ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಭಾನುವಾರ ೬ ತಂಡಗಳು ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್ ಹಂತಕ್ಕೆ ಅರ್ಹತೆ ಪಡೆದುಕೊಂಡಿತು.

ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನಲ್ಲಿ ಕೂತಂಡ ಮತ್ತು ಪೆಮ್ಮಂಡ ತಂಡಗಳ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕೂತಂಡ ತಂಡ ಜಯ ಸಾಧಿಸಿತು. ಕೂತಂಡ ಪರ ಸಂತೋಷ್ ಮೇದಪ್ಪ ೧ ಗೋಲು ದಾಖಲಿಸಿದರು. ಪೆಮ್ಮಂಡ ಸುಹಾನ್ ಮಂದಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಅಮ್ಮಣಿಚಂಡ ಮತ್ತು ಬೊವ್ವೇರಿಯಂಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಅಮ್ಮಣಿಚಂಡ ಜಯ ಸಾಧಿಸಿತು. ಅಮ್ಮಣಿಚಂಡ ಪರ ವಿಘ್ನೇಶ್ ಬೋಪಣ್ಣ ೧ ಗೋಲು ದಾಖಲಿಸಿದರು. ಬೊವ್ವೇರಿಯಂಡ ಗ್ಯಾನ್ ಉತ್ತಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ನೆರವಂಡ ಮತ್ತು ಮಂಡೇಪಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್ನಲ್ಲಿ ೪-೩ ಗೋಲುಗಳ ಅಂತರದಲ್ಲಿ ಮಂಡೇಪಂಡ ಗೆಲುವು ದಾಖಲಿಸಿತು. ನೆರವಂಡ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಸಣ್ಣುವಂಡ ಮತ್ತು ಸೋಮೆಯಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ ೧ ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್ನಲ್ಲಿ ೪-೨ ಗೋಲುಗಳ ಅಂತರದಲ್ಲಿ ಸಣ್ಣುವಂಡ ತಂಡ ಗೆಲುವು ದಾಖಲಿಸಿತು. ಸಣ್ಣುವಂಡ ಪರ ಪೊನ್ನಣ್ಣ ಹಾಗೂ ಸೋಮೆಯಂಡ ಪರ ಪುನೀತ್ ತಲಾ ೧ ಗೋಲು ದಾಖಲಿಸಿದರು. ಸೋಮೆಯಂಡ ಅಪ್ಪಚ್ಚು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಇಟ್ಟಿರ ಮತ್ತು ಕಾಂಡಂಡ ನಡುವಿನ ಪಂದ್ಯದಲ್ಲಿ ತಲಾ ೧ ಗೋಲುಗಳ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್ನಲ್ಲಿ ೪-೩ ಗೋಲುಗಳ ಅಂತರದಲ್ಲಿ ಕಾಂಡಂಡ ತಂಡ ಜಯ ಸಾಧಿಸಿತು. ಕಾಂಡಂಡ ಪರ ಆದಿತ್ಯ ಅಪ್ಪಣ್ಣ ಹಾಗೂ ಇಟ್ಟಿರ ಪರ ಭವಿನ್ ತಲಾ ೧ ಗೋಲು ದಾಖಲಿಸಿದರು. ಭವಿನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕರವಂಡ ಮತ್ತು ಕಂಬೀರಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್ನಲ್ಲಿ ೩-೨ ಗೋಲುಗಳ ಅಂತರದಲ್ಲಿ ಕರವಂಡ ಗೆಲುವು ದಾಖಲಿಸಿತು.
