ದಲಿತ ಸಂಘಟನೆಗಳ ಒಕ್ಕೂಟದ ಒತ್ತಾಯ
ಲಘುವಾಗಿ ಮಾತನಾಡಿದ್ದಕ್ಕೆ ವಿರೋಧ
ಬಾಗೇಪಲ್ಲಿ: ರೋಲ್ಕಾಲ್ ಮಾಡುವ ದಲಿತರ ಬೆದರಿಕೆಗಳಿಗೆ ಭಯಪಡುವ ಶಾಸಕನ ನಾನಲ್ಲ ಎಂದು ಪಾತಪಾಳ್ಯದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಹಗುರವಾಗಿ ಮಾತನಾಡಿರುವ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಪ್ಪೊಪ್ಪಿಕೊಂಡು ಸಾರ್ವಜನಿಕವಾಗಿ ದಲಿತರ ಕ್ಷಮೆ ಯಾಚಿಸಬೇಕು ಎಂದು ತಾಲೂಕು ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಪಟ್ಟಣದ ಪತ್ರಕರ್ತರ ಭವನದಲ್ಲಿ ಒಕ್ಕೂಟದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಚಿನ್ನಪೂಜಪ್ಪ, ಕ್ಷೇತ್ರದ ಶೇ.80 ದಲಿತರ ಮತದಿಂದಲೇ ಸುಬ್ಬಾರೆಡ್ಡಿ ಮೂರನೇ ಬಾರಿಗೆ ಶಾಸಕರಾಗಿದ್ದಾರೆ. ನಮ್ಮ ಮತಗಳಿಂದ ಶಾಸಕರಾಗಿರುವ ನೀವು ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ದಲಿತರು ರೋಲ್ಕಾಲ್ ಮಾಡುವವರು, ಅವರ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಕೀಳಾಗಿ ಮಾತನಾಡಿದ್ದು ಸರಿಯಲ್ಲ ಎಂದರು.
ನಿಮ್ಮ ಬಳಿ ಯಾರಾದರೂ ಹೆದರಿಸಿ ರೋಲ್ಕಾಲ್ ಮಾಡಿದ್ದರೆ ಅಂತಹವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿ ಕ್ರಮ ಜರುಗಿಸಿ. ಅದು ಬಿಟ್ಟು ದಲಿತರ ಬಗ್ಗೆ ಬಹಿರಂಗ ವೇದಿಕೆಗಳಲ್ಲಿ ಬಾಯಿಗೆ ಬಂದಂತೆ ಮಾತನಾಡಿದರೆ ಚುನಾವಣೆ ಸಮಯದಲ್ಲಿ ತಕ್ಕಪಾಠ ಕಲಿಸಲಾಗುವುದು. ಸರ್ಕಾರದಲ್ಲಿ ಸಚಿವರಾಗಬೇಕಾಗಿರುವ ನೀವು ಕ್ಷೇತ್ರದ ದಲಿತರಲ್ಲಿ ಕ್ಷಮೆ ಯಾಚಿಸದಿದ್ದರೆ ದಲಿತರು ನಿಮಗೆ ಧಿಕ್ಕಾರ ಹಾಕಲಿದ್ದಾರೆ ಎಂದು ಎಚ್ಚರಿಸಿದರು.
ಮುಖಂಡ ಎಂ.ವಿ.ಲಕ್ಷ್ಮೀನರಸಿಂಹಪ್ಪ ಮಾತನಾಡಿ, ಕ್ಷೇತ್ರದ ಶಾಸಕರಿಗೆ ಮತ ಹಾಕಿ ಗೆಲ್ಲಿಸಿದ್ದೇವೆ. ದಲಿತರ ಮತಗಳಿಂದ ಶಾಸಕರಾಗಿರುವ ಸುಬ್ಬಾರೆಡ್ಡಿ ಅವರಿಗೆ ನಮ್ಮ ಬಗ್ಗೆ ಭಯಪಡಿ, ಹೆದರಿ ಎಂದು ಎಲ್ಲಿಯೂ ಹೇಳಿಲ್ಲ. ಆದರೂ ದಲಿತರ ಬಗ್ಗೆ ಅಸಭ್ಯವಾಗಿ ಮಾತನಾಡಿರುವುದನ್ನು ಒಕ್ಕೂಟ ಖಂಡಿಸಿದ್ದು, ಶಾಸಕರು ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದರು.
ಮುಖಂಡರಾದ ಗೂಳೂರು ಲಕ್ಷ್ಮೀನಾರಾಯಣ, ಜಯಂತ್, ನಾಗಪ್ಪ, ಎನ್.ನಾರಾಯಣಸ್ವಾಮಿ, ಸಾಯಿ, ಡಿ.ಈಶ್ವರಪ್ಪ, ಗಂಗುಲಮ್ಮ, ರಾಜಪ್ಪ, ವೆಂಕಟೇಶ್, ಈಶ್ವರ್, ರಮಾದೇವಿ, ಎನ್.ಇ.ವೆಂಕಟೇಶ್, ಅಂಜಿನಪ್ಪ, ಹೊಸಹುಡ್ಯ ಕೃಷ್ಣಪ್ಪ ಮತ್ತಿತರರು ಇದ್ದರು.