ಮೊಳಕಾಲ್ಮೂರು: ಅಪಘಾತಕ್ಕೆ ಒಳಗಾದವರ ಪ್ರಾಣ ರಕ್ಷಣೆ ಮಾಡಲು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಯುವಕ ಬಳಗ ಸದಸ್ಯರು ಆಸ್ಪತ್ರೆ ಬಳಿ ಗುರುವಾರ ಧರಣಿ ನಡೆಸಿದರು.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ಸೌಲಭ್ಯಗಳ ಕೊರತೆಯಿದೆ. ಅಪಘಾತ ಸಂಭವಿಸಿದಾಗ ಸೂಕ್ತ ಚಿಕಿತ್ಸೆ ಸಿಗದೇ ಅನ್ಯ ಊರುಗಳಿಗೆ ತೆರಳುವ ಪರಿಸ್ಥಿತಿ ಇದೆ.
ಹೊಸ ವರ್ಷಾಚರಣೆ ದಿನ ಬೈಕ್ ಅಫಘಾತಕ್ಕೆ ತುತ್ತಾದ ಯುವಕನಿಗೆ ತುರ್ತು ಚಿಕಿತ್ಸೆ ಸಿಕ್ಕಿದ್ದರೆ ಪ್ರಾಣ ಉಳಿಯುವ ಸಾಧ್ಯ ಇತ್ತು. ಆದರೆ, ಇಲ್ಲಿನ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಆಂಬುಲೆನ್ಸ್ ಸೇವೆ ಇಲ್ಲ. ಅರಿವಳಿಕೆ ತಜ್ಞರಿಲ್ಲ, ಮಕ್ಕಳ ತಜ್ಞರಿಲ್ಲ, ಇಸಿಜಿ, ಐಸಿಯು ಹಾಗೂ ವೈದ್ಯಕೀಯ ಸಲಕರಣೆ, ಸಿಬ್ಬಂದಿ ಕೊರತೆ ಇದೆ ಎಂದು ತಿಳಿಸಿದರು.
ಜಿಲ್ಲಾಡಳಿತ ಹಾಗೂ ಸಚಿವ ಬಿ.ಶ್ರೀರಾಮುಲು ಅವರು ಗಮನ ಹರಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಮೊಳಕಾಲ್ಮೂರು ಬಂದ್ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಯುವಕರಾದ ಕೆ.ರಾಘವೇಂದ್ರ, ಟಿ.ಪುನೀತ್, ಎಸ್.ಡಿ.ಮಲ್ಲಿಕಾರ್ಜುನ, ಕೆ.ಹರ್ಷ, ಟಿ.ಮಂಜುನಾಥ, ಎಸ್.ನಾಗರಾಜ, ವಿ.ಹುಲಿರಾಜ ಹಾಗೂ ವಾಹನ ಚಾಲಕರ ಸಂಘ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.