More

    ಸ್ಥಳೀಯರಿಗೆ ಉದ್ಯೋಗ ನೀಡಿ: ಸಂಸದ ಜಿ.ಎಸ್.ಬಸವರಾಜು

    ತುಮಕೂರು: ಜಿಲ್ಲೆಯ ಜನರು ಬಹುನಿರೀಕ್ಷೆ ಇಟ್ಟುಕೊಂಡಿದ್ದ ವಸಂತನರಸಾಪುರ ಕೈಗಾರಿಕಾ ಪ್ರದೇಶ ‘ಫುಡ್‌ಪಾರ್ಕ್’ಗೆ ಭೇಟಿ ನೀಡಿದ ಸಂಸದ ಜಿ.ಎಸ್.ಬಸವರಾಜು ಅಲ್ಲಿನ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.

    ತುಮಕೂರು ವಸಂತನರಸಾಪುರದ ಟೆಕ್ನೋ ಸ್ಪಾರ್ಕ್ ಇಂಡಸ್ಟ್ರೀಸ್ ಇಂಡಿಯಾ ಲಿ., ಶುಕ್ರವಾರ ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸ್ಥಳೀಯರಿಗೆ ಉದ್ಯೋಗವಕಾಶ ನೀಡಬೇಕು ಎಂದರು.

    ಕೇಂದ್ರ ಸರ್ಕಾರ ಕೂಡ 48.05ಕೋಟಿ ರೂ. ಸಹಾಯಧನ ನೀಡಿದ್ದು, ಜಿಲ್ಲೆಯ ರೈತರು ಬೆಳೆಯುವ ಹಣ್ಣು, ತರಕಾರಿ, ಕಡಲೆಕಾಯಿ ಮತ್ತು ಸಿರಿಧಾನ್ಯಗಳನ್ನು ಖರೀದಿಸಿ ರೈತರಿಗೆ ನೆರವಾಗುವ ಜತೆಗೆ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎಂದರು.

    ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ 3ನೇ ಹಂತದಲ್ಲಿ 3500 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಿ ಜಪಾನೀಸ್ ಕಂಪನಿಗೆ 500 ಎಕರೆ, ತುಮಕೂರು ಮಿಷಿನ್ ಟೂಲ್ಸ್ ಕಂಪನಿಗೆ 530 ಎಕರೆ, ಪವರ್‌ಗ್ರಿಡ್‌ಗೆ 110 ಎಕರೆ, ಫುಡ್‌ಪಾರ್ಕ್‌ಗೆ 102 ಎಕರೆ, ಹಾವೆಲ್ಸ್ ಕಂಪನಿಗೆ 60 ಎಕರೆ, ಹಿಮಾಲಯ ಡ್ರಗ್ಸ್‌ಗೆ 40 ಎಕರೆ, ವೆಕ್ಟಸ್ ಕಂಪನಿಗೆ 10 ಎಕರೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನೀಡಲಾಗಿದೆ ಎಂದರು.

    ಕೈಗಾರಿಕೆಗಳಿಂದ ಸ್ಥಳೀಯ ಜನರ ಆರ್ಥಿಕ ಮಟ್ಟ ಸುಧಾರಿಸಲು ನೇರವಾಗಿ ರೈತರಿಂದ ಟೊಮ್ಯಾಟೋ, ಆಲೂಗಡ್ಡೆ, ಮಾವಿನಹಣ್ಣು, ಹಲಸಿನ ಹಣ್ಣು ಮತ್ತು ಇತರೆ ತರಕಾರಿಗಳನ್ನು ಖರೀದಿಸಿ ಅವುಗಳ ಮೌಲ್ಯವರ್ಧನೆ ಮಾಡಿ ಗ್ರಾಹಕರಿಗೆ ತಲುಪಿಸುವ ಕೆಲಸ ಫುಡ್‌ಪಾರ್ಕ್‌ನಿಂದ ಆಗಬೇಕಿದೆ. ತುಮಕೂರಿನ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಅನುದಾನ ಪಡೆಯಲು ಅವಕಾಶವಿದ್ದು, ಈ ಅನುದಾನವನ್ನು ಪಡೆಯುವಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾಳಜಿವಹಿಸಬೇಕು ಎಂದು ಮನವಿ ಮಾಡಿದರು.

