ತುಮಕೂರು: 5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.
ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಭಾನುವಾರ ನಳಂದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಮಗುವಿಗೆ ಪೋಲಿಯೋ ಹನಿ ಹಾಕಿ ಮಾತನಾಡಿದರು.
ಈ ಹಿಂದೆ ಜನರನ್ನು ಕಾಡುತ್ತಿದ್ದ ಪ್ಲೇಗ್, ಕಾಲರಾ, ಸಿಡುಬು ಮಾರಕ ರೋಗಗಳಿಂದ ಮುಕ್ತ ಮಾಡುವಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಹಾಗೆಯೇ ಪೋಲಿಯೋ ರೋಗದಿಂದ ರಾಷ್ಟ್ರ ಮುಕ್ತವಾಗಿದೆ. ರೋಗ ಬರುವುದಕ್ಕೂ ಮುನ್ನ ಅದನ್ನು ತಡೆಗಟ್ಟಲು ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮ ಉತ್ತಮವಾಗಿದೆ ಎಂದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಪೋಲಿಯೋ ತಡೆಗಟ್ಟುವ ನಿಟ್ಟಿನಲ್ಲಿ ಪೋಲಿಯೋ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಶೇ.100 ಅಭಿಯಾನ ಯಶಸ್ವಿಯಾಗಿದೆ. ಆರೋಗ್ಯ ಇಲಾಖೆಯ ಯಶಸ್ವಿಯಿಂದಾಗಿ ಪ್ರತಿಯೊಬ್ಬರೂ ಪಲ್ಸ್ ಪೋಲಿಯೋ ಹಾಕಿಸಿಕೊಳ್ಳುತ್ತಿದ್ದಾರೆ. ಪಲ್ಸ್ ಪೋಲಿಯೋ ಬಗ್ಗೆ ಎಲ್ಲ ಪಾಲಕರಿಗೂ ಅರಿವು ಮೂಡಿದೆ ಎಂದರು.
ಡಿಎಚ್ಒ ಡಾ.ಬಿ.ಆರ್.ಚಂದ್ರಿಕಾ ಮಾತನಾಡಿ, ದೇಶದಲ್ಲಿ 2011ರ ಜನವರಿಯಿಂದ ಹೊಸ ಪೋಲಿಯೋ ಪ್ರಕರಣ ಕಂಡುಬಂದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಪೋಲಿಯೋ ಮುಕ್ತ ರಾಷ್ಟ್ರ ಎಂಬ ಪ್ರಮಾಣ ಪತ್ರವನ್ನು 2014 ಮಾರ್ಚ್ 27ರಂದು ನಮ್ಮ ದೇಶ ದೊರೆತಿದೆ ಎಂದರು. ಆದರೆ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಆಪ್ಘಾನಿಸ್ತಾನ ದೇಶಗಳಲ್ಲಿ ಇನ್ನು ಪೋಲಿಯೋ ಪ್ರಕರಣಗಳು ನಿರ್ಮೂಲನೆವಾಗಿಲ್ಲದ ಕಾರಣ ನಮ್ಮ ದೇಶದಲ್ಲಿ ಇನ್ನು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳತ್ತಿದ್ದೇವೆ ಎಂದರು.
ಜಿಪಂ ಉಪಾಧ್ಯಕ್ಷೆ ಶಾರದಾ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿ ಕೃಷ್ಣ, ಜಿಪಂ ಸಿಇಒ ಶುಭಾಕಲ್ಯಾಣ್, ಡಿಡಿಪಿಐ ಎಂ.ಆರ್.ಕಾಮಾಕ್ಷಿ, ಜಿಲ್ಲಾ ಆರ್ಸಿಹೆಚ್ಅಧಿಕಾರಿ ಡಾ.ಜಿ.ಕೇಶವ್ರಾಜ್, ಪಾಲಿಕೆ ಸದಸ್ಯರಾದ ವಿಷ್ಣುವರ್ಧನ್, ಮಲ್ಲಿಕಾರ್ಜುನ್, ನೋಡಲ್ ಅಧಿಕಾರಿ ರೇಖಾ, ರೋಟರಿಯನ್ ಕುಮಾರ್ ಮತ್ತಿತರರು ಇದ್ದರು.