ರಸ ಪ್ರಶ್ನೆ ಸ್ಪರ್ಧೆ: ಮುದ್ದಂಡ ಹಾಕಿ ಉತ್ಸವದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ರಸ ಪ್ರಶ್ನೆ ಸ್ಪರ್ಧೆ “ಕೊಡವ ಚೊದ್ಯ” ಸ್ಪರ್ಧೆಯ ಅಂತಿಮ ಸುತ್ತು ಭಾನುವಾರ ನಡೆಯಿತು. ಅಂತಿಮ ಸುತ್ತಿಗೆ ಶಾಂತೆಯಂಡ, ಚಿಯಕಪೂವಂಡ, ಅಮ್ಮಣಿಚಂಡ, ಓಡಿಯಂಡ(ಸೂರ್ಲಬ್ಬಿ), ಕುಪ್ಪಂಡ (ಕೈಕೇರಿ), ಪೆಮ್ಮಡಿಯಂಡ ಸೇರಿದಂತೆ ಆರು ತಂಡಗಳು ಆಯ್ಕೆಯಾಗಿದ್ದು, ಅಂತಿಮ ಆರು ಸುತ್ತಿನ ಸ್ಪರ್ಧೆಯಲ್ಲಿ ಕುಪ್ಪಂಡ (ಕೈಕೇರಿ) ತಂಡ ೧೫೦ ಅಂಕ ಪಡೆಯುವ ಮೂಲಕ ಮೊದಲನೇ ಸ್ಥಾನ ಪಡೆದುಕೊಂಡರೆ, ಪೆಮ್ಮಡಿಯಂಡ ತಂಡ ೧೧೦ ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಅಮ್ಮಣಿಚಂಡ ತಂಡ ೧೦೦ ಅಂಕ ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದುಕೊಂಡಿತು. ರಸ ಪ್ರಶ್ನೆ ಸ್ಪರ್ಧೆಯನ್ನು ಕ್ವಿಸ್ ಮಾಸ್ಟರ್ ಬೊಳ್ಳೆರ ಪೃಥ್ವಿ ಪೂಣಚ್ಚ, ಪಟ್ಟಮಾಡ ಪ್ರೀತ್ ಚಿಣ್ಣಪ್ಪ ನಡೆಸಿಕೊಟ್ಟರು. ಸ್ಪರ್ಧೆಯ ಮೊದಲ ಸುತ್ತಿಗೆ ೩೫ ತಂಡಗಳು ಸ್ಪರ್ಧಿಸಿದ್ದು, ಒಂದು ತಂಡದಲ್ಲಿ ೩ ಮಂದಿ ಪಾಲ್ಗೊಂಡಿದ್ದರು. ಸ್ಪರ್ಧೆಯನ್ನು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಹಾಗೂ ವಿರಾಜಪೇಟೆ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಉದ್ಘಾಟಿಸಿದರು.
ಗಮನ ಸೆಳೆದ ಓಪನ್ ಶೂಟಿಂಗ್ ಸ್ಪರ್ಧೆ
ಮಡಿಕೇರಿ: ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಶಾರ್ಪ್ಶೂಟರ್ಗಳಿಗೆ ರೋಮಾಂಚಕಾರಿ ಓಪನ್ ಶೂಟಿಂಗ್ ಸ್ಪರ್ಧೆ(ಬೊಡಿ ನಮ್ಮೆ) ನಡೆಯಿತು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ .