ಚಿತ್ರ: ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು
ನಿರ್ದೇಶನ: ಕೇಶವ್ ಮೂರ್ತಿ
ನಿರ್ಮಾಣ: ರವೀಂದ್ರನ್, ಕುಬೇಂದ್ರನ್
ತಾರಾಗಣ: ದಿಲೀಪ್ ರಾಜ್, ಮಧುಸೂದನ್ ಗೋವಿಂದ್, ಪ್ರಸನ್ನ ವಿ.ಶೆಟ್ಟಿ, ಶಿಲ್ಪಾ ಮಂಜುನಾಥ್, ಅಪೂರ್ವ ಭಾರದ್ವಾಜ್
ಶಿವ ಸ್ಥಾವರಮಠ
ಮನುಷ್ಯನ ಮನಸ್ಥಿತಿ ಹಾಗೂ ಪರಿಸ್ಥಿತಿ ವಿಧ ವಿಧ. ಇದರಲ್ಲಿ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿರುವವರದು ಬೇರೆ ಏನಿಲ್ಲ. ಕೆಲವರು ಹೊಟ್ಟೆಪಾಡಿಗಾಗಿ ಕದ್ದರೆ, ಇನ್ನು ಕೆಲವರಿಗೆ ಅದೊಂದು ಕಾಯಿಲೆ. ಇನ್ನು ಕೆಲವರು, ಶ್ರೀಮಂತರಿಂದ ಕದ್ದು ಬಡವರಿಗೆ ನೀಡಬೇಕು ಎನ್ನುವ ರಾಬಿನ್ ಹುಡ್ನಂತಹ ಉದಾರ ಮನೋಭಾವ. ಈ ಮೂವರು ಕಳ್ಳರೇ, ಆದರೆ, ಉದ್ದೇಶ ಬೇರೆ ಬೇರೆ. ಇಂತಹದ್ದೇ ಮೂವರ ಬದುಕಿನ ಕಥೆಯೇ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’.
ಸಿನಿಮಾದ ಟೈಟಲ್ ಹೇಳುವಂತೆ ರೈಲ್ವೇ ಹಾಗೂ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಕಳ್ಳರ ಕಾಟದಿಂದ ತಪ್ಪಿಸಿಕೊಳ್ಳಲು ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಎಂದು ಫಲಕ ಹಾಕಿರುತ್ತಾರೆ. ಇಲ್ಲಿ ಅಂತಹ ಫಲಕಗಳು ಕಾಣಸಿಗುವುದಿಲ್ಲ. ಮೇಲಾಗಿ ಇವರು ಕಳ್ಳತನ ಮಾಡುವುದಿಲ್ಲ ಬಿಡು ಎನ್ನುವಷ್ಟು ಮುಗ್ಧತೆ, ಶ್ರೀಮಂತಿಕೆ ಇರುವ ಹಾಗೂ ಅಧಿಕಾರಸ್ಥ ವ್ಯಕ್ತಿಗಳು. ಆದರೆ, ಅವರೇ ಕಳ್ಳತನ ಮಾಡುತ್ತಿರುತ್ತಾರೆ. ಇಲ್ಲಿ ಯಾರನ್ನೂ ನಂಬಲು ಸಾಧ್ಯವಿಲ್ಲ ಎನ್ನುವಂತ ಕಥೆಯನ್ನು ಕುತೂಹಲದೊಂದಿಗೆ ನಿರೂಪಿಸಿದ್ದಾರೆ ನಿರ್ದೇಶಕ ಕೇಶವ್ ಮೂರ್ತಿ.
ಒಬ್ಬ ಇನಾಯತ್ (ಪ್ರಸನ್ನ). ವಾಟರ್ ಫಿಲ್ಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಮುಂದೆ ಬದುಕಿನ ಹೊಣೆಗಾರಿಕೆಗಾಗಿ ಅಡ್ಡದಾರಿ ಹಿಡಿಯುತ್ತಾನೆ. ಇನ್ನೊಬ್ಬ ರೋಹಿತ್ (ಮಧುಸೂದನ್) ಈತನಿಗೆ ಕ್ಲೆಪ್ಟೋಮೇನಿಯಾ. ಶ್ರೀಮಂತನಾಗಿದ್ದರೂ, ಕಳ್ಳತನ ಮಾಡುವುದು ಒಂದು ಮಾನಸಿಕ ಕಾಯಿಲೆ. ಈತನ ಕಳ್ಳತನಕ್ಕೆ ಪಾಲುದಾರಳು ರತ್ನಾ (ಅಪೂರ್ವ ಭಾರದ್ವಾಜ್). ಕೊನೆಯದಾಗಿ ಅಲ್ಬರ್ಟ್ (ದಿಲೀಪ್ ರಾಜ್) ಶ್ರೀಮಂತರನ್ನು ಹನಿಟ್ರ್ಯಾಪ್ ಮೂಲಕ ಖೆಡ್ಡಾ ತೋಡಿ ಅವರಿಂದ ಹಣ ವಸೂಲಿ ಮಾಡಿ ಬಡವರಿಗೆ ಹಂಚುವಾತ. ಈ ಮೂವರ ಕಥೆಗಳನ್ನು ಪ್ರತ್ಯೇಕವಾಗಿಯೇ ನಿರೂಪಿಸಲಾಗಿದೆ. ಹಾಗಾಗಿ, ಮನುಷ್ಯನ ವಿವಿಧ ರೀತಿಯ ಪರಿಸ್ಥಿತಿ, ಮನಸ್ಥಿತಿಯನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಲಾಗಿದೆ. ಶುರುವಿನಿಂದಲೇ ಸೀಟಿನ ತುದಿಗೆ ಕೂರಿಸುವ ಕುತೂಹಲವನ್ನು ಕಥೆಯಲ್ಲಿ ನಿರ್ದೇಶಕರು ಕಾಪಾಡಿಕೊಂಡಿದ್ದಾರೆ. ಮೊದಲರ್ಧದಲ್ಲಿ ಮನರಂಜನೆ ನೀಡಿದರೆ, ದ್ವಿತೀರ್ಯಾದಲ್ಲಿ ಸ್ಲೋ ಎನಿಸಿದರು ಕಥೆ ಆಪ್ತವಾಗುತ್ತದೆ. ಪ್ರಸನ್ನ ಇನಾಯತ್ ಪಾತ್ರದಲ್ಲಿ ಜೀವಿಸಿದ್ದಾರೆ. ಮಧುಸೂದನ್, ಅಪೂರ್ವ ಪಾತ್ರಗಳು ರಂಜಿಸುತ್ತವೆ. ದಿಲೀಪ್ ಹಾಗೂ ಶಿಲ್ಪಾ ಪಾತ್ರಗಳು ಗಮನಸೆಳೆಯುತ್ತವೆ. ಕಂಟೆಂಟ್ ಜತೆಗೆ ಎಂಟರ್ಟೇನ್ಮೆಂಟ್ ಬಯಸುವವರಿಗೆ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸೂಕ್ತ ಆಯ್ಕೆ.