ಕುಡಚಿ: ನೈಋತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಕುಡಚಿ, ಚಿಂಚಲಿ, ರಾಯಬಾಗ, ಉಗಾರ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕುಡಚಿ ಶಾಸಕ ಪಿ.ರಾಜೀವ್ ಹೇಳಿದ್ದಾರೆ.
ಕುಡಚಿ ಪಟ್ಟಣದ ರೈಲು ನಿಲ್ದಾಣದಲ್ಲಿ ಶುಕ್ರವಾರ ಬೆಳಗಾವಿ- ಶೇಡಬಾಳ (ಜನ್ಸಾಧಾರಣ್) ಪ್ಯಾಸೆಂಜರ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು. ಬೆಳಗಾವಿ ಸಂಸದರಾದ ಸುರೇಶ ಅಂಗಡಿ ಅವರು ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ಕರ್ನಾಟಕ ರೈಲ್ವೆ ಯೋಜನೆಗಳಿಗೆ ವೇಗ ದೊರೆತಿದೆ ಎಂದರು. ರಾಯಬಾಗ ಶಾಸಕ ಡಿ.ಎಂ. ಐಹೊಳೆ ಮಾತನಾಡಿ, ಪ್ಯಾಸೆಂಜರ್ ರೈಲ್ವೆಯನ್ನು ಬೆಳಗಾವಿ- ಶೇಡಬಾಳವರೆಗೆ ಓಡಿಸುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಲ್ಲಿ ಮನವಿ ಮಾಡಿದಾಗ ಅದಕ್ಕೆ ಸ್ಪಂದಿಸಿದ್ದಾರೆ. ಇದರಿಂದ ಸ್ಥಳೀಯರಿಗೆ ಅನುಕೂಲವಾಗಿದೆ ಎಂದರು.
ರೈಲ್ವೆ ಇಲಾಖೆ ಹುಬ್ಬಳಿ ವಿಭಾಗದ ವ್ಯವಸ್ಥಾಪಕ ಅರವಿಂದ ಮಾಲಕೇಡಿ, ರೈಲ್ವೆ ಅಧಿಕಾರಿ ಐ.ಎಸ್. ಸೇಂತಿಲಕುಮಾರ, ಪಿಆರ್ಒ ಪ್ರಾಣೇಶ, ತುರಾಭದಿನ್ ಜಿನ್ನಾಬಡೆ, ಕುಯ್ಯಂ ಪಟಾಯಿಟ, ರಾವಸಾಬ ಪಾಟೀಲ, ಸೊಹೇಲ್ ಜಿನ್ನಾಬಡೆ, ಇಕ್ಬಾಲ ಕೋಲಿ, ಅಣ್ಣಾಸಾಬ ಖೇಮಲಾಪುರೆ, ಮಹಿದಿನ್ ಸಾಯವಾಟೆ, ಸರ್ಫರಾಜ ಕರೀಂಖಾನ, ಶ್ರೀಶೈಲ ದರೂರೆ, ಅಂಕುಶ ಜಾಧವ ಉಪಸ್ಥಿತರಿದ್ದರು.
ಬೆಳಗಾವಿ-ಶೇಡಬಾಳ ಮಾರ್ಗದ ಜನ್ಸಾಧಾರಣ್ ಪ್ಯಾಸೆಂಜರ್ ರೈಲು ಬೆಳಗಾವಿಯಿಂದ ಬೆಳಗ್ಗೆ 7.10ಕ್ಕೆ ಬಿಟ್ಟು, ಬೆಳಗ್ಗೆ 9.20ಕ್ಕೆ ಶೇಡಬಾಳ ತಲುಪಲಿದೆ. ಸಂಜೆ 4.15ಕ್ಕೆ ಶೇಡಬಾಳ ನಿಲ್ದಾಣದಿಂದ ಹೊರಟು, ಸಂಜೆ 6 ಗಂಟೆಗೆ ಬೆಳಗಾವಿ ತಲುಪಲಿದೆ.