೨೨ (೫೦ಮೀ), ೧೨ ಬೋರ್(೩೦ಮೀ) ಹಾಗೂ ಏರ್ ರೈಫಲ್ ಎಗ್ ಶೂಟಿಂಗ್ (೧೫ಮೀ) ಸೇರಿದಂತೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಸುಮಾರು ೫೦, ೩೦ ಮೀ ದೂರದಲ್ಲಿದ್ದ ತೆಂಗಿನಕಾಯಿಗೆ ಗುರಿಯಿಟ್ಟು ಗುಂಡು ಹೊಡೆಯುವಲ್ಲಿ ಹಲವು ಮಂದಿ ಯಶಸ್ವಿಯಾದರು. ಜಿಲ್ಲೆಯ ವಿವಿಧೆಡೆಯಿಂದ ಬಂದ ಸುಮಾರು ೩೯೬ಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿಕೊಂಡು ಗುರಿ ಪರೀಕ್ಷೆಯಲ್ಲಿ ತೊಡಗಿದ್ದು, ಮಹಿಳೆಯರೂ ಬಂದೂಕು ಹಿಡಿದು ತಮ್ಮ ಗುರಿ ಪ್ರದರ್ಶನ ನೀಡಿದರು. ಬೊಡಿ ನಮ್ಮೆ ಸ್ಪರ್ಧೆಗೆ ಕುಟುಂಬದ ಹಿರಿಯರಾದ ಎಂ.ಬಿ.ಪೊನ್ನಪ್ಪ ಹಾಗೂ ಹಾಕಿ ಉತ್ಸವದ ಮುಖ್ಯ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರಿನಿವಾಸ್ ಆಯುಧಗಳಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ, ಕೋವಿಯನ್ನು ಎಚ್ಚರಿಕೆ ಮತ್ತು ಜವಾಬ್ದಾರಿಯುತವಾಗಿ ಬಳಸುವಂತೆ ಸಲಹೆ ನೀಡಿದರು. ಈ ಸಂದರ್ಭ ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ಸಂಯೋಜಕ ಮುದ್ದಂಡ ರಾಯ್ ತಮ್ಮಯ್ಯ, ಕಾರ್ಯದರ್ಶಿ ಮುದ್ದಂಡ ಆದ್ಯ ಪೂವಣ್ಣ, ಪ್ರಮುಖರಾದ ವಿಜು ಚಂಗಪ್ಪ ಸೇರಿದಂತೆ ಮತ್ತಿತರು ಇದ್ದರು.
ಬೊಡಿ ನಮ್ಮೆ ಸ್ಪರ್ಧಾ ವಿಜೇತರು
ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ .೨೨ (೫೦ಮೀ)ನಲ್ಲಿ ಬಡುವಂಡ ಶ್ಲೋಕ್ ಸುಬ್ಬಯ್ಯ ಪ್ರಥಮ, ಚಿಯಕಪೂವಂಡ ಜೀವನ್ ದ್ವಿತೀಯ, ಪುತ್ತರೀರ ನಂಜಪ್ಪ ತೃತೀಯ ಸ್ಥಾನ ಪಡೆದುಕೊಂಡರು. ೧೨ ಬೋರ್ ತೆಂಗಿನಕಾಯಿ ಶೂಟಿಂಗ್ (೩೦ಮೀ) ಸ್ಪರ್ಧೆಯಲ್ಲಿ ಸಿಜು ಮಂಡ್ಯ ಪ್ರಥಮ, ಆಲೆಮಾಡ ಬೋಪಣ್ಣ ದ್ವಿತೀಯ, ಪುಗ್ಗೇರ ರಾಜೇಶ್ ತೃತೀಯ ಸ್ಥಾನ ಪಡೆದುಕೊಂಡರು. ಏರ್ ರೈಫಲ್ ಎಗ್ ಶೂಟಿಂಗ್ (೧೫ಮೀ) ವಿಭಾಗದಲ್ಲಿ ಕೇಚಿರ ಶಮನ್ ಪ್ರಥಮ, ಕೆ.ಜೆ.ನವೀನ್, ಬಡವಂಡ ಧನು ದೇವಯ್ಯ ತೃತೀಯ ಸ್ಥಾನ ಪಡೆದುಕೊಂಡರು.
ವಿಜೇತರಿಗೆ ಪ್ರಥಮ ರೂ.೨೦ ಸಾವಿರ, ದ್ವಿತೀಯ ರೂ.೧೫ ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ ರೂ.೧೦ ಸಾವಿರ ನಗದು ಹಾಗೂ ಆಕರ್ಷಕ ಸಿಲ್ವರ್ ಟ್ರೋಫಿ ನೀಡಲಾಯಿತು.