ಯಡ್ರಾಮಿ: ಹನ್ನೊಂದು ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಗೈದ ಘಟನೆ ತಾಲೂಕು ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ನಡೆದಿದ್ದು, ಖಾಸಗಿ ಶಾಲಾ ಮುಖ್ಯಸ್ಥ ಹಾಜಿಮಲಂಗ ಗಣಿಯಾರನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಖಂಡಿಸಿ, ಉಘ್ರ ಶಿಕ್ಷೆಗೆ ಆಗ್ರಹಿಸಿ ತಾಲೂಕಿನ ವಿವಿಧ ಸಂಘಟನೆಗಳು ಯಡ್ರಾಮಿ ಬಂದ್ ಮಾಡಿ ಮಂಗಳವಾರ ಬೆಳಗ್ಗೆಯಿಂದಲೇ ಪ್ರತಿಭಟನೆ ಆರಂಭಿಸಿದ್ದು, ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಶಾಲೆಯೊಂದರಲ್ಲಿ ಸಂತ್ರಸ್ತ ಮಗು ಕಳೆದ ಎರೆಡು- ಮೂರು ವರ್ಷಗಳಿಂದ ಓದುತ್ತಿದ್ದಾಳೆ. ಸದ್ಯ ಮಗು ಐದನೇ ತರಗತಿ ಓದುತ್ತಿದ್ದು, ಶಾಲೆಯ ಮುಖ್ಯಸ್ಥ ಹಾಜಿಮಲಂಗ ಗಣಿಯಾರ ಕಳೆದ ಎರಡು ದಿನದ ಹಿಂದೆ ಶಾಲೆಯಲ್ಲಿ ಅತ್ಯಾಚಾರಗೈದಿದ್ದಾನೆ.
ಇದಲ್ಲದೆ ವಿಷಯವನ್ನು ಮನೆಯಲ್ಲಿ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಮಗು ಮನೆಯಲ್ಲಿ ತಿಳಿಸಲು ಹಿಂಜರಿದಿದೆ. ನಂತರ ಪಕ್ಕದ ಮನೆಯವರ ಮುಂದೆ ಮಗು ವಿಷಯ ತಿಳಿಸಿದ್ದು, ಅವರು ಮಗುವಿನ ತಂದೆ,ತಾಯಿಗೆ ವಿಷಯ ತಿಳಿಸಿದ್ದಾರೆ. ನಂತರ ಸಂತ್ರಸ್ತ ಮಗುವಿನ ಪಾಲಕರು ತಮ್ಮ ಸಮುದಾಯದ ಎಲ್ಲ ಹಿರಿಯರೊಂದಿಗೆ ಚರ್ಚಿಸಿ ಸೋಮವಾರ ಸಾಯಂಕಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ಪಿಎಸ್ಸೈ ವಿಶ್ವನಾಥ ಮುದರೆಡ್ಡಿ ಹಾಗೂ ಅವರ ತಂಡ ಆರೋಪಿಯನ್ನು ಸೋಮವಾರ ರಾತ್ರಿ ಬಂದಿಸಿದ್ದಾರೆ.
ಈ ವಿಷಯ ತಾಲೂಕಿನಾದ್ಯಂತ ಹರಡಿದ್ದು, ಮಂಗಳವಾರ ಬೆಳಿಗ್ಗೆ ಬಂಜಾರಾ ಸಮುದಾಯ ಸೇರದಂತೆ ಪಟ್ಟಣದ ಎಲ್ಲ ಸಮುದಾಯ ಹಾಗೂ ಎಲ್ಲ ಸಂಘಟನೆಗಳು ಸೇರಿಕೊಂಡು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಪಟ್ಟಣ ಬಿಗುವಿನಿಂದ ಕೂಡಿದ್ದು, ಮುಂಜಾಗ್ರತೆಗಾಗಿ ಬಿಇಓ ವೀರಣ್ಣ ಬೊಮ್ಮನಳ್ಳಿ ಸ್ಥಳಿಯ ಶಾಲೆಗಳಿಗೆ ರಜೆ ನೀಡಿದ್ದಾರೆ.