ಚಿಕ್ಕಮಗಳೂರು: ರಾಜ್ಯದಲ್ಲಿ ಉಸ್ತುವಾರಿ ಸಚಿವರು ತಮಗೆ ಹಂಚಿಕೆ ಮಾಡಿರುವ ಜಿಲ್ಲೆಗಳಿಗೆ ಅತಿಥಿಗಳಾಗಿದ್ದಾರೆ. ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ. ಗುತ್ತಿಗೆದಾರರು ಮಾಡಿರುವ ಕಾಮಗಾರಿಯ ಹಣವನ್ನೂ ಬಿಡುಗಡೆ ಮಾಡುತ್ತಿಲ್ಲ. ಒಟ್ಟಾರೆಯಾಗಿ ರಾಜ್ಯದಲ್ಲಿ ಅಭಿವೃದ್ಧಿ ಆಮೆಗತಿಯಲ್ಲಿ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನೂತನವಾಗಿ ಸಂಸತ್ ಹಾಗೂ ವಿಧಾನಪರಿಷತ್ಗೆ ಆಯ್ಕೆಯಾದ ನಾಯಕರಿಗೆ ಆಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜನರಿಗೆ ರಕ್ಷಣೆಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕೊಲೆಗಳು ಸಾಮಾನ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನಲ್ಲಿ ಡೆಂಘೆ ಪ್ರಕರಣಗಳು ದಿನೇದಿನೇ ಹೆಚ್ಚಾಗಲಾರಂಭಿಸುತ್ತಿವೆ. ಆದರೆ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸುತ್ತಿಲ್ಲ. ಮಲ್ಲೇನಹಳ್ಳಿ ಭಾಗದಲ್ಲಂತೂ ಡೆಂಘೆ ವಿಪರೀತವಾಗಿ ಹೆಚ್ಚಾಗಿದೆ. ಆದರೂ ಜನಪ್ರತಿನಿಧಿಗಳು ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.
ನೂತನ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ. ಮತದಾರರು ಎನ್ಡಿಎ ನೇತೃತ್ವದ ಸರ್ಕಾರ ಬೆಂಬಲಿಸಿ ನರೇಂದ್ರ ಮೋದಿ ಅವರು ೩ನೇ ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.
ಉಡುಪಿಚಿಕ್ಕಮಗಳೂರು ಕ್ಷೇತ್ರವು ಮಲೆನಾಡು ಹಾಗೂ ಕರಾವಳಿ ಭಾಗವನ್ನೊಳಗೊಂಡಿದ್ದು, ಇಲ್ಲಿನ ಸಮಸ್ಯೆಗಳು ವಿಭಿನ್ನ. ಜಿಲ್ಲೆಯಲ್ಲಿ ಬೆಳೆಗಾರರು, ಅರಣ್ಯ ಮತ್ತು ಭೂಮಿಗೆ ಸಂಬAಧಿಸಿದ ಸಮಸ್ಯೆಗಳ ಅರಿವಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ಮೂಲಕ ಸ್ಪಂದಿಸುತ್ತೇನೆ ಎಂದು ತಿಳಿಸಿದರು.
ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕಾಂಗ್ರೆಸ್ಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಜನರು ಹಾಗೂ ಶಿಕ್ಷಕರಿಗೆ ಸಂಬAಧಿಸಿದAತೆ ಸಮಸ್ಯೆಗಳನ್ನು ಸದನದಲ್ಲಿ ಚರ್ಚಿಸಿ, ಪರಿಹಾರ ನೀಡಲು ಬದ್ಧನಿರುವೆ. ಹಾಗೆಯೇ ನಿಮ್ಮೆಲ್ಲರ ಧ್ವನಿಯಾಗಿ ಸದನದ ಒಳಗೆ ಮತ್ತು ಹೊರಗೆ ಪಾವಿತ್ರö್ಯತೆಯನ್ನು ಕಾಪಾಡುವೆ ಎಂದು ಭರವಸೆ ನೀಡಿದರು.
ನೈಋತ್ಯ ಪದವೀಧರ ಕ್ಷೇತ್ರಕ್ಕೆ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಇದು ಎಲ್ಲರ ಪ್ರಯತ್ನದ ಗೆಲುವು. ಕಾರ್ಯಕರ್ತರ ಶಕ್ತಿಯ ಗೆಲುವು. ಇದು ಪದವೀಧರರ ಗೆಲುವು. ನಮ್ಮ ಪಕ್ಷದ ಸಂಘಟನೆ ಕೇಂದ್ರ ಬಿಂದುವೇ ಕಾರ್ಯಕರ್ತರು. ಅವರ ಹುಮ್ಮಸ್ಸು, ಹುರುಪು, ಯಾವ ಪಕ್ಷದಲ್ಲೂ ಕಾಣಲು ಸಾಧ್ಯವಿಲ್ಲ. ನಿಷ್ಟಾವಂತ ಕಾರ್ಯಕರ್ತರೂ ಬೆಳೆಯಬೇಕು. ಅವರನ್ನು ಬೆಳೆಸಬೇಕು. ಹಾಗೆಯೇ ಜನರು ಹಾಗೂ ಪದವೀಧರ ಮತದಾರರು ಪ್ರೀತಿ, ವಿಶ್ವಾಸದಿಂದ ಹರಸಿದ್ದಾರೆ. ಅವರ ನಿರೀಕ್ಷೆಗಳಿಗೆ ತಕ್ಕಂತೆ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಮಾತು ಸಾಧನೆ ಆಗಬಾರದು. ಸಾಧನೆ ಮಾತಾಗಬೇಕು. ಈ ನಿಟ್ಟಿನಲ್ಲಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವು ಅನುಸರಿಸಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಪಕ್ಷಕ್ಕೆ ಸೋಲಾಯಿತು. ಇದಕ್ಕೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಆದರೆ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಗೆಲ್ಲಿಸುವ ಮೂಲಕ ಕಾರ್ಯಕರ್ತರು ಹಾಗೂ ಮತದಾರರು ಮನ್ನಣೆ ನೀಡಿದ್ದಾರೆ. ವಿದ್ಯಾವಂತರು, ಪ್ರಜ್ಞಾವಂತರು ಹಾಗೂ ಜನ ಸಾಮಾನ್ಯರ ನಿರೀಕ್ಷೆಗಳನ್ನು ಚುನಾಯಿತರು ಈಡೇರಿಸಬಲ್ಲರು ಎಂಬ ವಿಶ್ವಾಸವಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ, ಬಿಜೆಪಿ ಪ್ರಮುಖರಾದ ರಾಜಪ್ಪ, ಕೋಟೆ ರಂಗನಾಥ್, ನಗರ ಅಧ್ಯಕ್ಷ ಪುಷ್ಪರಾಜ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಬಿಜೆಪಿ ಮುಖಂಡರಾದ ಪ್ರೇಮ್ ಕುಮಾರ್ ಮತ್ತಿತರರಿದ್ದರು.