ಕೆ.ಕೆಂಚಪ್ಪ ಮೊಳಕಾಲ್ಮೂರು: ಆಂಧ್ರ ಮತ್ತು ಕರ್ನಾಟಕ ಗಡಿಭಾಗದವರ ರಕ್ಷಕಿ ಆಗಿರುವ ಶಕ್ತಿದೇವತೆ ಗಾಳಿಮಾರಮ್ಮ ದೇವಿಯ ದೇಗುಲ ಭಕ್ತರ ಆರಾಧನೆಯಲ್ಲಿ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿಯಾಗಿದೆ.
ಮೊಳಕಾಲ್ಮೂರು ಯದ್ದಲಬೋಮ್ಮಯ್ಯನಹಟ್ಟಿ ಪಕ್ಕದಲ್ಲೇ ಎರಡೂ ರಾಜ್ಯಗಳ ಗಡಿ ಪ್ರದೇಶದಲ್ಲಿ ನೆಲೆಸಿರುವ ಗಾಳಿಮಾರಮ್ಮ ಮಕ್ಕಳ ತಾಯಿ ಎಂದೇ ಪ್ರಸಿದ್ಧಿ. ಅಮ್ಮನ ಹೆಸರಿನಲ್ಲಿ ನಿತ್ಯವೂ ಪೂಜೆ, ಪುನಸ್ಕಾರಗಳು ಹಾಗೂ ಹರಕೆ ಹೊತ್ತ ಭಕ್ತರಿಂದ ಅನ್ನದಾಸೋಹ ಕಾರ್ಯಕ್ರಮ ಇದ್ದೇ ಇರುತ್ತವೆ.
ಅಪಘಾತ ತಡೆವ ತಾಯಿ: ಹೆದ್ದಾರಿ ಪಕ್ಕದಲ್ಲೇ ದೇವಸ್ಥಾನ ಇರುವ ಕಾರಣ ವಾಹನಗಳಲ್ಲಿ ಸಂಚಾರ ಮಾಡುವ ಭಕ್ತರು ತಾಯಿಗೆ ಕಾಣಿಕೆ ಅರ್ಪಿಸಿ ದರ್ಶನ ಪಡೆದು, ಸಂಚಾರದಲ್ಲಿ ಯಾವುದೇ ಅವಘಡ ಸಂಭವಿಸದಂತೆ ಮನವಿ ಮಾಡಿ ಮುನ್ನಡೆಯುತ್ತಾರೆ. ಸಣ್ಣ ಮಕ್ಕಳಿಗೆ ಅಮ್ಮ, ದಡಾರ ಕಾಣಿಸಿಕೊಂಡರೆ ದೇವಿಗೆ ಹರಕೆ ಹೊತ್ತರೆ ಸಾಕು ನಿವಾರಣೆ ಆಗುತ್ತೆಂಬ ನಂಬಿಕೆ ಭಕ್ತರಲ್ಲಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ, ಮಹಾ ಮಂಗಳಾರತಿ ನಡೆಯುತ್ತದೆ.
ಧಾರ್ಮಿಕ ಪರಂಪರೆ ಪದ್ಧತಿ: ಪ್ರತಿ 4 ವರ್ಷಕ್ಕೊಮ್ಮೆ ಮೊಳಕಾಲ್ಮೂರಿನಲ್ಲಿ ನಡೆಯುವ ನುಂಕಪ್ಪನ ಜಾತ್ರೆಗೂ ಮುನ್ನ ಸಂಪ್ರದಾಯದಂತೆ ಪಟ್ಟಣದ ಜಿನಗಾರು ವಂಶಸ್ಥರ ಮನೆಯಲ್ಲಿ ಶಕ್ತಿ ದೇವತೆ ಪ್ರತಿರೂಪವನ್ನು ಮರದಲ್ಲಿ ಕೆತ್ತನೆ ಮಾಡಿ ಅದಕ್ಕೆ ವಿಶೇಷ ಧಾರ್ಮಿಕ ಆಚರಣೆಗಳ ಪದ್ಧತಿ ಪೂಜೆ ಪುನಸ್ಕಾರಗಳಲ್ಲಿ ಜೀವ ತುಂಬುತ್ತಾರೆ.
