ಶ್ರೀರಂಗಪಟ್ಟಣ: ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಪ್ರವಾಸಿಗರು ಹಾಗೂ ಭಕ್ತರಿಂದ ತುಂಬಿ ತುಳುಕಿತು.
ಪಟ್ಟಣ ವ್ಯಾಪ್ತಿಯ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯ, ಗಂಜಾಂನ ಶ್ರೀ ನಿಮಿಷಾಂಬ, ತಾಲೂಕಿನ ಕರಿಘಟ್ಟ ಬೆಟ್ಟದ ಶ್ರೀವೆಂಕಟರಮಣಸ್ವಾಮಿ ದೇಗುಲ ಹಾಗೂ ಆರತಿಉಕ್ಕಡದ ಶಕ್ತಿದೇವತೆ ಶ್ರೀ ಅಹಲ್ಯಾದೇವಿ ದೇವಾಲಯಗಳಿಗೆ ಸಹಸ್ರಾರು ಜನರು ಕುಟುಂಬ ಸಮೇತ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು.
ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಟಿಪ್ಪುವಿನ ಬೇಸಿಗೆ ಅರಮನೆ ದರಿಯದೌಲತ್, ಗುಂಬಸ್, ಡಂಜನ್, ಕರಿಘಟ್ಟ ಹಾಗೂ ಮಂಡ್ಯದಕೊಪ್ಪಲು ಬೋರೆದೇವರಗುಡಿಗಳಲ್ಲೂ ಹೆಚ್ಚಾಗಿ ಜನರು ಕಂಡುಬಂದರು. ಅಲ್ಲದೆ ಕಾವೇರಿ ನದಿ ತೀರಗಳಲ್ಲಿ ಸಾರ್ವಜನಿಕರ ವೇಶಕ್ಕೆ ತಾಲೂಕು ಆಡಳಿತ ನಿಷೇಧಾಜ್ಞೆ ಹೇರಿದ್ದ ಪರಿಣಾಮ ಪೊಲೀಸ್ ಪಡೆ ಠಿಕಾಣಿ ಹೂಡಿತ್ತು.
ವಿಶ್ವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ಜಿಲ್ಲೆ, ರಾಜ್ಯ ಹೊರರಾಜ್ಯ ಸೇರಿದಂತೆ ವಿದೇಶಿ ಪ್ರವಾಸಿಗರು ಭೇಟಿಕೊಟ್ಟಿದ್ದರಿಂದ ಉದ್ಯಾನದಲ್ಲಿ ದಟ್ಟಣೆ ಕಂಡಿತು. ಕಾವೇರಿ ನದಿಯಲ್ಲಿ ದೋಣಿ ವಿಹಾರ ನಡೆಸಲು ಸರದಿಯಲ್ಲಿ ನಿಂತಿದ್ದ ದೃಶ್ಯ ಕಂಡುಬಂತು. ಪಕ್ಷಿಧಾಮದಲ್ಲಿ ದೆೇಶ, ವಿದೇಶದ ವಿವಿಧ ಆಕರ್ಷಕ ಪಕ್ಷಿಗಳನ್ನು ಕಣ್ತುಂಬಿಕೊಂಡ ಪ್ರವಾಸಿಗರು, ಕಾವೇರಿ ನದಿ ಬಂಡೆಗಳ ಮೇಲೆ ಮಲಗಿದ್ದ ಮಾರ್ಷಲ್ ತಳಿಯ ಮೊಸಳೆಗಳು, ರಿನಲ್ಲಿ ಮಹಶೀರ್ ಮೀನುಗಳು ಹಾಗೂ ನೀರುನಾಯಿಗಳನ್ನು ಕಂಡು ಹರ್ಷ ವ್ಯಕ್ತಪಡಿಸುತ್ತಿದ್ದರು.
ಹೆದ್ದಾರಿಯಲ್ಲಿ ವಾಹನ ದಟ್ಟಣೆ: ಹೊಸವರ್ಷದ ಪ್ರಯುಕ್ತ ಸಾವಿರಾರು ಪ್ರವಾಸಿಗರು ಆಗಮಿಸಿದ್ದ ಕಾರಣ ಶ್ರೀರಂಗಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರೇಕ್ಷಣಿಯ ಸ್ಥಳಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರಿಂದ ಯಾವುದೇ ಗೊಂದಲ ಎದುರಾಗಲಿಲ್ಲ.