ಬೆಂಗಳೂರು: ಹೊಸತನದ ತಲೆಮಾರಿಗೆ ನಾವು ಹೊಸತನ್ನು ನೀಡಬೇಕಾದರೆ ಹಳೆಯ ಬೇರುಗಳನ್ನು ಬಿಡುಬಾರದು. ಹಳೆಗನ್ನಡ ಕಾವ್ಯವೆಂದರೆ ಅದು ಹಳೆಯ ಕಪಾಟುಗಳಲ್ಲಿ ಮಾತ್ರ ಇರುವಂತಹದ್ದು, ಅದನ್ನು ಹೊಸ ತಲೆಮಾರಿನ ಜನರಿಗೆ ತಲುಪಿಸುವಲ್ಲಿ ನಾವು ಸೋತಿದ್ದೇವೆ ಎಂದು ಹಿರಿಯ ವಿದ್ವಾಂಸ ನಾಡೋಜ ಡಾ. ಹಂಪ ನಾಗರಾಜಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ಶೇಷಾದ್ರಿಪುರಂ ಸಂಜೆ ಕಾಲೇಜು ಗೋಧೂಳಿ ಕನ್ನಡ ಸಂಘ ಮತ್ತು ಮಂಗಳೂರಿನ ಶೋಧನಾ ಪ್ರಕಾಶನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುದ್ದಣ ಕಾವ್ಯ ಕರಜನ (ಮುದ್ದಣ ಕವಿಯ ಸಮಗ್ರ ಕಾವ್ಯ ಸಂಪುಟ) ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ವಲಯದಲ್ಲಿ ಮುದ್ದಣ್ಣ ಕಾವ್ಯ ರಮಣೀಯವಾಗಿದ್ದು, ಸಾಹಿತ್ಯದ ಸಂಸ್ಕೃತಿ, ಸೊಬಗು, ಸೌಂದರ್ಯವನ್ನು ಹೆಚ್ಚಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಅವರು
ಮುದ್ಯಣ ಅವರ ಕಾವ್ಯದ ಮೊದಲ ಪ್ರತಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ನೀಡಿ ಗೌರವಿಸಿದರು.
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ನಮ್ಮ ಹಿರಿಯರು ನಮಗೆ ಅಪಾರ ಸಾಹಿತ್ಯ ಸಂಪತ್ತು ಬಿಟ್ಟು ಹೋಗಿದ್ದಾರೆ. ಅಂತಹ ಅಮೂಲ್ಯ ಸಾಹಿತ್ಯ ಸಂಪತ್ತನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಸಾಹಿತ್ಯ ವಲಯದಲ್ಲಿ ಮುದ್ದಣ್ಣ ಮನೋರಮೆ ಅಧ್ಯಾಯ ಸುವರ್ಣಾಕ್ಷರಗಳಲ್ಲಿ ಬರೆದಿರುವಂತಹದ್ದು ಎಂದು ಹೇಳಿದರು.
ಶೇಷಾದ್ರಿಪುರಂ ಶಿಕ್ಷಣದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕ್ಷಣ ತಜ್ಞ ನಾಡೋಜ ಡಾ. ವೂಡೇ ಪಿ.ಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮುದ್ದಣ ಕೃತಿ ಕರಜನ ಕೃತಿ ಕುರಿತು ವಿಮರ್ಶೆ ಮಾಡಿದರು.
ಶೋಧನಾ ಪ್ರಕಾಶನದ ಪ್ರಕಾಶಕಡಾ. ಗಾಯತ್ರೀ ನಾವಡ, ಶೇಷಾದ್ರಿಪುರಂ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್.ಸತೀಶ್, ಗೋಧೂಳಿ ಕನ್ನಡ ಸಂಘದ ಸಂಚಾಲಕ ಡಾ.ಸತ್ಯಮಂಗಲ ಮಹಾದೇವ ಕೃತಿಯ ಸಂಪಾದಕ ಪ್ರೊ.ಎ.ವಿ ನಾವಡ ಮತ್ತಿತರರು ಉಪಸ್ಥಿತರಿದ್ದರು.