ಭೋಪಾಲ್: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಶಂಕಾಸ್ಪದ ಪತ್ರಗಳನ್ನು ಕಳುಹಿಸಿದ ಪ್ರಕರಣದಲ್ಲಿ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ವೈದ್ಯರೊಬ್ಬರನ್ನು ಮಧ್ಯಪ್ರದೇಶದ ಭಯೋತ್ಪಾದನಾ ನಿಗ್ರಹ ಪಡೆ(ಎಟಿಎಸ್) ಶನಿವಾರ ಬಂಧಿಸಿದೆ.
ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿರುವ ಪತ್ರಗಳನ್ನು ನನ್ನ ವಿಳಾಸಕ್ಕೆ ಕಳುಹಿಸಲಾಗಿದೆ ಎಂದು ಕಳೆದ ಸೋಮವಾರ ಠಾಕೂರ್ ಮಧ್ಯಪ್ರದೇಶ ರಾಜಧಾನಿ ಭೋಪಾಲ್ನ ಕಮಲ್ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು 3 ರಿಂದ 4 ಪತ್ರಗಳನ್ನು ಠಾಕೂರ್ ಅವರ ನಿವಾಸದಲ್ಲಿ ವಶಕ್ಕೆ ಪಡೆದಿದ್ದರು. ಪತ್ರದಲ್ಲಿ ಮೇಲೆ ಉರ್ದು ಭಾಷೆಯಲ್ಲಿ ಬರೆಯಲಾಗಿತ್ತು.
ಎಟಿಎಸ್ ನಡೆಸಿದ ತನಿಖಾ ವೇಳೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಧನೆಗಾಂವ್ ಏರಿಯಾದಲ್ಲಿ ಕ್ಲಿನಿಕ್ ನಡೆಸುತ್ತಿರುವ ಅಬ್ದುಲ್ ರೆಹಮಾನ್ ಖಾನ್(35) ಎಂಬಾತನ್ನು ಬಂಧಿಸಲಾಗಿದೆ. ಈತನೇ ಠಾಕುರ್ ನಿವಾಸಕ್ಕೆ ಶಂಕಾಸ್ಪದ ಪತ್ರಗಳನ್ನು ಕಳುಹಿಸಿರುವುದಾಗಿ ತಿಳಿದುಬಂದಿರುವುದಾಗಿ ನಾಂದೇಡ್ನ ಇಟ್ವಾರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರದೀಪ್ ಕಾಕಡೆ ಮಾಹಿತಿ ನೀಡಿದ್ದಾರೆ.
ಗುರುವಾರ ಸಂಜೆ ಧನೆಗಾಂವ್ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕಳೆದ ಮೂರು ತಿಂಗಳಿನಿಂದ ಕೆಲ ಅಧಿಕಾರಿಗಳಿಗೂ ಇದೇ ರೀತಿಯಾಗಿ ಪತ್ರ ಬರೆದು ತನ್ನ ತಾಯಿ ಮತ್ತು ಸಹೋದರನಿಗೆ ಉಗ್ರರ ಸಂಪರ್ಕವಿದೆ ಅವರನ್ನು ಬಂಧಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದಾಗಿಯೂ ತನಿಖಾ ವೇಳೆ ಬಹಿರಂಗವಾಗಿದೆ ಎಂದು ಕಾಕಡೆ ತಿಳಿಸಿದ್ದಾರೆ. ಮತ್ತಷ್ಟು ತನಿಖೆ ಮುಂದುವರಿದಿದೆ. (ಏಜೆನ್ಸೀಸ್)