ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ವ್ಯಾಪ್ತಿಯಲ್ಲಿ 13.50 ಕೋಟಿ ರೂ.ಗಳ ವೆಚ್ಚದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಡಿ.ಹರೀಶ್ಗೌಡ ಭೂಮಿಪೂಜೆ ನೆರವೇರಿಸಿದರು.
ಗುರುವಾರ ತೆಂಕಲಕೊಪ್ಪಲು ಗ್ರಾಮದಲ್ಲಿ 10 ಕೋಟಿ ರೂ. ವೆಚ್ಚದಡಿ 3.92 ಕಿ.ಮೀ. ಉದ್ದದ ತೆಂಕಲಕೊಪ್ಪಲು_ಚೋಳೇನಹಳ್ಳಿ-ಬೋಳನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಹುಸೇನ್ಪುರ, ಶಿರಿಯೂರು ಮತ್ತು ರಾಯನಹಳ್ಳಿ ನಾಲೆಗಳ ಅಭಿವೃದ್ಧಿಗಾಗಿ ತಲಾ 1 ಕೋಟಿ ರೂ.ಗಳ ವೆಚ್ಚದಡಿ (ಒಟ್ಟು 3 ಕೋಟಿ ರೂ.ಗಳು) ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
8.40 ಲಕ್ಷ ರೂ. ವೆಚ್ಚದಡಿ ತೆಂಕಲಕೊಪ್ಪಲು ಗ್ರಾಮದಲ್ಲಿ ಗ್ರಾ.ಪಂ. ಸುಪರ್ದಿಯ 2 ಮಾರಾಟ ಮಳಿಗೆಗಳು ಮತ್ತು ಕೊಮ್ಮೇಗೌಡನಕೊಪ್ಪಲು ಗ್ರಾಮದಲ್ಲಿ ಒಂದು ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು. ಅಲ್ಲದೆ ಹುಸೇನ್ಪುರ ಮತ್ತು ತೆಂಕಲಕೊಪ್ಪಲು ಗ್ರಾಮದಲ್ಲಿ ತಲಾ 8 ಲಕ್ಷ ರೂ. ವೆಚ್ಚದಡಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದರು.
ನಂತರ ತೆಂಕಲಕೊಪ್ಪಲು ಗ್ರಾಮದ ಗುರುಮಠ ಆವರಣದಲ್ಲಿ ಆಯೋಜನೆಗೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಹಲವು ಗ್ಯಾರಂಟಿ ಯೋಜನೆಗಳ ನಡುವೆಯೂ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಅಬಾಧಿತವಾಗಿ ನಡೆಯುವಂತೆ ಪ್ರತಿದಿನ ಸರ್ಕಾರದ ವಿವಿದ ಇಲಾಖೆಗಳ ಸಚಿವರನ್ನು ಭೇಟಿಯಾಗಿ ಅನುದಾನ ತರುತ್ತಿದ್ದೇನೆ. ತಾಲೂಕಿನಲ್ಲಿ ಶಾಸಕರಿಂದ ಅನುದಾನ ತರಲು ಸಾಧ್ಯವಿಲ್ಲ ಎನ್ನುವ ಚರ್ಚೆಗಳು ನಡೆಯುತ್ತಿರುವುದನ್ನು ಬಲ್ಲೆ. ಆದರೆ ನನ್ನನ್ನು ಆರಿಸಿ ಶಾಸಕನನ್ನಾಗಿಸಿರುವ ಜನರ ಒಳಿತಿಗಾಗಿ ನಾನು ಅವಿರತ ಶ್ರಮಿಸುತ್ತಿದ್ದೇನೆ. ಮುಂದೆಯೂ ಶ್ರಮಿಸುತ್ತೇನೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಿಂದ ಆರಂಭಗೊಂಡು ಲೋಕೋಪಯೋಗಿ, ನೀರಾವರಿ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಚಿವರನ್ನು ಸತತ ಭೇಟಿಯಾಗುತ್ತಲೇ ತಾಲೂಕಿನ ಸಮಸ್ಯೆಗಳ ಕುರಿತು ಮಾಹಿತಿ ನೀಡಿ ಅನುದಾನ ಪಡೆಯತ್ತಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್, ಮುಖಂಡರಾದ ಲೋಕೇಶ್, ಬಸವಲಿಂಗಯ್ಯ, ಗೌರಿಶಂಕರ್(ಮಧು ಬಿಳಿಕೆರೆ), ಅಸ್ವಾಳ್ ಕೆಂಪೇಗೌಡ, ಹುಸೇನ್ಪುರ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಅವಿನಾಶ್, ಶಿಲ್ಪಿತ್, ಮೀನಾಕ್ಷಿ, ದಿವ್ಯಾ, ಹೇಮಂತ್ಕುಮಾರ, ಹರವೆ ಶ್ರೀಧರ್, ಪಿಡಿಒ ಛಾಯಾದೇವಿ, ಬೋಳನಹಳ್ಳಿ, ಚೋಳೇನಹಳ್ಳಿ ಗ್ರಾಮದ ಮುಖಂಡರು ಮತ್ತು ಸ್ಥಳೀಯ ಜನಪ್ರತಿನಿಧಿಗಳು, ಹಾಲು ಉತ್ಪಾದಕರ ಸಂಘದ ಸದಸ್ಯರು ಹಾಜರಿದ್ದರು.