ಊರಲ್ಲಿ ದೇವಿ ಉತ್ಸವ ಮೂರ್ತಿ ಮೆರವಣಿಗೆ ಮಾಡಿ ಅನ್ನದ ಸರಗನ್ನ ಚೆಲ್ಲಲಾಗುತ್ತದೆ. ನಂತರ ಧಾರ್ಮಿಕ ಶಾಸ್ತ್ರ ಕಾರ್ಯಗಳು ನೆರವೇರಿದ ಬಳಿಕ ಇಲ್ಲಿನ ಮೂಲ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಜಾತ್ರೆ ನಡೆಯುತ್ತದೆ. ಹರಕೆ ಹೊತ್ತ ಭಕ್ತರಿಂದ ಬೇವಿನ ಸೀರೆ ಉಡುವ ಪದ್ಧತಿ ಇತ್ಯಾದಿ ಧಾರ್ಮಿಕ ಸಂಪ್ರದಾಯಗಳು ನೆರವೇರುತ್ತವೆ. ಈ ಸಂದರ್ಭ ಅಂಧ್ರ-ಕರ್ನಾಟಕದಿಂದ ಅಪಾರ ಭಕ್ತಗಣ ಹರಿದು ಬರುತ್ತದೆ.
ಅಭರಣಕ್ಕೆ ಆಸೆ ಪಡುವವಳಲ್ಲ: ಭಕ್ತರ ಕಷ್ಟ ಕಾರ್ಪಣ್ಯಗಳ ನಿವಾರಣೆ ಮಾಡುವ ಶಕ್ತಿದೇವತೆ ಆಭರಣ, ವೈಭೋಗದ ದೇವಸ್ಥಾನಕ್ಕೆ ಎಂದೂ ಆಸೆ ಪಟ್ಟವಳಲ್ಲ. ಕಷ್ಟ ಎಂದು ಬರುವ ಭಕ್ತರು ಹಣ್ಣು, ಕಾಯಿ, ವಸ್ತ್ರ ಅಥವಾ ಬರುವ ಭಕ್ತಾಧಿಗಳಿಗೆ ಅನ್ನದಾಸೋಹ ಅರಿಕೆ ಹೊತ್ತರೆ ಸಾಕು ಅಂದುಕೊಂಡ ಕಾರ್ಯಗಳು ನೆರವೇರಿಸುತ್ತಾಳೆ ಎನ್ನುವುದು ಭಕ್ತರ ನಂಬಿಕೆ.
ಮೊಳಕಾಲ್ಮೂರು ಪಕ್ಕದ ಬೆಟ್ಟದ ತಪ್ಪಲಿನಲ್ಲಿ ನೆಲೆಗೊಂಡಿರುವ ಶ್ರೀ ನುಂಕೆಮಲೆ ಸಿದ್ದೇಶ್ವರಸ್ವಾಮಿ ಜಾತ್ರೆಯನ್ನು ಪಟ್ಟಣದಲ್ಲಿ 4 ವರ್ಷಕ್ಕೊಮ್ಮೆ ನಡೆಸಿಕೊಂಡು ಬರಲಾಗುತ್ತಿದೆ. ಅದಕ್ಕೂ ಮುನ್ನ ಊರಲ್ಲಿ ಜಾತ್ರೆ ವೇಳೆ ಯಾವುದೇ ಅವಘಡ ಸಂಭವಿಸದಂತೆ ಶಾಂತಿ ನೆಲೆಸಲು ದೇವತೆ ಗಾಳಿಮಾರಮ್ಮನ ಉತ್ಸವ ಮೂರ್ತಿ ಜಾತ್ರಾ ಸಂಪ್ರದಾಯ ನಡೆಸುವ ಪದ್ಧತಿ ಇದೆ.
ಚಂದ್ರಶೇಖರಗೌಡ್ರು ಗ್ರಾಮದ ಮುಖಂಡ