ಬಿಲಾಸ್ಪುರ: ಮಾವೋವಾದಿ ಪ್ರಭಾವಿತ ಛತ್ತೀಸ್ಗಢದ ದಾಂತೇವಾಡ ಜಿಲ್ಲೆಗೆ ಸೇರಿದ ವಿಕಲಾಂಗ ಬಾಲಕನೊಬ್ಬನ ವಿಡಿಯೋವನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬುಧವಾರ ಶೇರ್ ಮಾಡಿಕೊಂಡ ಬಳಿಕ ಹಲವಾರು ಮಂದಿಗೆ ಬಾಲಕ ಸ್ಫೂರ್ತಿಯ ಚಿಲುಮೆಯಾಗಿದ್ದಾನೆ.
ವಿಕಲಾಂಗ ಬಾಲಕ ಮದ್ದಾ ರಾಮ್ ಕವಾಸಿ(13) ದಾಂತೇವಾಡ ಜಿಲ್ಲೆಯ ಬಸ್ತಾರ್ನಲ್ಲಿನ ಕತೆಕಲ್ಯಾಣ್ ಏರಿಯಾದಲ್ಲಿ ಬರುವ ಸಣ್ಣ ಗ್ರಾಮವೊಂದರಲ್ಲಿ ಜನಿಸಿದ್ದಾನೆ. ಸದ್ಯ 7ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ದಿಗ್ಗಜ ಸಚಿನ್ ಗಮನ ಸೆಳೆಯಲು ಕಾರಣವಾಗಿದ್ದೇ ಕ್ರಿಕೆಟ್ ಎಂಬ ಶಕ್ತಿ.
ಮಗುವಾಗಿದ್ದಾಗಲೇ ಪೊಲಿಯೋದಿಂದ ತನ್ನೆರಡು ಕಾಲುಗಳನ್ನು ಕಳೆದುಕೊಂಡಿರುವ ಕವಾಸಿಗೆ ಕ್ರಿಕೆಟ್ ಅಂದರೆ ಪ್ರಾಣ. ಅಂಗವಿಕಲನಾಗಿದ್ದರೂ ಆತ ಕ್ರಿಕೆಟ್ ಆಡುವ ಪರಿಯನ್ನು ನೋಡಿ ಸಚಿನ್ ಆಶ್ಚರ್ಯ ಚಕಿತರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಚಿನ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡು “ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿರುವ ಮುದ್ದಾ ರಾಮ್ ಅವರ ಸ್ಫೂರ್ತಿದಾಯಕ ವಿಡಿಯೋ ಮೂಲಕ ನಿಮ್ಮ ಹೊಸ ವರ್ಷವನ್ನು ಆರಂಭಿಸಿ,ಈ ವಿಡಿಯೋ ನನ್ನ ಹೃದಯವನ್ನು ಗೆದ್ದಿದೆ. ನಿಮ್ಮ ಹೃದಯನ್ನು ಗೆಲ್ಲಲಿದೆ ಎಂದು ಖಚಿತ ವ್ಯಕ್ತಪಡಿಸುತ್ತೇನೆಂದು” ಬರೆದುಕೊಂಡಿದ್ದರು.
ಸಚಿನ್ ತನ್ನ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಬಾಲಕ ಕವಾಸಿ, ನನಗೆ ಹೆಮ್ಮೆ ಅನಿಸುತ್ತಿದೆ. ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೆಯೇ ನಮ್ಮ ಗ್ರಾಮಕ್ಕೆ ಆಹ್ವಾನ ಮಾಡಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾನೆ. ಅಲ್ಲದೆ, ವೈದ್ಯನಾಗಿ ತಮ್ಮ ಸಮುದಾಯಕ್ಕೆ ಸಹಾಯ ಮಾಡುವ ಮನೋಭಾವವನ್ನು ಬಾಲಕ ಹೊಂದಿದ್ದಾನೆ.
ಬಾಲಕನ ವಿಚಾರ ತಿಳಿದು ಶಾಲೆಗೆ ಭೇಟಿ ನೀಡಿದ ಬ್ಲಾಕ್ ಎಜುಕೇಶನ್ ಆಫೀಸರ್ ಗೋಪಾಲ್ ಪಾಂಡೆ ಇದೊಂದು ಹೆಮ್ಮೆಯ ಕ್ಷಣ ಎಂದಿದ್ದಾರೆ. ಅಲ್ಲದೆ, ಕವಾಸಿಗೆ ಕ್ರಿಕೆಟ್ ಕಿಟ್ ಅನ್ನು ಶಾಲಾ ಆಡಳಿತ ವರ್ಗ ನೀಡಿದೆ. (ಏಜೆನ್ಸೀಸ್)
Start your 2020 with the inspirational video of this kid Madda Ram playing cricket 🏏 with his friends.
— Sachin Tendulkar (@sachin_rt) January 1, 2020
It warmed my heart and I am sure it will warm yours too. pic.twitter.com/Wgwh1kLegS