ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಾಧನೆ ಸಮಾವೇಶದಲ್ಲಿ ಹೊಸಕೋಟೆ ಶಾಸಕ ಶರತ್ಬಚ್ಚೇಗೌಡ ನಾಲ್ಕೂ ತಾಲೂಕುಗಳನ್ನೊಳಗೊಂಡ ಗ್ರಾಮಾಂತರ ಜಿಲ್ಲೆಗೆ ಅಗತ್ಯವಿರುವ ಕಾಮಗಾರಿಗಳ ಬಗ್ಗೆ ಪಟ್ಟಿ ಓದಿ, ಸಿಎಂ ಸಿದ್ದರಾಮಯ್ಯ ಅವರಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಪತ್ರ ಸಲ್ಲಿಸಿದರು.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ಬಿಡುಗಡೆ ಮಾಡಬೇಕು, ದೇವನಹಳ್ಳಿ, ವಿಜಯಪುರ ಹಾಗೂ ನೆಲಮಂಗಲ ನಗರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಗಳಿಗೆ ಹಣ ನೀಡಬೇಕು, ದೇವನಹಳ್ಳಿ, ಹೊಸಕೋಟೆ ಜನರು ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಕಾವೇರಿ ನೀರು ಹರಿಸುವ ಯೋಜನೆಗೆ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಇಟ್ಟರು. ವೃಷಭಾವತಿ 3ನೇ ಹಂತಕ್ಕೆ 650 ಕೋಟಿ ರೂ.ಬಿಡುಗಡೆ ಮಾಡಬೇಕು, ಕೋಲಾರ ಗಡಿಯವರಿಗೆ ಹರಿಯಲಿರುವ ಕಾವೇರಿ ನೀರನ್ನು ಜಿಲ್ಲೆಗೂ ವಿಸ್ತರಿಸಬೇಕು, ನಿವೇಶನ ರಹಿತರಿಗೆ 2500 ಮನೆಗಳ ಜತೆ ಇನ್ನೂ 7500 ಮನೆಗಳನ್ನು ಮಂಜೂರು ಮಾಡಬೇಕು, ವಿಜಯಪುರದಲ್ಲಿ ಸಾರಿಗೆ ಡಿಪೋ ನಿರ್ಮಾಣಕ್ಕೆ ಹಣ ಬೇಕು, ಡಯಟ್ ನಿರ್ಮಾಣಕ್ಕೆ ಅನುದಾನ, ಚನ್ನರಾಯಪಟ್ಟಣದಲ್ಲಿ ಪೊಲೀಸ್ ಅಧೀಕ್ಷಕರ ಕಚೇರಿ ನಿರ್ಮಾಣಕ್ಕೆ ಅದೇಶ ಮಾಡಬೇಕು, ದೇವನಹಳ್ಳಿಯ ಆವತಿಯಲ್ಲಿ ಕೆಂಪೇಗೌಡರ ಸ್ಮಾರಕ ನಿರ್ಮಾಣಕ್ಕೆ 10 ಕೋಟಿ ರೂ.ಅನುದಾನ ಮೀಸಲಿಡಬೇಕು, ನೆಲಮಂಗಲದ ಪ್ರಸಿದ್ದ ಕ್ಷೇತ್ರ ಶಿವಗಂಗೆಗೆ ಪ್ರಾಧಿಕಾರ ನಿರ್ಮಾಣ ಮಾಡಬೇಕು, ದೇವನಹಳ್ಳಿ ದ್ರಾಕ್ಷಿ ಬೆಳೆಗಾರರ ಹಿತರಕ್ಷಣೆಗಾಗಿ ಸಂಶೋಧನಾ ಕೇಂದ್ರ ಸ್ಥಾಪನೆಯಾಗಬೇಕು, ಹೊಸಕೋಟೆಯಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾನೆ, ಜಿಲ್ಲೆಯಲ್ಲಿ ಕೌಶಲ ತರಬೇತಿ ಕೇಂದ್ರ ಬೇಕು, ದೊಡ್ಡಬಳ್ಳಾಪುರದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾಸ್ಪತ್ರೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು, ಮೆಡಿಕಲ್ ಕಾಲೇಜು ಸೇರಿ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ವಿಶೇಷ ಅನುದಾನ ನೀಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
