ನವದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ನಿವೃತ್ತಿ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿರುವ ನಡುವೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಧೋನಿಗೆ ಶಾಕ್ ನೀಡಿದೆ. ಹೊಸ ಆಟಗಾರರ ವಾರ್ಷಿಕ ಒಪ್ಪಂದದ ಪಟ್ಟಿಯನ್ನು ಬಿಸಿಸಿಐ ಗುರುವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಧೋನಿ ಹೆಸರನ್ನು ಕೈಬಿಟ್ಟಿದೆ.
ಆಟಗಾರರ ಒಪ್ಪಂದವನ್ನು ಬಿಸಿಸಿಐ ನಾಲ್ಕು ಭಾಗಗಳಾಗಿ ವಿಂಗಡಿಸಿದ್ದು, ಅದರಲ್ಲಿ ಟೀಮ್ ಇಂಡಿಯಾದ ಹಿರಿಯ ಆಟಗಾರರ ಪಟ್ಟಿ ಅಂದರೆ ಕೇಂದ್ರೀಯ ಒಪ್ಪಂದದ ಪಟ್ಟಿಯಿಂದ ಧೋನಿ ಹೆಸರನ್ನು ಕೈಬಿಟ್ಟಿರುವುದು, ಧೋನಿ ಅವರ ಕ್ರಿಕೆಟ್ ಭವಿಷ್ಯದ ಮೇಲೆ ಹೊಸದೊಂದು ಅನುಮಾನದ ಅಲೆ ಏಳುವಂತೆ ಮಾಡಿದೆ.
ಕಳೆದ ವರ್ಷದ ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೋತ ಬಳಿಕ ಈವರೆಗೂ ಧೋನಿ ಒಂದು ಪಂದ್ಯವನ್ನೂ ಆಡಿಲ್ಲ. ಧೋನಿ ಮಾತ್ರವಲ್ಲದೆ, ದಿನೇಶ್ ಕಾರ್ತಿಕ್, ಖಲೀಲ್ ಅಹಮ್ಮದ್ ಮತ್ತು ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದ ಅಂಬಾಟಿ ರಾಯುಡು ಕೂಡ ಪಟ್ಟಿಯಿಂದ ಕೈಬಿಡಲಾಗಿದೆ.
ಅಕ್ಟೋಬರ್ 2019 ರಿಂದ ಸೆಪ್ಟೆಂಬರ್ 2020ರವರೆಗಿನ ಒಪ್ಪಂದದ ಪಟ್ಟಿಯನ್ನು ಬಿಸಿಸಿಐ ಇಂದು ಪ್ರಕಟಿಸಿದೆ. ಬಿಸಿಸಿಐ ಆಟಗಾರರ ಒಪ್ಪಂದ ಕೆಟಗರಿಯನ್ನು ಎ+(7 ಕೋಟಿ ರೂ.), ಎ ( 5 ಕೋಟಿ ರೂ.), ಬಿ (3 ಕೋಟಿ ರೂ.) ಮತ್ತು ಸಿ (1 ಕೋಟಿ ರೂ.) ಎಂದು ಬಿಸಿಸಿಐ ವಿಂಗಡಿಸಿದೆ.
ಒಟ್ಟು 27 ಆಟಗಾರರನ್ನು ನಾಲ್ಕು ಕೆಟಗರಿಯಾಗಿ ವಿಂಗಡಿಸಲಾಗಿದ್ದು, ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ಜಸ್ಪ್ರಿತ್ ಬೂಮ್ರಾ ಎ+ ಕೆಟಗರಿಯಲ್ಲಿದ್ದಾರೆ.
ಇನ್ನುಳಿದ ಕೆಟಗರಿಯಲ್ಲಿ ಯಾರಿದ್ದಾರೆ ಎಂದು ಗಮಿಸಿದರೆ…..
ಕೆಟಗರಿ ಎ: ರವಿಚಂದ್ರನ್ ಅಶ್ವಿನ್, ರವಿಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಚೇತೇಶ್ವರ ಪೂಜಾರ, ಅಂಜಿಕ್ಯಾ ರಹಾನೆ, ಕೆ.ಎಲ್.ರಾಹುಲ್, ಶಿಖರ್ ಧವನ್, ಮಹಮ್ಮದ್ ಶಮಿ, ಇಶಾಂತ್ ಶರ್ಮ, ಕುಲದೀಪ್ ಯಾದವ್ ಮತ್ತು ರಿಷಭ್ ಪಂತ್.
ಕೆಟಗರಿ ಬಿ: ವೃದ್ಧಿಮಾನ್ ಸಹಾ, ಉಮೇಶ್ ಯಾದವ್, ಯಜುವೇಂದ್ರ ಚಹಾಲ್, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್.
ಕೆಟಗರಿ ಸಿ: ಕೇದರ್ ಜಾಧವ್, ನವದೀಪ್ ಸೈನಿ, ದೀಪಕ್ ಚಹಾರ್, ಮನೀಶ್ ಪಾಂಡೆ, ಹನುಮ ವಿಹಾರಿ, ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್. (ಏಜೆನ್ಸೀಸ್)