ರೇಣುಕಾ, ಜಯರಾಂ, ವಸಂತ್ ನಾಯಕ್ ಸೇರಿ ಹಲವರು ತಾರಾಗಣದಲ್ಲಿದ್ದಾರೆ. ಅಭಿನಂದನ್ ಛಾಯಾಗ್ರಹಣ, ಅನಿರುದ್ಧ ಶಾಸ್ತಿ ಸಂಗೀತ, ರಾಜೀವ್ ಕೃಷ್ಣ ಸಾಹಿತ್ಯ ಚಿತ್ರಕ್ಕಿದೆ. ೆಬ್ರವರಿಯಲ್ಲಿ ಚಿತ್ರ ತೆರೆಗೆ ಬರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.