ಆಲಮಟ್ಟಿ: ಮಠಗಳು ಸಂಸ್ಕಾರ ನೀಡುವ ಕೇಂದ್ರಗಳಾಗಿ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ಬೆಳೆಸುವ ಕಾರ್ಯ ಮಾಡುತ್ತಿವೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಚಿಮ್ಮಲಗಿ ಗ್ರಾಮ-2 ಅರಳೆಲೆ ಕಟ್ಟಿಮನಿ ಹಿರೇಮಠದಲ್ಲಿ ನಡೆದ ಲಿಂ. ನೀಲಕಂಠ ಶ್ರೀಗಳ ದ್ವಿತೀಯ ಸ್ಮರಣೆ ಹಾಗೂ ಸಿದ್ಧರೇಣುಕ ಶ್ರೀಗಳ ಅನುಷ್ಠಾನ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೀರಶೈವ ಧರ್ಮ ಮಾನವ ಧರ್ಮ ಎತ್ತಿ ಹಿಡಿದಿದೆ. ಇದರಲ್ಲಿರುವ ಧರ್ಮ ಚಿಂತನೆಗಳು ಎಲ್ಲರ ಉನ್ನತಿಗಾಗಿ ಇವೆಯೇ ಹೊರತು ಅವನತಿಗಲ್ಲ ಎಂದರು.
ಉತ್ತಮ ಚಿಂತನೆಗಳು ನಮ್ಮ ಬದುಕಿನ ಜತೆಗೆ ಪರರ ಬದುಕಿಗೂ ಬೆಳಕಾಗಬಲ್ಲದು. ಧರ್ಮ ನಮಗೆ ಏನು ಕೊಟ್ಟಿದೆ ಅನ್ನುವುದಕ್ಕಿಂತ ನಾವು ಧರ್ಮಕ್ಕೆ, ದೇಶಕ್ಕೆ ಏನು ಕೊಟ್ಟಿದ್ದೇವೆ ಎಂಬ ಅರಿವು ನಮಗಿರಬೇಕು. ಜೀವನಾಧಾರಕ್ಕೆ ಅನ್ನ, ನೀರು, ಗಾಳಿ ಅವಶ್ಯಕವಾಗಿರುವಂತೆ ಜೀವನದ ಉನ್ನತಿಗೆ, ಶ್ರೇಯಸ್ಸಿಗೆ ನಿರಂತರ ಪ್ರಯತ್ನ ಮತ್ತು ಸಾಧನೆ ಮುಖ್ಯವಾಗಿದೆ. ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಮೌಲ್ಯಾಧಾರಿತ ವಿಚಾರಧಾರೆಗಳು ಸಕಲರ ಶ್ರೇಯಸ್ಸಿಗೆ ಕಾರಣವಾಗಿವೆ ಎಂದರು.
ದೇವರಹಿಪ್ಪರಗಿಯ ಶಾಸಕ ರಾಜುಗೌಡ ಪಾಟೀಲ ಮಾತನಾಡಿದರು. ಶ್ರೀಮಠದ ಸಿದ್ಧರೇಣುಕ ಸ್ವಾಮೀಜಿ ಆಶೀರ್ವಚನ ನೀಡಿದರು.
ಬಸವನಬಾಗೇವಾಡಿಯ ಶಿವಪ್ರಕಾಶ ಸ್ವಾಮೀಜಿ, ಮುಳವಾಡದ ಸಿದ್ಧ್ದಲಿಂಗ ಸ್ವಾಮೀಜಿ, ಬಾಡಗಂಡಿಯ ಬಸಮ್ಮತಾಯಿ, ಗುಂಡಕನಾಳದ ಗುರುಲಿಂಗ ಸ್ವಾಮೀಜಿ, ಮುತ್ತತ್ತಿಯ ಗುರುಲಿಂಗ ಸ್ವಾಮೀಜಿ, ಮನಗೂಳಿಯ ಸಂಗನಬಸವ ಸ್ವಾಮೀಜಿ, ತಡವಲಗಾದ ಅಭಿನವ ರಾಚೋಟೇಶ್ವರ ಸ್ವಾಮೀಜಿ, ಯಂಕಂಚಿಯ ರುದ್ರಮುನಿ ಸ್ವಾಮೀಜಿ, ಇಂಗಳೇಶ್ವರದ ಬೃಂಗೀಶ್ವರ ಸ್ವಾಮೀಜಿ ಪಾಲ್ಗೊಂಡಿದ್ದರು.