    ಕೈಗಾರಿಕಾ ಪ್ರದೇಶದಲ್ಲಿ ನಿರಂತರ ವಿದ್ಯುತ್, ಸಾಕಷ್ಟು ನೀರು ಸರಬರಾಜು ಮತ್ತು ರಸ್ತೆಗಳ ಅಭಿವೃದ್ಧಿಯ ಜತೆಗೆ ರೈಲ್ವೆ ಕಾರಿಡಾರ್, ಗೂಡ್ಸ್‌ಶೆಡ್ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ಸಂಪರ್ಕಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಜತೆಗೆ ಮೆಟ್ರೋ ರೈಲ್ವೆ ಯೋಜನೆ ಸಹ ಜಾರಿಗೊಳಿಸಲು ಅವಕಾಶವಿದೆ ಎಂದರು. ಸ್ಥಳೀಯ ವಾಣಿಜ್ಯ ಮಂಡಳಿ ಪದಾಧಿಕಾರಿಗಳ ಬೇಡಿಕೆಯಂತೆ ಇಎಸ್‌ಐ ಆಸ್ಪತ್ರೆ, ಅಗ್ನಿಶಾಮಕದಳ ಠಾಣೆ, ಮಾಡ್ರನ್ ಡೇರಿ, ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಲು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

    ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿಕಾರಿ ಸುನೀಲ್, ಬೆಸ್ಕಾಂ ಇಂಜಿನಿಯರ್ ಗೋವಿಂದಪ್ಪ, ವಾಣಿಜ್ಯ ಮಂಡಳಿ ಅಧ್ಯಕ್ಷ ಚಂದ್ರಶೇಖರ್, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸುಜ್ಞಾನಹಿರೇಮಠ, ವಸಂತನರಸಾಪುರ ಕೈಗಾರಿಕಾ ಉದ್ಯಮಿಗಳ ಸಂಘದ ಅಧ್ಯಕ್ಷ ಕೆ.ಎನ್.ಶಿವಶಂಕರ್, ಶಿವಕುಮಾರ್, ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪಿ.ನಾಗೇಶ್ ಮತ್ತಿತರರು ಇದ್ದರು.

    ಅಂತರ್ಜಲ ಹೆಚ್ಚಿಸಲು ಅಗತ್ಯ ಕ್ರಮ: ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಸಲು ಎತ್ತಿನಹೊಳೆ ಯೋಜನೆ, ಕುಮಾರಧಾರ ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲ ಕೆರೆಗಳನ್ನು ನೀರು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು. ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರದೇಶದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಲು ಜಾಗ ಕಾಯ್ದಿರಿಸುವಂತೆ ಮತ್ತು ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪಿಸಲು ಸರ್ಕಾರ ಅನುದಾನ ಪಡೆಯಬಹುದು ಎಂದರು. ಕೈಗಾರಿಕೆ ಕೇವಲ ಸಬ್ಸಿಡಿ ಹಣ ಪಡೆಯುವುದಕ್ಕೋಸ್ಕರವಾಗಿ ಸ್ಥಾಪನೆಯಾಗದೆ ಈ ಭಾಗದ ಜನರ ಆಶೋತ್ತರಗಳನ್ನು ಈಡೇರಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ತರಲು ಸದಾ ಸಿದ್ಧರಾಗಿದ್ದೇವೆ ಎಂದು ಅವರು ಭರವಸೆ ನೀಡಿದರು. ಕೈಗಾರಿಕಾ ಪ್ರದೇಶಾಭಿವೃದ್ಧಿಯ 4ನೇ ಹಂತ ಟೆಂಡರ್ ಪ್ರಕ್ರಿಯೆಯಲ್ಲಿದ್ದು, 5 ಮತ್ತು 6ನೇ ಹಂತ ಜಾಯಿಂಟ್ ಮೆಜರ್‌ಮೆಂಟ್ ಹಂತದಲ್ಲಿದೆ ಎಂದು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿ ಸುನೀಲ್ ಸಭೆಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts