ಮಂಡ್ಯ: ಮನುಷ್ಯ ಆಸೆ ಕೂಪಕ್ಕೆ ಬಿದ್ದು ಭೂ ಸಂಪತ್ತನ್ನು ಲೂಟಿ ಮಾಡುತ್ತಿದ್ದಾನೆ. ಇದರೊಂದಿಗೆ ಪ್ರಕೃತಿಯನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದಾನೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಹಲ್ಲೆಗೆರೆ ಗ್ರಾಮದ ಭೂದೇವಿ ಆಧ್ಯಾತ್ಮಿಕ ಕೇಂದ್ರದಲ್ಲಿ ಸ್ಕೋಪ್ ಫೌಂಡೇಷನ್ ಇಂಡಿಯಾದಿಂದ ಆಯೋಜಿಸಲಾಗಿದ್ದ ಮದರ್ ಅರ್ಥ್ ಡೇ ಸೆಲೆಬ್ರೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂಮಿಯ ಒಡಲನ್ನು ಎಷ್ಟೇ ಬಗೆದರೂ ಮುನಿಸಿಕೊಳ್ಳದೇ ಭೂತಾಯಿ ಎಲ್ಲರನ್ನೂ ತನ್ನ ಮಕ್ಕಳಂತೆ ಆರೈಕೆ ಮಾಡಿಕೊಂಡು ಬರುತ್ತಿದೆ. ಭೂಮಿಗೆ ಭಾರತದಲ್ಲಿ ಪೂಜನೀಯ ಸ್ಥಾನವಿದೆ. ನಮ್ಮ ಮುಂದಿನ ಪೀಳಿಗೆಗೆ ಭೂಮಿಯ ಆರಾಧನೆ ಮತ್ತು ಸಂರಕ್ಷಣೆಯ ಜವಾಬ್ದಾರಿ ನೀಡಬೇಕಿದೆ. ಈ ನಿಟ್ಟಿನಲ್ಲಿ ಹಲ್ಲೆಗೆರೆ ಮೂರ್ತಿ ಅವರು ಪ್ರಕೃತಿ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಪ್ರಕೃತಿ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬರುವುದರಿಂದ ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗಿ ಪ್ರಜ್ವಲಿಸುತ್ತದೆ ಎಂದು ಹೇಳಿದರು.
ಪ್ರಕೃತಿಯ ಆರಾಧನೆಯಲ್ಲಿ ಭಾರತೀಯ ಸಂಸ್ಕೃತಿಯ ಪರಂಪರೆ ನಿಂತಿದೆ. ಪ್ರಕೃತಿ ಸಂರಕ್ಷಣೆ ಎಲ್ಲ ಭಾರತೀಯ ನಾಗರಿಕರ ಹೊಣೆಯಾಗಿದೆ. ಆಧುನಿಕ ತಂತ್ರಜ್ಞಾನದಲ್ಲಿ ನಾವೆಲ್ಲರೂ ತಲ್ಲೀನರಾಗಿ ನಮ್ಮ ಪೂರ್ವ ಪರಂಪರೆಯನ್ನು ಮರೆಯುತ್ತಿದ್ದೇವೆ. ನಮ್ಮ ಪೂರ್ವಜರು ಭೂಮಿ ಮತ್ತು ಪ್ರಕೃತಿಯನ್ನ ನಂಬಿ ಆರಾಧಿಸಿಕೊಂಡು ಬಂದಿದ್ದಾರೆ. ಹೀಗಾಗಿ ನಾವು ಯಾರೂ ಸಹ ಭೂತಾಯಿಯನ್ನು ಮರೆಯುವಂತಿಲ್ಲ ಎಂದರು.
ಆಯೋಜಕ ಡಾ.ಆನಂದ್ ಭಟ್ ಮಾತನಾಡಿ, ಹಲ್ಲೆಗೆರೆ ಗ್ರಾಮದಲ್ಲಿ ಪ್ರಕೃತಿಗೆ ಮೀಸಲಾಗಿರುವ ಸ್ಮಾರಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ಭೂದೇವಿಗೆ ಸಮರ್ಪಿತವಾದ ಸ್ಮಾರಕವಾಗಿ ನಿರ್ಮಾಣಗೊಳ್ಳಲಿದೆ. ಮುಂದೆ ಇದೊಂದು ಐತಿಹಾಸಿಕ ಸ್ಮಾರಕವಾಗಿ ಗುರುತಿಸಿಕೊಳ್ಳಲಿದೆ. ಸ್ಕೋಪ್ ಫೌಂಡೇಷನ್ ಅನೇಕ ಸಮಾಜಮುಖಿ ಕೆಲಸಗಳನ್ನು ಹಲ್ಲೆಗೆರೆ ಮೂರ್ತಿ ಅವರು ನಡೆಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಹಲ್ಲೆಗೆರೆಯಲ್ಲಿ ಆರೋಗ್ಯ ಕೇಂದ್ರ ತೆರೆಯಲು ಚಿಂತನೆ ನಡೆಸಲಾಗಿದೆ. ಅಂತೆಯೇ ಈ ಭೂಮಿ ಸ್ಮಾರಕ ಪ್ರವಾಸೋದ್ಯಮ ಪಟ್ಟಿಗೆ ಸೇರಿದ ನಂತರ ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸ್ಕೋಪ್ ಫೌಂಡೇಷನ್ ಸಂಸ್ಥಾಪಕ ಡಾ.ಮೂರ್ತಿ ಮಾತನಾಡಿ, ಜಗತ್ತಿನಾದ್ಯಂತ ನಾವೆಲ್ಲರೂ ದೇಶ, ರಾಜ್ಯ, ಜಾತಿ, ಧರ್ಮ ಎಂದು ವಿಕೇಂದ್ರೀಕರಣಗೊಂಡಿದ್ದೇವೆ. ವಾಸ್ತವವೆಂದರೆ ನಾವೆಲ್ಲರೂ ಮನುಷ್ಯರು. ನಮ್ಮೆಲ್ಲರ ತಾಯಿ ಒಬ್ಬಳೆ, ಅದೇ ಭೂಮಿ ತಾಯಿ. ಆಕೆಯ ಪ್ರೀತಿ ಸಹನೆ ಅನುಕಂಪ ಗಮನಿಸದೆ ಭೂಮಿಯ ಖನಿಜ ಸಂಪತ್ತನ್ನು ಲೂಟಿ ಮಾಡಲು ನಿಂತಿದ್ದೇವೆ. ಭೂದೇವಿ ಆಧ್ಯಾತ್ಮಿಕ ಕೇಂದ್ರ ಸ್ಥಾಪಿಸಿದ ನಂತರ ಭೂಮಿಯ ಸಹನೆ, ಕೊಡುಗೆಯ ನೈಸರ್ಗಿಕ ಸಂಪತ್ತುಗಳಾದ ಗಾಳಿ, ನೀರು, ಬೆಳಕುಗಳ ಮೌಲ್ಯವನ್ನು ಪಸರಿಸುತ್ತೇವೆ. ತಾಯಿಯ ಸಂರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಹೈಕೋರ್ಟ್ ಹಿರಿಯ ವಕೀಲ ಚಂದ್ರಮೌಳಿ, ಜಾನಪದ ಕಲಾವಿದ ಡಾ.ರಮೇಶ್ವರಪ್ಪ, ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ವೆಂಕಟೇಶ್ ಇತರರಿದ್ದರು.
